‘ಗೆದ್ದವರಿಗೆ ಮಂತ್ರಿಗಿರಿ ನೀಡದಿದ್ದರೆ ಸಿಎಂಗೆ ವಚನಭ್ರಷ್ಟ ಹಣೆಪಟ್ಟಿ’

By Kannadaprabha NewsFirst Published Jan 25, 2020, 7:23 AM IST
Highlights

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನೂತನ ಶಾಸಕರಿಗೆ ಸಚಿವ ಸ್ಥಾನ ನೀಡದಿದ್ದಲ್ಲಿ ವಚನ ಭ್ರಷ್ಟ ಎನಿಸಿಕೊಳ್ಳಲಬೇಕಾಗುತ್ತದೆ ಎಂದು ಮುಖಂಡರೋರ್ವರು ನೂತನ ಬಿಜೆಪಿ ಶಾಸಕರ ಪರ ಬ್ಯಾಟ್ ಬೀಸಿದ್ದಾರೆ. 

ತುಮಕೂರು [ಜ.25]: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ವಚನಭ್ರಷ್ಟಎಂದು ಕರೆದಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈಗ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದ ಶಾಸಕರನ್ನು ಸಚಿವರನ್ನಾಗಿ ಮಾಡದಿದ್ದರೆ ವಚನ ಭ್ರಷ್ಟಎಂಬ ಹೆಸರು ಅವರಿಗೆ ಬರುತ್ತದೆ ಎಂದು ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹಗೊಂಡ ಬಳಿಕ ಉಪಚುನಾವಣೆ ಗೆದ್ದಿರುವ ಶಾಸಕರ ಬ್ಯಾಟ್‌ ಬೀಸಿದರು.

ಈ ಶಾಸಕರಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿರುವುದು. ಇವರೆಲ್ಲಾ ತಾವು ಗೆದ್ದು ಬಂದ ಪಕ್ಷ ತೊರೆದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಕಷ್ಟಪಟ್ಟು ಗೆದ್ದು ಬಂದಿದ್ದಾರೆ. 

ದಾವೋಸ್ ಸಂಭ್ರಮ ಮುಗಿಯಿತು: ಬಿಎಸ್‌ವೈಗೆ ಶುರುವಾಯ್ತು ಸಂಪುಟ ಸಂಕಟ

ಅವರಿಗೆ ಈ ಮೊದಲು ನೀಡಿದ ಆಶ್ವಾಸನೆಯಂತೆ ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್‌ ಸಚಿವರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

 ಅವರು ರಾಜೀನಾಮೆ ನೀಡಿದ ಸಂದರ್ಭದಲ್ಲಿ ತಾವು ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ಅನುಭವಿಸಿದ ಮಾನಸಿಕ ತೊಂದರೆ ಬೇರೆ ಯಾವ ರಾಜಕಾರಣಿಗಳಿಗೂ ಬರಬಾರದು. ಇವರಿಗೆ ಸಚಿವ ಸ್ಥಾನ ನೀಡದಿದ್ದರೆ ಬಿಜೆಪಿಗೆ ಒಳ್ಳೆ ಹೆಸರು ಬರುವುದಿಲ್ಲ. ಅದರಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒಳ್ಳೆ ಹೆಸರು ಬರುವುದಿಲ್ಲ ಎಂದರು.

click me!