ಬಿಜೆಪಿಯಲ್ಲಿ ಕಚ್ಚಾಟ: ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಸ್ಥಿತಿ, ಪಾಟೀಲ

Kannadaprabha News   | Asianet News
Published : Jun 28, 2021, 01:13 PM ISTUpdated : Jun 28, 2021, 01:31 PM IST
ಬಿಜೆಪಿಯಲ್ಲಿ ಕಚ್ಚಾಟ: ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಸ್ಥಿತಿ, ಪಾಟೀಲ

ಸಾರಾಂಶ

* ಬಿಜೆಪಿಯಲ್ಲಿ ಒಬ್ಬರ ಕಾಲು ಹಿಡಿದು ಇನ್ನೊಬ್ಬರನ್ನು ಜಗ್ಗುವ ಕೆಲಸ * ಸಂವಿಧಾನಾತ್ಮಕವಾಗಿ ಆಡಳಿತ ನಡೆಯದಿದ್ದರೆ, ರಾಜ್ಯಪಾಲರು ಮಧ್ಯೆ ಪ್ರವೇಶಿಸಬೇಕು  * ಬಿಜೆಪಿಯ ಆಂತರಿಕ ಕಚ್ಚಾಟದಿಂದ ರಾಜ್ಯದ ಜನತೆ ತೊಂದರೆ   

ಬಾಗಲಕೋಟೆ(ಜೂ.28): ರಾಜ್ಯದ ಬಿಜೆಪಿಯಲ್ಲಿನ ಆಡಳಿತದ ಕಚ್ಚಾಟವನ್ನು ಗಮನಿಸಿದರೆ ಆರ್ಟಿಕಲ್‌-356 ಜಾರಿ ಮಾಡುವ ಪರಿಸ್ಥಿತಿ ರಾಜ್ಯದಲ್ಲಿ ಉದ್ಭವವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಪಾಲರು ಸೂಕ್ತ ಕ್ರಮಕೈಗೊಳ್ಳುವುದು ಅನಿವಾರ್ಯ ಎಂದು ಪ್ರತಿಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ತಿಳಿಸಿದ್ದಾರೆ. 

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಒಬ್ಬರ ಕಾಲು ಹಿಡಿದು ಇನ್ನೊಬ್ಬರನ್ನು ಜಗ್ಗುವ ಕೆಲಸ ನಡೆಯುತ್ತಿದೆ. ಇದು ಆಡಳಿತದ ಮೇಲೆ ದುಷ್ಪರಿಣಾಮ ಬೀರಿದೆ. ಸಂವಿಧಾನಾತ್ಮಕವಾಗಿ ಆಡಳಿತ ನಡೆಯದಿದ್ದರೆ, ರಾಜ್ಯಪಾಲರು ಮಧ್ಯೆ ಪ್ರವೇಶಿಸಬೇಕು ಹಾಗೂ ತಮ್ಮ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದರು.

ಬಿಜೆಪಿಯ ಆಂತರಿಕ ಕಚ್ಚಾಟದಿಂದ ರಾಜ್ಯದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಮುಖ್ಯಮಂತ್ರಿಗಳನ್ನು ಬದಲಾಯಿಸಬೇಕೆಂಬ ಅವರ ಹೋರಾಟ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಮುಖ್ಯಮಂತ್ರಿಗಳ ವಿರುದ್ಧ ಶಾಸಕ ಯತ್ನಾಳ ಹಾಗೂ ಪರಿಷತ್‌ ಸದಸ್ಯ ಎಚ್‌.ಸಿ.ವಿಶ್ವನಾಥ ನೇರವಾಗಿ ಆರೋಪಿಸುತ್ತಿದ್ದಾರೆ. ಇದನ್ನು ಗಮನಿಸಿದರೆ ರಾಜ್ಯಪಾಲರು ಕ್ರಮ ವಹಿಸುವುದು ಅಗತ್ಯವಾಗಿದೆ ಎಂದರು.

'ಉತ್ತರ ಕರ್ನಾಟಕದ ಹಿರಿಯ ರಾಜಕಾರಣಿ SR ಪಾಟೀಲ ಸಿಎಂ ಆಗ್ಲಿ'

ಸಿಎಲ್‌ಪಿ ಸಭೆಯಲ್ಲಿ ಅಂತಿಮ:

ಸದ್ಯ ಬಿಎಸ್‌ವೈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷ ಅ​ಧಿಕಾರಕ್ಕೆ ಬರಲು 113 ಸ್ಥಾನಗಳನ್ನು ಗೆಲ್ಲಬೇಕು. ನಿಶ್ಚಿತವಾಗಿಯೂ ಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅ​ಧಿಕಾರಕ್ಕೆ ಬರುತ್ತದೆ. ಆನಂತರ ನಡೆಯುವ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂದು ನಿರ್ಧಾರವಾಗುತ್ತದೆ. ಆ ಸಂದರ್ಭದಲ್ಲಿ ಪಕ್ಷದ ವರಿಷ್ಠರು ಮಾರ್ಗದರ್ಶನ ಮಾಡುತ್ತಾರೆ. ಇಂದು ಮುಖ್ಯಮಂತ್ರಿಗಳು ಅವರಾಗಬೇಕು, ಇವರಾಗಬೇಕು ಎಂದು ಹೇಳುವವರು ಅಂದು ಸಹ ಶಾಸಕಾಂಗ ಪಕ್ಷದ ಸದಸ್ಯರಾಗಿರಬೇಕು ಎಂದು ಸೂಕ್ಷ್ಮವಾಗಿ ಹೇಳಿದರು.

ರಾಜಕಾರಣದಲ್ಲಿ ಧರ್ಮ ಇರಬೇಕು:

ಹಲವು ದಿನಗಳಿಂದ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಮಠಗಳಿಗೆ ಭೇಟಿ ನೀಡುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಮಠಗಳು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿವೆ. ಮನುಷ್ಯ ಕುಲದ ಒಳತಿಗಾಗಿ ಮಠಾ​ಧೀಶರು ಶ್ರಮಿಸುತ್ತಿದ್ದಾರೆ. ಸರ್ವರನ್ನು ಸಮಾನವಾಗಿ ಕಾಣುವ ಮಠಾ​ಧೀಶರನ್ನು ಭೇಟಿ ಮಾಡುವುದು ಖುಷಿ ತಂದಿದೆ ಎಂದು ತಿಳಿಸಿದರು.

ರಾಜಕಾರಣದಲ್ಲಿ ಧರ್ಮ ಇರಬೇಕು. ಇದರಿಂದ ರಾಜಕಾರಣಿಗಳು ಧರ್ಮಿಷ್ಟರಾಗಿ ನೀತಿಯಿಂದ ಇರಲು ಸಾಧ್ಯವಾಗುತ್ತದೆ. ಆದರೆ ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಮೇಲ್ಮನೆ ಪ್ರತಿಪಕ್ಷದ ನಾಯಕ ಎಸ್‌.ಆರ್‌ ಪಾಟೀಲ ತಿಳಿಸಿದ್ದಾರೆ. 
 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ