
ವರದಿ- ದೀಪಕ್ ಅಳದಂಗಡಿ
ದಕ್ಷಿಣ ಕನ್ನಡ (ಸೆ.18): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಇಂಬು ನೀಡುವ ರೈಲ್ವೇ ಜಾಲವೂ ವಿಸ್ತರಣೆಯಾಗಬೇಕಾದ ಅವಶ್ಯಕತೆ ಇದೆ. ಧರ್ಮಸ್ಥಳಕ್ಕೆ ಅನ್ಯ ಊರುಗಳಿಂದ ಬರಲು ಭಕ್ತರು ಬಸ್ ಗಳನ್ನೇ ನೆಚ್ಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲ್ವೇ ಜಾಲ ಧರ್ಮಸ್ಥಳಕ್ಕೂ ವಿಸ್ತರಣೆಯಾಗಲಿ ಎಂಬುದು ಪ್ರವಾಸಿಗರು, ನಾಗರಿಕರ ಆಶಯವಾಗಿದೆ.
ವಾಹನ ದಟ್ಟಣೆಯಿಂದ ದಿನಂದಿಂದ ದಿನಕ್ಕೆ ಪ್ರಯಾಣ ಪ್ರಯಾಸಕರ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಂಗಳೂರಿನಿಂದ ಜಿಲ್ಲೆಯ ಇತರೆಡೆಗೆ ರೈಲು ಸೇವೆ ವಿಸ್ತರಣೆಗೆ ಚಿಂತಿಸಬೇಕಾಗಿದೆ.
ಧರ್ಮಸ್ಥಳಕ್ಕೆ ಬರಲು ಭಕ್ತರು ಬಸ್ ಗಳನ್ನೇ ಅವಲಂಬಿಸಿದ್ದಾರೆ. ಪ್ರಸ್ತುತ ಸುಬ್ರಹ್ಮಣ್ಯ ರಸ್ತೆಯಿಂದ ಮಂಗಳೂರಿಗೆ ರೈಲ್ವೇ ಮಾರ್ಗವಿದೆ. ಬೆಂಗಳೂರಿನಿಂದ/ಮಂಗಳೂರಿನಿಂದ ಬರುವ ರೈಲುಗಳು ಈ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೂ ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ ಸುತ್ತಮುತ್ತ ವಾಸಿಸುವ ಜನರು ರೈಲು ಸಂಚಾರಕ್ಕೆ ಪರದಾಡುವಂತಾಗಿದೆ.
ಜಿಲ್ಲೆಯಲ್ಲಿ ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಿದ್ದರೂ, ಅನನುಕೂಲತೆಯ ಕಾರಣದಿಂದ ಯಾರೂ ರೈಲುಗಳಿಗೆ ಆದ್ಯತೆ ನೀಡುವುದಿಲ್ಲ. ಹತ್ತಿರದ ರೈಲು ನಿಲ್ದಾಣದಿಂದ ಧರ್ಮಸ್ಥಳವನ್ನು ತಲುಪಲು ರಸ್ತೆಯ ಮೂಲಕ 55-60 ಕಿ.ಮೀ. ಹೆಚ್ಚುವರಿ ಪ್ರಯಾಣ ಮಾಡಬೇಕಾಗುತ್ತದೆ. ಮಲವಂತಿಗೆ, ದಿಡುಪೆ ನೆರಿಯ, ಮುಂಡಾಜೆ, ಮುಂಡಾಜೆ, ಧರ್ಮಸ್ಥಳ, ಬೆಳ್ತಂಗಡಿ, ಅಳದಂಗಡಿ, ವೇಣೂರು ಮೊದಲಾದ ಊರಿನಲ್ಲಿರುವವರು ರೈಲು ಪ್ರಯಾಣ ಮಾಡಬೇಕಾದರೆ ದೂರದ ಮಂಗಳೂರಿಗೆ ಹೋಗಬೇಕು. ಒಂದು ವೇಳೆ ಬೆಳಗ್ಗೆ ಬೇಗನೆ ರೈಲು ಪ್ರಯಾಣ ಇದ್ದರೆ ಜನರ ಕಷ್ಟ ಅನುಭವಿಸಿದರಿಗೇ ಗೊತ್ತು. ಬೇಗ ಎದ್ದು ಸ್ವಂತ ವಾಹನದಲ್ಲಿಯೋ ಅಥವಾ ಬಾಡಿಗೆ ವಾಹನದಲ್ಲಿಯೋ ಮಂಗಳೂರಿಗೆ ತಲುಪಬೇಕು. ಆ ಸೌಕರ್ಯ ಇಲ್ಲವೆಂದಾದಲ್ಲಿ ಮಂಗಳೂರಿನ ಸಂಬಂಧಿಕರ, ಸ್ನೇಹಿತರ ಮನೆ ಹುಡುಕಿ ಸಂಜೆಯೇ ತಲುಪಬೇಕು. ಎರಡೂ ಇಲ್ಲವಾದರೆ ರೈಲು ಪ್ರಯಾಣ ಮರೀಚಿಕೆಯೇ.
ಬೆಳ್ತಂಗಡಿ ತಾಲೂಕಿನಿಂದ ಬೆಂಗಳೂರು ಮತ್ತಿತರ ದೂರದ ಊರುಗಳಲ್ಲಿ ಸಹಸ್ರಾರು ಉದ್ಯೋಗಿಗಳಿದ್ದಾರೆ. ಇಲಾಖಾ ಕಾರ್ಯಗಳಿಗೆ ಸರ್ಕಾರಿ ಉದ್ಯೋಗಿಗಳು ಬೆಂಗಳೂರಿಗೆ ಪ್ರಯಾಣಿಸುತ್ತಿರುತ್ತಾರೆ. ಧರ್ಮಸ್ಥಳದಿಂದ 300 ಕಿ.ಮೀ ಇರುವ ಬೆಂಗಳೂರಿಗೆ ಪ್ರಯಾಣಿಸಲು 8-10 ಗಂಟೆ ಸಮಯ ಬೇಕಾಗುತ್ತದೆ. ಹಿರಿಯ ನಾಗರಿಕರ ಪ್ರಯಾಣದ ಕಷ್ಟ ಹೇಳತೀರದರು. ಇನ್ನು ಸರಕಾರಿ ಮತ್ತು ಖಾಸಗಿ ಬಸ್ ಗಳ ಪ್ರಯಾಣದ ದರ ವರ್ಷವರ್ಷವೂ ಅಧಿಕವಾಗುತ್ತಿದೆ. ಹೀಗಿರುವಾಗ ಮಂಗಳೂರಿಗೆ ಉಜಿರೆ, ಧರ್ಮಸ್ಥಳ ಮೂಲಕ ಸುಬ್ರಹ್ಮಣ್ಯ ರಸ್ತೆಗೆ ಹೊಸ ರೈಲು ಮಾರ್ಗವನ್ನು ಸೇರಿಸುವುದರಿಂದ ಬೆಳ್ತಂಗಡಿ, ಬಂಟ್ವಾಳ ಪುತ್ತೂರು, ಕಡಬ ತಾಲೂಕಿನ ಜನರಿಗೆ ಬಹಳಷ್ಟು ಸಹಕಾರಿಯಾಗಬಲ್ಲುದು.
ಹೊಸ ಮಾರ್ಗದ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಕೆಲವು ರೈಲುಗಳನ್ನು ತಿರುಗಿಸುವುದು ಹಾಗೂ ಮಂಗಳೂರು ಸುಬ್ರಹ್ಮಣ್ಯ ನಡುವೆ ಹೊಸ ರೈಲು ಸೇವೆ ಆರಂಭ ಮಾಡುವುದು ನಾಗರಿಕರಿಗೆ ಹೆಚ್ಚಿನ ಪ್ರಯೋಜನವಾಗಬಲ್ಲುದು. ಪ್ರವಾಸೋದ್ಯಮದ ದೃಷ್ಟಿಯಿಂದ ಇದು ಮತ್ತೂ ಅತ್ಯಂತ ಲಾಭದಾಯಕವಾದ ಪ್ರಸ್ತಾವನೇ ಆದೀತು. ಬೆಳ್ತಂಗಡಿ ಆಸುಪಾಸಿನವರು ಮಂಗಳೂರಿಗೆ ಹೋಗಿ ಉದ್ಯೋಗ ಮಾಡುವವರು ರಾತ್ರಿ ಮನೆಗೆ ಬರಲು ಸಹಾಯವಾಗುತ್ತದೆ. ವಿದ್ಯಾರ್ಥಿಗಳಿಗಂತೂ ಹೆಚ್ಚಿನ ಅನುಕೂಲ. ಸಣ್ಣ ಉದ್ಯಮಗಳಿಗೆ, ಗೃಹ ಉತ್ಪನ್ನ ಮಾರುಕಟ್ಟೆಗೆ ಪ್ರಯೋಜನಕಾರಿ. ರೈಲು ಮಾರ್ಗ ಬಂದರೆ ಲಾಭವಾದೀತೇ ವಿನಹ ನಷ್ಟವಾಗಲಾರದು.
ಅಸಾಧ್ಯ ಎಂದು ಹೇಳಲಾಗುತ್ತಿದ್ದ ಕೊಂಕಣ್ ರೈಲ್ವೇ ಮಾರ್ಗವನ್ನು ಜಾರ್ಜ್ ಫೆರ್ನಾಂಡಿಸ್ ಅವರು ತಮ್ಮ ಇಚ್ಛಾ ಶಕ್ತಿಯಿಂದ ಮಾಡಿ ತೋರಿಸಿದ ಉದಾಹರಣೆ ಇರುವಾಗ ಇಂದಿನ ನವನವೀನ ತಂತ್ರಜ್ಞಾನದ ಮೂಲಕ ಮಂಗಳೂರು-ಧರ್ಮಸ್ಥಳ-ಸುಬ್ರಹ್ಮಣ್ಯವನ್ನು ರೈಲು ಮಾರ್ಗದ ಮೂಲಕ ಜೋಡಿಸುವ ಕೆಲಸ ಆಗಬೇಕಾಗಿದೆ. ರಾಜ್ಯ ಸರ್ಕಾರವು ಎಲ್ಲರನ್ನೂ ಒಟ್ಟುಗೂಡಿಸಿ ಕೇಂದ್ರ ಸರ್ಕಾರಕ್ಕೆ ರೈಲು ಮಾರ್ಗದ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿದರೆ ಯಾವುದೂ ಅಸಾಧ್ಯವಲ್ಲ. ರೈಲ್ವೇಯಂತಹ ಉತ್ತಮ ಸೌಲಭ್ಯ ತಾಲೂಕಿಗೂ ದೊರಕುವಂತಾಗಬೇಕು. ಅದಕ್ಕಾಗಿ ಶುಕ್ರವಾರ ಮಂಗಳೂರಿನಲ್ಲಿ ನಡೆಯುವ ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ಹೊಸ ಯೋಜನೆಯ ಪ್ರಸ್ತಾಪ ಆಗಲಿ.
ಇತ್ತೀಚೆಗೆ ಕೇಂದ್ರ ಸರ್ಕಾರದ ರೈಲ್ವೇ ಸಚಿವಾಲಯವು ಮಂಗಳೂರು ರೈಲ್ವೇ ಪ್ರದೇಶವನ್ನು ದಕ್ಷಿಣ ರೈಲ್ವೆಯ ಕೇರಳದ ಪಾಲಕ್ಕಾಡ್ ವಿಭಾಗದಿಂದ ಪ್ರತ್ಯೇಕಿಸಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರಿಸಿದೆ. ಇದರಿಂದ ಕರಾವಳಿ ಹಾಗೂ ಕರ್ನಾಟಕದ ಇತರ ಭಾಗಕ್ಕೆ ಭಾರೀ ಲಾಭವಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಮೈಸೂರು ವಿಭಾಗದ ಆದಾಯದ ಪ್ರಮಾಣ ಹೆಚ್ಚಾಗಲಿದೆ. ಹೀಗಾಗಿ ಕರಾವಳಿಯ ಬೆಳ್ತಂಗಡಿ ತಾಲೂಕಿನ ಜನತೆಯ ರೈಲಿನ ಆಶಯ ಕೈಗೂಡುವಂತಾಗಬೇಕು.