Tumakur: ಪ್ರಸನ್ನ ಕುಮಾರ್‌ ಚುನಾವಣೆಯಲ್ಲಿ ನಿಂತು ಗೆಲ್ಲಲಿ : ಕೈ ಮುಖಂಡ ಆಕ್ರೋಶ

By Kannadaprabha NewsFirst Published Dec 10, 2022, 5:09 AM IST
Highlights

ತಾಲೂಕಿನಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಳೆಸಲು ಯಾವುದೇ ಶ್ರಮವಹಿಸದ ಕಾಂಗ್ರೆಸ್‌ ಮುಖಂಡ ಜಿ.ಎಸ್‌.ಪ್ರಸನ್ನಕುಮಾರ್‌ರವರು ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿಬೆಳೆಸಿದವರಂತೆ ಮಾತನಾಡುತ್ತಿದ್ದಾರೆ ಎಂದು ಜಿ. ಹೊಸಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರ್ಷನ್‌ ಆಕ್ರೋಶ ವ್ಯಕ್ತಪಡಿಸಿದರು.

  ಗುಬ್ಬಿ (ಡಿ.10): ತಾಲೂಕಿನಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಳೆಸಲು ಯಾವುದೇ ಶ್ರಮವಹಿಸದ ಕಾಂಗ್ರೆಸ್‌ ಮುಖಂಡ ಜಿ.ಎಸ್‌.ಪ್ರಸನ್ನಕುಮಾರ್‌ರವರು ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿಬೆಳೆಸಿದವರಂತೆ ಮಾತನಾಡುತ್ತಿದ್ದಾರೆ ಎಂದು ಜಿ. ಹೊಸಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರ್ಷನ್‌ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪ್ರಸನ್ನಕುಮಾರ್‌ ಅವರು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಅಥವಾ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಗೆದ್ದು ತೋರಿಸಲಿ. ಕೇವಲ ಚುನಾವಣೆ ಸಂದರ್ಭದಲ್ಲಿ ಬಂದು ಸಂಸದ ಜಿ.ಎಸ್‌. ಬಸವರಾಜ್‌ ಅವರಂತೆ ಇವರೂ ಸುಳ್ಳು ಹೇಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಹೇರೂರು ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ಪ ಮಾತನಾಡಿ, ವಾಸಣ್ಣನವರು ಜಾತ್ಯತೀತ ಮನೋಭಾವ ಹೊಂದಿದ್ದಾರೆ. ಅವರು ಸಾಕಷ್ಟುಅಭಿವೃದ್ಧಿ ಮಾಡಿರುವುದರಿಂದಲೇ ಸತತ 20 ವರ್ಷಗಳಿಂದ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಶಾಸಕರ ಬಗ್ಗೆ ಮಾತನಾಡಲು ಪ್ರಸನ್ನಕುಮಾರ್‌ಗೆ ಯಾವ ನೈತಿಕತೆ ಇದೆ ಎಂದು ಹೇಳಿದರು.

ಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್‌ ಮಾತನಾಡಿ, ಕಾಂಗ್ರೆಸ್‌ (Congress) ಪಕ್ಷದ ರಾಜ್ಯ ನಾಯಕರೇ ಶಾಸಕ ಶ್ರೀನಿವಾಸರವರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ತಪ್ಪಿದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಗೆಲ್ಲುವ ಸಾಮರ್ಥ್ಯವನ್ನು ಶಾಸಕರು ಹೊಂದಿದ್ದಾರೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹರ್ಷ ಮಾತನಾಡಿ, ಪ್ರಸನ್ನಕುಮಾರ್‌ ಅವರು ಸ್ವಾರ್ಥಕ್ಕಾಗಿ ಸಮುದಾಯವನ್ನು ಬಳಸಿಕೊಳ್ಳುವುದು ತರವಲ್ಲ. ಶಾಸಕರು ಯಾವ ಪಕ್ಷಕ್ಕೆ ಹೋದರೂ ನಾವು ಅವರಿಗೆ ಬೆಂಬಲವಾಗಿ ನಿಲ್ಲುವೆವು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕಿರಣ್‌, ಮಾರುತೇಶ್‌, ಚನ್ನಬಸವಯ್ಯ, ರಮೇಶ್‌ ಹಾಗೂ ಇತರರು ಉಪಸ್ಥಿತರಿದ್ದರು.

 ಡಿಕೆಶಿಯಿಂದ ಮಹತ್ವದ ಸುಳಿವು

ಬೆಂಗಳೂರು(ಡಿ.10): ‘ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿಲುವು. ಉದಯಪುರ ಸಭೆಯ ನಿರ್ಣಗಳನ್ನು ಜಾರಿ ಮಾಡುವುದಾಗಿ ಖರ್ಗೆ ಅವರು ಪ್ರಾರಂಭದಲ್ಲೇ ಹೇಳಿದ್ದಾರೆ. ಎಲ್ಲವೂ ಒಂದೇ ದಿನ ಆಗದಿದ್ದರೂ ಉದಯಪುರ ಮಾರ್ಗಸೂಚಿ ಪ್ರಕಾರ ಹಂತ-ಹಂತವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. - ತನ್ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆ ಪರೋಕ್ಷ ಸುಳಿವು ನೀಡಿದರು.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಲ್ಲಿಕಾರ್ಜುನ ಖರ್ಗೆ ಅವರ ಆಚಾರ-ವಿಚಾರ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬುದಾಗಿದೆ. ಹೊಸಬರಿಗೆ ಆದ್ಯತೆ ನೀಡುವ ಇರಾದೆಯನ್ನು ಮೊದಲೇ ಹೇಳಿದ್ದಾರೆ. ಆದರೆ ಇವೆಲ್ಲವೂ ರಾಜಕೀಯ ತಂತ್ರಗಾರಿಕೆಯಾಗಿದ್ದು, ಎಲ್ಲವೂ ಒಂದೇ ದಿನ ಆಗುವುದಿಲ್ಲ. ಉದಯಪುರ ಮಾರ್ಗಸೂಚಿಯನ್ನು ನಾವೆಲ್ಲರೂ ಪಾಲಿಸಬೇಕು. ಹೀಗಾಗಿ ಹಂತ-ಹಂತವಾಗಿ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಅಭ್ಯರ್ಥಿ ಹೆಸರು ಘೋಷಣೆ ಮಾಡಬೇಡಿ: ಡಿಕೆಶಿ ಖಡಕ್‌ ವಾರ್ನಿಂಗ್‌

ಒಂದೇ ದಿನ ಹೇಳಲಾಗಲ್ಲ:

ಹಾಗಾದರೆ ಉದಯಪುರ ನಿರ್ಣಯದಂತೆ ಹಿರಿಯರು ಹಾಗೂ ಕುಟುಂಬ ರಾಜಕಾರಣದಲ್ಲಿರುವವರ ಬದಲಾವಣೆ ಆಗುತ್ತದೆಯೇ ಎಂಬ ಪ್ರಶ್ನೆಗೆ ‘ನಮ್ಮ ರಾಜಕೀಯ ತಂತ್ರಗಳನ್ನು ಒಂದೇ ದಿನಗಳಲ್ಲಿ ಹೇಳಲು ಸಾಧ್ಯವಿಲ್ಲ’ ಎಂದು ಉತ್ತರಿಸಲು ನಿರಾಕರಿಸಿದರು.

ಪಕ್ಷ ಇದ್ದರಷ್ಟೇ ಅಧಿಕಾರ:

ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ, ‘ಪಕ್ಷ ಇದ್ದರಷ್ಟೇ ಅಧಿಕಾರ ಅನುಭವಿಸಬಹುದು. ಚಿಕ್ಕಮಗಳೂರು ಸೇರಿ ಕೆಲವು ಕಡೆ ಈ ಸಮಸ್ಯೆಯಿದೆ. ಈಗಾಗಲೇ ಚಿಕ್ಕಮಗಳೂರಿಗೆ ಹೋಗಿ ಎಲ್ಲರ ಜತೆ ಮಾತನಾಡಿದ್ದೇನೆ. 350ಕ್ಕೂ ಹೆಚ್ಚು ನಿಗಮ-ಮಂಡಳಿ ಅಧ್ಯಕ್ಷ, ಸದಸ್ಯ ಸ್ಥಾನಗಳ ಅಧಿಕಾರ ಇದೆ. 75 ಪರಿಷತ್‌ ಸ್ಥಾನ, 16 ರಾಜ್ಯಸಭೆ ಸ್ಥಾನಗಳಿವೆ. ಅರ್ಹತೆಗೆ ತಕ್ಕಂತೆ ಎಲ್ಲರಿಗೂ ಅಧಿಕಾರ ನೀಡುತ್ತೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸದಿಂದಲೇ ಕಾಂಗ್ರೆಸ್‌ ಶಾಸಕರಾಗಲು 1,350 ಜನ ಅರ್ಜಿ ಸಲ್ಲಿಸಿದ್ದಾರೆ’ ಎಂದು ಹೇಳಿದರು.

click me!