
ಕೊಡಗು (ಆ.16): ನನ್ನ 35 ವರ್ಷದ ಹೋರಾಟಕ್ಕೆ ಫಲ ಸಿಕ್ಕಿದೆ, ನಾನು ಪ್ರಾರ್ಥನೆ ಸಲ್ಲಿಸಿದ್ದೆ ಫಲ ಸಿಕ್ಕಿದೆ ಎಂದ ಸಿಎಂ ಡಿ.ಕೆ. ಶಿವಕುಮಾರ್ ತಾವು ಸಿಎಂ ಆಗಿರುವುದಕ್ಕೆ ಮಾರ್ಮಿಕವಾಗಿ ನುಡಿದಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಹೋರಾಟಕ್ಕೂ ತಲಕಾವೇರಿಗೆ ಭೇಟಿ ನೀಡಿದ್ದೆ. ನನ್ನ ಪ್ರಾರ್ಥನೆಗೆ ನನಗೆ ಫಲಸಿಕ್ಕಿದೆ ಎಂದರು. ಮಡಿಕೇರಿ ತಾಲ್ಲೂಕಿನ ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಪತ್ನಿ ಸಮೇತ ಭೇಟಿ ನೀಡಿದ ಸಿಎಂ ಅಲ್ಲಿ ವಿವಿಧ ವಿಶೇಷ ಪೂಜೆಗಳ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕೆರೆ, ಜಲಾಶಯಗಳು ಇನ್ನೂ ತುಂಬಿಲ್ಲ.
ಹೆಚ್ಚು ಕಡಿಮೆ ಆದರೆ ಡ್ಯಾಂ ನಲ್ಲಿ ಈಗ ಇರುವ ನೀರನ್ನು ಬೇರೆಯವರಿಗೆ ಕೊಡಬೇಕಾಗುತ್ತದೆ. ಅದಕ್ಕೆ ಕಾನೂನನ್ನು ಪಾಲಿಸಬೇಕು ರೈತರ ಹಿತವನ್ನು ಕಾಪಾಡಬೇಕು ಎನ್ನುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಸುಪ್ರೀಂಕೋರ್ಟ್ ನಲ್ಲಿ ಮೊರೆ ಹೋಗಿದ್ದೇವೆ, ನಾವು ಸಾಕಷ್ಟು ದಾಖಲೆಗಳನ್ನು ಸಲ್ಲಿಸಿದ್ದೇವೆ. ಅಲ್ಲಿ ನಮ್ಮ ಪರವಾಗಿ ತೀರ್ಪು ಬರುವ ಸಾಧ್ಯತೆ ಇದೆ ಎಂದರು. ಆದರೆ ರಾಜ್ಯಕ್ಕೆ ಇನ್ನು ವರುಣ ಕೃಪೆ ತೋರಬೇಕಾಗಿದೆ. ಅದಕ್ಕಾಗಿ ಇನ್ನಷ್ಟು ಪೂಜೆ ಪ್ರಾರ್ಥನೆ ಸಲ್ಲಿಸಲು ಇಲ್ಲಿನ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗಿದ್ದು ಅದರ ಪರಿಣಾಮವಾಗಿ ಜಲಾಶಯಗಳಿಗೆ ಒಂದಿಷ್ಟು ನೀರು ಬಂದಿದೆ. ಆದರೆ ಕೊಡಗಿನಲ್ಲಿ ಸಾಕಷ್ಟು ಹಾನಿಯಾಗಿದೆ. ಇದನ್ನು ಪರಿಶೀಲಿಸಿ ಸೂಕ್ತ ಪರಿಹಾರ ಘೋಷಿಸಲಾಗುವುದು ಎಂದು ಹೇಳಿದ್ದಾರೆ. ಕೊಡಗಿಗೆ ಸಿಎಂ ಆದ ಬಳಿಕ ಮೊದಲ ಬಾರಿಗೆ ಬಂದಿದ್ದೇನೆ. ರಾಜ್ಯದ ಜಲಾಶಯಗಳು ಭರ್ತಿಯಾಗಲಿ ಎಂದು ಕೊಡಗಿನ ದೈವ ಭಗಂಡೇಶ್ವರನಿಗೆ ಪೂಜೆ, ಪ್ರಾಥ೯ನೆ ಸಲ್ಲಿಸಿದ್ದೇನೆ. ಕೊಡಗಿನಲ್ಲಿ ಮಳೆಯಿಂದಾಗಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ವರದಿ ಸಂಗ್ರಹಿಸಿ ಪರಿಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವೆ ಎಂದಿದ್ದಾರೆ. ಈಗಷ್ಟೇ ಮುಖ್ಯಮಂತ್ರಿಯಾಗಿ ಕಣ್ ಬಿಡ್ತಾ ಇದ್ದೇನೆ. ಮುಂದಿನ ದಿನಗಳಲ್ಲಿ ಕೊಡಗಿಗೆ ವಿಶೇಷ ಪ್ಯಾಕೇಜ್ ಬಗ್ಗೆ ಗಮನ ನೀಡುವೆ ಎಂದಿದ್ದಾರೆ.
ಡಿಸೆಂಬರ್ ಒಳಗೆ ಎಲ್ಲಾ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಚುನಾವಣೆಗಳ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಡಿಕೇರಿಯಲ್ಲಿ ಹೇಳಿದರು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಅವರು ಡಿಸೆಂಬರ್ ಒಳಗೆ ಎಲ್ಲಾ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಚುನಾವಣೆ ಮುಗಿಸುತ್ತೇವೆ. ನೀವೆಲ್ಲ ಕಾರ್ಯಕರ್ತರಿಗೆ ಅಧಿಕಾರ ಕೊಡಬೇಕು. ಆ ಮೂಲಕ ಎಲ್ಲ ಕೆಲಸ ಕಾರ್ಯಗಳಿಗೆ ವೇಗ ನೀಡಬೇಕು.
ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ಭಾರತ್ ಜೋಡೋ ಯುವ ಘಟಕ ನಿರ್ಮಾಣ ಆಗಲಿದೆ. ಪ್ರತೀ ಪಂಚಾಯಿತಿಗೆ 10 ಲಕ್ಷ ಅನುದಾನ ನೀಡಲಿದ್ದೇವೆ. ಇದು ಅಭಿವೃದ್ಧಿಗೆ ಅನುಕೂಲ ಆಗಲಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಇದೇ ವೇಳೆ ಕೊಡಗು ಉಸ್ತುವಾರಿ ಸಚಿವ ನರೇಂದ್ರಸ್ವಾಮಿ, ಸಿಎಂ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ ಮತ್ತು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಇದ್ದರು. ಭಾಗಮಂಡಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಡಿಕೇರಿಗೆ ಆಗಮಿಸಿದ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ನೇತೃತ್ವದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಬೃಹತ್ ಹೂವಿನ ಹಾರ ಹಾಕುವ ಜೊತೆಗೆ ಹೂವಿನ ಮಳೆಗರೆಯಲಾಯಿತು.
ನೂರಾರು ಕಾರ್ಯಕರ್ತರು ಚಂಡೆ ವಾದ್ಯ ಗೊಂಬೆ ಕುಣಿತದ ಮೂಲಕ ಮೂಲಕ ಅದ್ದೂರಿ ಸ್ವಾಗತ ನೀಡಿದರು. ಈ ವೇಳೆಯೂ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್ ಅವರು ಈ ವೇಳೆ ಕೊಡಗಿಗೆ ಬೃಹತ್ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು. ಹಿಂದೆ ನಾನು ಕೊಡಗಿಗೆ ಬಂದಿದ್ದೆ, ಎರಡು ಕ್ಷೇತ್ರಗಳಲ್ಲಿ ಇಬ್ಬರು ಗೆದ್ದು ಶಾಸಕರಾದರು. ಜಿಲ್ಲೆಯ ಜನರು ಆಶೀರ್ವದಿಸಿ ಇಬ್ಬರು ಶಾಸಕರಾದರು. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ. ಮುಂದೆಯೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಮುಂದೆಯೂ ಸಿಎಂ ಆಗಿ ಜಿಲ್ಲೆಗೆ ದೊಡ್ಡ ಯೋಜನೆ ಕೊಡುವುದಾಗಿ ಭರವಸೆ ನೀಡಿದರು.