ಚಿತ್ರದುರ್ಗ ಮುರುಘಾ ಸ್ವಾಮೀಜಿ ಮತ್ತೆ ಜೈಲಿಗೆ ಶಿಫ್ಟ್; ಮೇ 27ರವರೆಗೆ ನ್ಯಾಯಾಂಗ ಬಂಧನ

By Sathish Kumar KHFirst Published Apr 29, 2024, 5:08 PM IST
Highlights

ಚಿತ್ರದುರ್ಗದ ಮುರುಘಾ ಮಠದ ವಸತಿ ಶಾಲೆಯಲ್ಲಿದ್ದ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮುರುಘಾ ಶ್ರೀಗಳನ್ನು ಪುನಃ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚಿತ್ರದುರ್ಗ (ಏ.29): ಚಿತ್ರದುರ್ಗದ ಮುರುಘಾ ಮಠದ ವಸತಿ ಶಾಲೆಯಲ್ಲಿದ್ದ ಬಾಲಕಿಯರ ಮೇಲಿನ ಅತ್ಯಾಚಾರ (ಪೋಕ್ಸೋ ಕೇಸ್) ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ಮುರುಘಾ ಶ್ರೀಗಳಿಗೆ ಪುನಃ ಮೇ 27ರವರೆಗೆ ನ್ಯಾಯಾಂಗ ಬಂಧನ ಆದೇಶಿಸಿ ಜೈಲಿಗೆ ಕಳುಹಿಸಲಾಗಿದೆ.

ಬಾಲಕಿಯರ ಮೇಲೆ ಅತ್ಯಾಚಾರ ಮಾಡಿರುವ ಆರೋಪದಡಿ ಪೋಕ್ಸೋ ಪ್ರಕರಣದಡಿ ಚಿತ್ರದುರ್ಗದ ಮುರುಘ ರಾಜೇಂದ್ರ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಶರಣರು 14 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಹೈಕೋರ್ಟ್‌ ನಿಡಿದ ಜಾಮೀನಿನ ಮೇಲೆ ಹೊರಬಂದು ದಾವಣಗೆರೆ ಶಾಖಾಮಠದಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ, ಸಂತ್ರಸ್ತ ದೂರುದಾರರ ವಿಚಾರಣೆ ಬಾಕಿಯಿದ್ದರೂ ಜಾಮೀನಿನ ಮೇಲೆ ಹೊರಬಂದ ಸ್ವಾಮೀಜಿ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗಿತ್ತು. ಅಲ್ಲಿ ಪೋಕ್ಸೋ ಪ್ರಕರಣದ ಗಂಭೀರತೆ ಅರಿತ ಸುಪ್ರೀಂ ಕೋರ್ಟ್‌ ಮುರುಘಾ ಶ್ರೀಗಳ ಜಾಮೀನು ರದ್ದುಗೊಳಿಸಿ, ಒಂದು ವಾರದೊಳಗೆ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು.

ಮುರುಘಾ ಶ್ರೀ ಮತ್ತೆ ಜೈಲಿಗೆ; ಹೈಕೋರ್ಟ್‌ ನೀಡಿದ್ದ ಜಾಮೀನು ರದ್ದುಗೊಳಿಸಿದ ಸುಪ್ರೀಂ

ಸುಪ್ರೀಂ ಕೋರ್ಟ್ ಸೂಚನೆಯಂತೆ ಚಿತ್ರದುರ್ಗ ಜಿಲ್ಲೆಯ 1ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಸುಪ್ರೀಂ ಕೋರ್ಟ್‌ ಆದೇಶವನ್ನು ಪರಿಶೀಲಿಸಿದ ಪೀಠವು ಪೋಕ್ಸೋ ಪ್ರಕರಣದ ದುರುದಾರರು ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುರುಘಾ ಶ್ರೀಗೆ ಮೇ 27ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಯಿತು. ನಂತರ ಪೊಲೀಸರು ಪೋಕಸ್ಓ ಪ್ರಕರಣದಲ್ಲಿ ಮುರುಘಾ ಶರಣರನ್ನು ನ್ಯಾಯಾಲಯ ಆದೇಶದಂತೆ ವಶಕ್ಕೆ ಪಡೆದುಕೊಳ್ಳಲಾಯಿತು. ಈ ವೇಳೆ ಸ್ವಾಮೀಜಿ ಬೆಂಬಲಿಗರಿಂದ ಪ್ರತಿರೋಧ ಬರುವ ಸಾಧ್ಯತೆ ಅರಿತು ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.

ಚಿತ್ರದುರ್ಗ ಕೋರ್ಟ್‌ಗೆ ಆಗಮಿಸಿದ ಡಿವೈಎಸ್ಪಿ ದಿನಕರ್ ಅವರ ನೇತೃತ್ವದಲ್ಲಿ ಮುರುಘಾ ಶ್ರೀಗಳನ್ನು ವ್ಯಾನ್‌ನಲ್ಲಿ ಕೂರಿಸಿಕೊಂಡು ನಿಯಮಾನುಸಾರ ಆರೋಗ್ಯ ತಪಾಸಣೆಗೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ನಂತರ, ಆಸ್ಪತ್ರೆಯಲ್ಲಿ ಅವರಿಗೆ ವೈದ್ಯಕೀಯ ತಪಾಸಣೆ ಮಾಡಿಸಿ, ಅಲ್ಲಿಂದ ಜೈಲಿನ ಕಡೆಗೆ ಕರೆದೊಯ್ಯಲಾಯಿತು. ಇನ್ನು ಕೆಲವೇ ಕ್ಷಣಗಳಲ್ಲಿ ಮುರುಘಾ ಶ್ರೀಗಳನ್ನು ಜೈಲಿಗೆ ಕಳುಹಿಸಲಾಗುತ್ತದೆ. ಮೇ 27ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಅವಧಿಯೊಳಗೆ ಸಂತ್ರಸ್ತರ ವಿಚಾರಣಾ ಕಾರ್ಯ ಪೂರ್ಣಗೊಳಿಸುವ ಸಾಧ್ಯತೆಯಿದೆ.

ಸಂಸದ ಪ್ರಜ್ವಲ್‌ನಿಂದ 16ರಿಂದ 50 ವರ್ಷದ 300ಕ್ಕೂ ಅಧಿಕ ‌ಮಹಿಳೆಯರ ಮೇಲೆ ಅತ್ಯಾಚಾರ; ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ

ಮುರುಘಾ ಶ್ರೀಗಳನ್ನು ಹೊರರಾಜ್ಯದಲ್ಲಿಟ್ಟು ಸಾಕ್ಷಿಗಳ ವಿಚಾರಣೆ ನಡೆಸಿ: ರಾಜ್ಯದಲ್ಲಿ ಅತ್ಯಂತ ಗಂಭೀರ ಪ್ರಕರಣವಾಗಿರುವ ಹಾಗೂ ಅತ್ಯಂತ ಪ್ರಭಾವಿಯೂ ಆಗಿರುವ ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಮುರುಘಾ ಶರಣರನ್ನು ಪೋಕ್ಸೋ ಕೇಸ್‌ನಲ್ಲಿ ಪುನಃ ಜೈಲಿಗೆ ಕಳಿಸಿದ ಸುಪ್ರೀಂ ಕೋರ್ಟ್‌ ಆದೇಶವನ್ನು ಸಂತಸದಿಂದ ಸ್ವಾಗತಿಸುತ್ತೇವೆ. ಆದರೆ, ಸಾಕ್ಷಿಗಳ ಪೂರ್ಣ ವಿಚಾರಣೆ ಮುಕ್ತಾಯ ಆಗುವವರೆಗೂ ಮುರುಘಾ ಶರಣರನ್ನು ಬೇರೆ ರಾಜ್ಯದಲ್ಲಿ ಇರಿಸಬೇಕು. ಇಲ್ಲವಾದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

click me!