ಬಿಡಿಎ ಅಧ್ಯಕ್ಷ, ಆಯುಕ್ತರ ಮಧ್ಯೆ ಬಿಗ್‌ ಫೈಟ್‌..!

By Kannadaprabha NewsFirst Published Feb 10, 2021, 8:03 AM IST
Highlights

ಹಗರಣಗಳ ತನಿಖೆ ಸೇರಿ ಪ್ರತಿ ವಿಚಾರದಲ್ಲೂ ಅಸಹಕಾರ| ಬಿಡಿಎಗೆ ಸಂಬಂಧಿಸಿದ ಯಾವುದೇ ವಿಚಾರವನ್ನು ಅಧ್ಯಕ್ಷನಾದ ತಮ್ಮ ಗಮನಕ್ಕೆ ತರದೆ ಏಕಪಕ್ಷೀಯ ನಿರ್ಧಾರ| ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಸ್ವೇಚ್ಛಾಚಾರವಾಗಿ ಸಗಟು ನಿವೇಶನ ನೀಡಿ ಪ್ರಾಧಿಕಾರಕ್ಕೆ ಕೋಟ್ಯಂತರ ರು. ನಷ್ಟ: ವಿಶ್ವನಾಥ್‌| 

ಬೆಂಗಳೂರು(ಫೆ.10): ಭವಾನಿ ಹೌಸಿಂಗ್‌ ಸೊಸೈಟಿಗೆ ಸಗಟು ಜಮೀನು ಹಂಚಿಕೆ ವಿಚಾರ ಬಿಡಿಎಯಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದು, ಇದೀಗ ಬಿಡಿಎ ಅಧ್ಯಕ್ಷರಾದ ಎಸ್‌.ಆರ್‌.ವಿಶ್ವನಾಥ್‌ ಹಾಗೂ ಆಯುಕ್ತ ಡಾ.ಮಹದೇವ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಅಧ್ಯಕ್ಷರು ಹಾಗೂ ಆಯುಕ್ತರು ಸುದ್ದಿಗೋಷ್ಠಿ ನಡೆಸಿದ ಒಬ್ಬರ ಮೇಲೊಬ್ಬರು ಬಹಿರಂಗವಾಗಿ ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ.

ಸಿಎಂ ಆದೇಶಕ್ಕೂ ಅಧ್ಯಕ್ಷರು ಕ್ಯಾರೇ ಅನ್ನಲ್ಲ

ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಸಗಟು ಭೂಮಿ ಹಂಚಿಕೆಯಲ್ಲಿ ಆಗಿರುವ ಅಕ್ರಮ ಕುರಿತ ತನಿಖೆಗೆ ಎಸ್‌ಐಟಿಗೆ ವಹಿಸುವ ಉದ್ದೇಶವಿದೆ. ಆದರೆ, ಈ ವಿಚಾರವೂ ಸೇರಿದಂತೆ ಪ್ರತಿಯೊಂದರಲ್ಲೂ ಬಿಡಿಎ ಆಯುಕ್ತ ಮಹದೇವ ಅವರು ಈ ವಿಚಾರದಲ್ಲಿ ಅಸಹಕಾರ ತೋರುತ್ತಿದ್ದಾರೆ ಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ನೇರ ಆರೋಪ ಮಾಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿಎಗೆ ಸಂಬಂಧಿಸಿದ ಯಾವುದೇ ವಿಚಾರವನ್ನು ಅಧ್ಯಕ್ಷನಾದ ತಮ್ಮ ಗಮನಕ್ಕೆ ತರದೆ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಹಿಂದೆ ಹಲವಾರು ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಸ್ವೇಚ್ಛಾಚಾರವಾಗಿ ಸಗಟು ನಿವೇಶನ ನೀಡಿ ಪ್ರಾಧಿಕಾರಕ್ಕೆ ಕೋಟ್ಯಂತರ ರು. ನಷ್ಟ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಗಟು ನಿವೇಶನ ಹಂಚಿಕೆ ರದ್ದುಪಡಿಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದರು.
ಆದರೆ, ಈ ಆದೇಶ ಲೆಕ್ಕಿಸದೆ ಭವಾನಿ ಹೌಸಿಂಗ್‌ ಸೊಸೈಟಿಗೆ ರಾತ್ರೋ ರಾತ್ರಿ ಸುಮಾರು 500 ಕೋಟಿ ರು. ಬೆಲೆ ಬಾಳುವ 12.36 ಎಕರೆ ಜಮೀನು ಮಂಜೂರು ಮಾಡಲು ಹುನ್ನಾರ ನಡೆಸಿದ್ದಾರೆ. ಈ ಕುರಿತು ಪರಿಶೀಲನೆಗೆ ಕಡತ ಕಳುಹಿಸಿಕೊಡಿ ಎಂದು ಕೇಳಿದರೂ ನಿರ್ಲಕ್ಷ್ಯ ತೋರಿದ ಆಯುಕ್ತರು ಎಂಜಿನಿಯರ್‌ಗಳನ್ನು ತಡರಾತ್ರಿ ಕಚೇರಿಯಲ್ಲಿ ಕೂರಿಸಿಕೊಂಡು ಖಚಿತ ಅಳತೆ ವರದಿ (ಕರೆಕ್ಟ್ ಡೈಮೆನ್ಷನ್‌ ರಿಪೋರ್ಟ್‌-ಸಿಡಿಆರ್‌) ಸಿದ್ಧಪಡಿಸಿದ್ದಾರೆ. ತರಾತುರಿಯಲ್ಲಿ ಸಂಘಕ್ಕೆ ಭೂಮಿ ಮಂಜೂರು ಮಾಡುವ ನಿರ್ಧಾರ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಆರೋಪಿಸಿದರು.

ಸಿಎಂ ಆದೇಶಕ್ಕೂ ಡೋಂಟ್‌ ಕೇರ್‌: ಬಿಡಿಎ ಸಗಟು ಸೈಟ್‌ ಹಂಚಿಕೆಗೆ ತರಾತುರಿ

ಆಯುಕ್ತರ ಅಸಹಕಾರ:

ಪ್ರಾಧಿಕಾರವನ್ನು ಏಜೆಂಟ್‌ ಮತ್ತು ಭ್ರಷ್ಟಾಚಾರ ಮುಕ್ತ ಮಾಡಲು ಅಧಿಕಾರಿ ವರ್ಗ ಹಾಗೂ ಆಯುಕ್ತರು ಸಹಕರಿಸುತ್ತಿಲ್ಲ. ತಾವಾಗಿಯೇ ಆಯುಕ್ತರ ಕಚೇರಿಗೆ ಹೋದರೂ ಹತ್ತು ನಿಮಿಷ ಕುಳಿತುಕೊಳ್ಳಿ ಎಂದು ಕಾಯಿಸಿ ಅಗೌರವ ತೋರಿಸಿದ್ದಾರೆ. ಕಚೇರಿಗೆ ಯಾರೂ ಬರಬೇಡಿ ಎಂದು ಧಿಮಾಕು ತೋರಿಸ್ತಾರೆ. ಕಡತ ಪರಿಶೀಲನೆಗೆಂದು ಕೇಳಿದರೂ ಅಧಿಕಾರಿಗಳಿಗೆ ಕಡತ ಕೊಟ್ಟರೆ ಅಮಾನತು ಮಾಡುವುದಾಗಿ ಬೆದರಿಸುತ್ತಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಎಸ್‌ಟಿಸ್‌ ತಪ್ಪು ನಿರ್ಧಾರ

ಈ ಹಿಂದೆ ಅಧ್ಯಕ್ಷರಾಗಿದ್ದ ಸಚಿವ ಎಸ್‌.ಟಿ.ಸೋಮಶೇಖರ್‌ ಅವರೇ ಸಭೆಯಲ್ಲಿ ತೀರ್ಮಾನಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್‌, ಯಾರೇ ತಪ್ಪು ಮಾಡಿದರೂ ಬಿಡುವುದಿಲ್ಲ. ಎಸ್‌.ಟಿ.ಸೋಮಶೇಖರ್‌ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಸಗಟು ಹಂಚಿಕೆಗೆ ನಿವೇಶನ ಕೊಡಲು ಕೊಡಲು ಜಾಗ ಎಲ್ಲಿದೆ ಎಂದು ಪ್ರಶ್ನಿಸಿದರು,

ಬಿಡಿಎ ಸುಧಾರಣೆ ಮಾಡಿಯೇ ತೀರುತ್ತೇನೆ: ಬಿಎಸ್‌ವೈ ಶಪಥ

1977-78 ರಲ್ಲಿ ಭವಾನಿ ಸೊಸೈಟಿಯವರು ಕತ್ರಿಗುಪ್ಪೆಯಲ್ಲಿ ನಿವೇಶನ ತೆಗೆದುಕೊಂಡಿದ್ದರು. ಆ ಜಾಗವನ್ನು ಬಿಡಿಎ ಸ್ವಾಧೀನ ಮಾಡಿಕೊಂಡಾಗ, ಸೊಸೈಟಿಯವರು ಬದಲಿ ನಿವೇಶನಕ್ಕೆ ಮನವಿ ಮಾಡಿದ್ದರು. 1988 ರಲ್ಲಿ ಈ ಬಗ್ಗೆ ಅರ್ಜಿ ಕೊಟ್ಟಿದ್ದು, ಆಗ 20 ಎಕರೆ ಜಾಗ ಕೊಡಲಾಗಿತ್ತು. ಪುನಃ 2017ಕ್ಕೆ ಇನ್ನೂ 12.5 ಎಕರೆ ಕೊಡಬೇಕು ಎಂದು ಮನವಿ ಮಾಡಿದ್ದಾರೆ. 2019 ರಲ್ಲಿ ಈ ಜಾಗವನ್ನು ಕೊಡಬೇಕೆಂದು ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಎಸ್‌.ಟಿ.ಸೋಮಶೇಖರ್‌ ನೇತೃತ್ವದಲ್ಲಿ ತೀರ್ಮಾನ ಮಾಡಲಾಗಿತ್ತು. ಆದರೆ ನ್ಯಾಯಾಲಯದ ನಿಯಮಾನುಸಾರ ಜಾಗ ಕೊಡುವಂತೆ ಹೇಳಿತ್ತು. ಆದರೆ ನಿಯಮ ಪ್ರಕಾರ ಸಗಟು ಹಂಚಿಕೆ ಮಾಡುವಂತೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಭವಾನಿ ಹೌಸಿಂಗ್‌ ಸೊಸೈಟಿಗೆ 12.50 ಎಕರೆಗಳ ಪೈಕಿ ಐದು ಎಕರೆ ಜಾಗವನ್ನು ಬಾಣಸವಾಡಿಯ ಸರ್ವೆ ನಂ.257ರಲ್ಲಿ 2.10 ಎಕರೆ, ಕಾಚರಕನಹಳ್ಳಿ ಸರ್ವೆ ನಂ.85ರಲ್ಲಿ 3 ಎಕರೆ ಹಾಗೂ ಸರ್ವೆ ನಂ. 83/3ರಲ್ಲಿ 30 ಗುಂಟೆ ಜಾಗವನ್ನು ಕೊಡಲು ಸಿದ್ಧತೆ ನಡೆದಿದೆ. ಆದರೆ ಇದು ಕಾನೂನು ಬಾಹಿರ ಎಂದು ಗೊತ್ತಾಗುತ್ತಿದ್ದಂತೆ ಮುಖ್ಯಮಂತ್ರಿಗಳು ಮುಂದಿನ ಆದೇಶದವರೆಗೆ ಜಾಗ ಹಂಚಿಕೆ ಮಾಡದಂತೆ ಆದೇಶಿಸಿದ್ದಾರೆ ಎಂದು ವಿಶ್ವನಾಥ್‌ ಹೇಳಿದರು.
 

click me!