'ಮೋದಿ ದುಬಾರಿ ವಿಮಾನದಲ್ಲಿ ಓಡಾಡಿ ಸರ್ಕಾರದ ಖರ್ಚು ಜನರ ಮೇಲೆ ಹೇರ್ತಾರೆ'

Kannadaprabha News   | Asianet News
Published : Jul 02, 2021, 02:51 PM ISTUpdated : Jul 02, 2021, 03:12 PM IST
'ಮೋದಿ ದುಬಾರಿ ವಿಮಾನದಲ್ಲಿ ಓಡಾಡಿ ಸರ್ಕಾರದ ಖರ್ಚು ಜನರ ಮೇಲೆ ಹೇರ್ತಾರೆ'

ಸಾರಾಂಶ

* ಅನಗತ್ಯ ಖರ್ಚಿನ ಬಗ್ಗೆ ಜನರಿಗೆ ಮನವರಿಕೆ * ರಾಹುಲ್‌ ಹಾಗೂ ಪ್ರಿಯಾಂಕಾಗೆ ಇನ್ನೂ ರಾಜಕೀಯ ಅನುಭವ ಬರಬೇಕು * ಸಾಮಾಜಿಕ ಜಾಲತಾಣದ ಬಳಕೆಯಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿಯವರೇ ಮುಂದು   

ಬೆಳಗಾವಿ(ಜು.02): ಪ್ರಸ್ತುತ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಈಗಾಗಲೇ ದೇಶಾದ್ಯಂತ 10 ಕೋಟಿ ಉದ್ಯೋಗವನ್ನು ನಾವು ಕಳೆದುಕೊಂಡಿದ್ದೇವೆ. ಅದನ್ನು ಮರಳಿ ಸೃಷ್ಟಿ ಮಾಡುವುದೇ ದೊಡ್ಡ ಸಾಹಸ. ಮೊದಲು ಇದ್ದಿದ್ದನ್ನೇ ಪುನರ್‌ ಸೃಷ್ಟಿಸುವುದೇ ಮುಂದಿನ ಸರ್ಕಾರಕ್ಕೆ ದೊಡ್ಡ ಸವಾಲಾಗಲಿದೆ ಎಂದು ನಿರುದ್ಯೋಗದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ. 

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದವರು 8 ಸಾವಿರ ಕೋಟಿ ಖರ್ಚು ಮಾಡಿ ಸಂಸತ್‌ ಭವನ ಕಟ್ಟುತ್ತಿದ್ದಾರೆ. ಪ್ರಧಾನಿ ಮೋದಿ ಅವರು 8 ಸಾವಿರ ಕೋಟಿ ವಿಮಾನದಲ್ಲಿ ಓಡಾಡುತ್ತಿದ್ದಾರೆ. ಆ ಖರ್ಚನ್ನು ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಮೇಲೆ ಹೇರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪೆಟ್ರೋಲ್‌, ಡೀಸೆಲ್‌ ಸೇರಿ ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಇದನ್ನು ವಿರೋಧಿಸಿ ಕಾಂಗ್ರೆಸ್‌ ಪಕ್ಷದಿಂದ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ನಮ್ಮ ಶಕ್ತಿ ಮೀರಿ ಹೋರಾಟ ಮಾಡುತ್ತಿದ್ದೇವೆ. ಜನರಿಗೆ ಮನವಿಯನ್ನೂ ಮಾಡುತ್ತಿದ್ದೇವೆ. ಆದರೆ, ಜನ ಕೂಡ ಹೊರಗೆ ಬಂದು ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ?: ಸತೀಶ್‌ ಜಾರಕಿಹೊಳಿ ಹೇಳಿದ್ದಿಷ್ಟು

ಸಾಮಾಜಿಕ ಜಾಲತಾಣದ ಬಳಕೆಯಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿಯವರೇ ಮುಂದಿದ್ದಾರೆ. ನಾವು ಕೂಡ ನಮ್ಮ ಕಾರ್ಯರ್ತರಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡುತ್ತಿದ್ದೇವೆ, ಕಾರ್ಯಾಗಾರಗಳನ್ನು ನಡೆಸುತ್ತಿದ್ದೇವೆ. ಅವರ ಸರಿಸಮಾನವಾಗಿ ಸ್ಪರ್ಧಿಸಲು ಎಲ್ಲ ರೀತಿಯಲ್ಲಿ ಶ್ರಮಿಸುತ್ತಿದ್ದೇವೆ ಎಂದರು.

ರಮೇಶ ಜಾರಕಿಹೊಳಿ ಅವರ ಬದಲಾಗಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲಾಗುವುದೇ ಎಂಬ ಪ್ರಶ್ನೆಗೆ, ಆ ಬಗ್ಗೆ ನನಗೆ ಗೊತ್ತಿಲ್ಲ. ಅದು ಅವರ ಪಕ್ಷದ ಆಂತರಿಕ ವಿಚಾರ ಎಂದ ಅವರು, ಲಖನ್‌ ಜಾರಕಿಹೊಳಿ ಕಳೆದ ಲೋಕಸಭಾ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿ ಬೆಂಬಲಿಸಿದ್ದಾರೆ. ಸದ್ಯ ಅವರು ಕಾಂಗ್ರೆಸ್‌ ಪಕ್ಷದಲ್ಲಿಲ್ಲ ಎಂದು ತಿಳಿಸಿದರು.

ರಾಜಕೀಯವೆಂದರೆ ಸುಲಭವಲ್ಲ. ಮಕ್ಕಳಾದ ರಾಹುಲ್‌ ಹಾಗೂ ಪ್ರಿಯಾಂಕಾಗೆ ಇನ್ನೂ ರಾಜಕೀಯ ಅನುಭವ ಬರಬೇಕು. ಆ ನಂತರ ಚುನಾವಣೆಗೆ ಅವರು ಸ್ಪರ್ಧಿಸುವ ಬಗ್ಗೆ ವಿಚಾರ ಮಾಡೋಣ ಎಂದರು.

ಭೂತರಾಮನಹಟ್ಟಿ ಕಿರು ಮೃಗಾಲಯದ ಅಭಿವೃದ್ಧಿಗೆ 5 ವರ್ಷಗಳ ಯೋಜನೆ ರೂಪಿಸಲಾಗಿದೆ. ಸದ್ಯ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಮೃಗಾಲಯದ ಸಂಪೂರ್ಣ ಅಭಿವೃದ್ಧಿಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈಗಾಗಲೇ ಅಲ್ಲಿ ಶೌಚಾಲಯ, ವಾಹನಗಳ ಪಾರ್ಕಿಂಗ್‌, ರೆಸ್ಟೋರೆಂಟ್‌ ನಿರ್ಮಿಸಲಾಗಿದೆ ಎಂದು ತಿಳಿಸಿದರು.
 

PREV
click me!

Recommended Stories

ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು
ರೈತ, ಆಟೋ ಚಾಲಕರ ಹೆಣ್ಮಕ್ಕಳಿಗೆ ಗವಿಮಠದಿಂದ ಫ್ರೀ ಕಾಲೇಜು, ಹಾಸ್ಟೆಲ್‌