‘ದೆವ್ವ’ವನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು!

By Web DeskFirst Published Nov 30, 2019, 4:26 PM IST
Highlights

ವಿಚಿತ್ರ ಮಾಸ್ಕ್ ಹಾಕಿ ಭಯ ಹುಟ್ಟಿಸುತ್ತಿದ್ದ ಕಳ್ಳರು| ಮೂಡಿಗೆರೆ ತಾಲೂಕಿನ ಜಿ. ಹೊಸಳ್ಳಿ ಗ್ರಾಮದಲ್ಲಿ ಘಟನೆ| ಓರ್ವ ಕತರ್ನಾಕ್ ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿದ ಗ್ರಾಮಸ್ಥರು| ಉಳಿದ ನಾಲ್ವರು ಶ್ರೀ ಗಂಧ ಕಳ್ಳರು ಪರಾರಿ

ಚಿಕ್ಕಮಗಳೂರು[ನ.30]: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸುತ್ತಮುತ್ತ ಪ್ರದೇಶದಲ್ಲಿ ಶ್ರೀಗಂಧದ ಮರಗಳ ಕಳ್ಳತನಕ್ಕೆ ಬಂದಿದ್ದ ಹಾಸನ ಜಿಲ್ಲೆ ಬೇಲೂರು ತಾಲೂಕಿನ 'ದೆವ್ವ'ವನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆಯುವ ಮೂಲಕ ಸ್ತಳೀಯರು ಪಾಠ ಕಲಿಸಿದ್ದಾರೆ. 

ಹೌದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿ ಗ್ರಾಮದಂಚಿನಲ್ಲಿದ್ದ ಐದು ಶ್ರೀಗಂಧದ ಮರಗಳನ್ನ ಕದಿಯಲೆಂದು ಅರೇಹಳ್ಳಿಯ ಐವರು ಕಳ್ಳರು ಬಂದಿದ್ದರು. ಕಳ್ಳತನವಾಗುತ್ತಿದ್ದರೂ ಜನರು ಹೊರಬರಲಾರದೆ ಪರದಾಡುತ್ತಿದ್ದರು. ಇದಕ್ಕೆ ಕಾರಣ ದೆವ್ವದ ಭಯ. 

ಅತಿ 'ಬುದ್ಧಿವಂತ' ಕಳ್ಳರು ವಿಚಿತ್ರ ಮಾಸ್ಕ್ ಧರಿಸುವ ಮೂಲಕ ಜನರಲ್ಲಿ ಭಯ ಹುಟ್ಟಿಸಿದ್ದು, ಈ ಭಯ ಗ್ರಾಮಸ್ಥರನ್ನು ಹೊರಬರಲು ಬಿಡದೇ ಸತಾಯಿಸುತ್ತಿತ್ತು. ಹೀಗಿದ್ದರೂ ಗ್ರಾಮದ ಕೆಲ ಯುವಕರು ಏನಾದ್ರೂ ಸರಿ ಈ ಬಾರಿ ದೆವ್ವವನ್ನು ಬಿಡಬಾರದೆಂದು ನಿರ್ಧರಿಸಿ ಕಳ್ಳರಿದ್ದ ಸ್ಥಳಕ್ಕೆ ತಲುಪಿದ್ದಾರೆ. ಆದರೆ ಇನ್ನೇನು ಅವರನ್ನು ಹಿಡಿಯಬೇಕು ಅನ್ನುವಷ್ಟರಲ್ಲಿ ನಾಲ್ವರು ಪರಾರಿಯಾಗಿದ್ದು, ಒಬ್ಬನನ್ನು ಹಿಡಿಯುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ. 

ಈ ವೇಳೆ ದೆವ್ವದ ಮುಖವಾಡದ ಹಿಂದಿನ ಕಳ್ಳರ ಅಸಲಿಯತ್ತು ಬಯಲಾಗಿದ್ದು, ಆಕ್ರೋಶಗೊಂಡ ಗ್ರಾಮಸ್ಥರು ಅತನನ್ನು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. 

ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳ ಅಣ್ಣಪ್ಪನನ್ನು ಬಂಧಿಸಿದ್ದಾರೆ. ಅಲ್ಲದೇ 5 ಶ್ರೀಗಂಧದ ತುಂಡು, ಆಪೆ ಆಟೋ, ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.. 

ನವೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!