ಶ್ರದ್ಧಾಭಕ್ತಿಯಿಂದ ನೆರವೇರಿದ ಶೃಂಗೇರಿ ಶಾರದಾಂಬೆ ರಥೋತ್ಸವ: ಉಭಯ ಜಗದ್ಗುರುಗಳಿಂದ ಪೂಜೆ

By Sathish Kumar KHFirst Published Feb 9, 2023, 5:01 PM IST
Highlights

ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಆರಾಧ್ಯ ದೇವತೆ ಶಾರದಾಂಬೆ ರಥೋತ್ಸವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಫೆ.09):  ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಆರಾಧ್ಯ ದೇವತೆ ಶಾರದಾಂಬೆ ರಥೋತ್ಸವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು. ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ನಡೆದ  ಶ್ರೀ ಶಾರದಾಂಬಾ ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಗಣ ಪಾಲ್ಗೊಂಡು ದೇವಿದರ್ಶನವನ್ನು ಪಡೆದರು.

ಮಾಘ ಮಾಸ ಕೃಷ್ಣಪಕ್ಷದ ತದಿಗೆ ದಿನದಲ್ಲಿ ಶ್ರೀಮಠದಲ್ಲಿ ನಡೆಯುವ ಮಹಾರಥೋತ್ಸವ ಅತ್ಯಂತ ಮಹತ್ವದ್ದಾಗಿದೆ. ಅನೇಕ ಶತಮಾನಗಳಿಂದ ನಿರಂತರವಾಗಿ ನಡೆಯುತ್ತಿರುವ ಉತ್ಸವ ಉಭಯ ಜಗದ್ಗುರುಗಳ ಅನುಗ್ರಹದಿಂದ ಮುಂದುವರಿಯಿತು, ಜಪ ಮತ್ತು ಪಾರಾಯಣ, ಬ್ರಹ್ಮ ದೇವರಿಗೆ ವಿಶೇಷ ಪೂಜೆ, ಮಂಗಳಾರತಿ, ಬೀದಿ ಉತ್ಸವನಡೆಯಿತು.ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಬೆಳಗ್ಗೆ ಶ್ರೀಮಠದ ಹೊರ ಪ್ರಾಂಗಣ ಮತ್ತು ಒಳ ಪ್ರಾಂಗಣದ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. 

ಶೃಂಗೇರಿಯಲ್ಲಿ ಮುಂದುವರಿದ ಹಾಲಿ-ಮಾಜಿ ಎಂಎಲ್​ಎ ಬೆಂಬಲಿಗರ ಹೊಡೆದಾಟ: ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ಸಿಗರಿಂದ​ ಹಲ್ಲೆ

ಶಾರದಾಂಬೆಯ ಉತ್ಸವ ಮೂರ್ತಿಯನ್ನು ಪೀಠದಿಂದ ವಾದ್ಯಮೇಳದೊಂದಿಗೆ ರಥದ ವರೆಗೂ ತಂದು ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ನಂತರ ವಿಶೇಷವಾಗಿ ಅಲಂಕರಿಸಲಾಗಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಉತ್ಸವದಲ್ಲಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಂತೆ ಉತ್ಸವಕ್ಕೆ ಚಾಲನೆ ನೀಡಿದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ರಥದ ಎದುರು ಕಾಲ್ನಡಿಗೆಯಲ್ಲಿ ಸಾಗಿದರು. ಜನ, ಅಶ್ವ ತಟ್ಟಿರಾಯ, ಸ್ತಬ್ಧಚಿತ್ರ, ಭಜನಾತಂಡಗಳು ಉತ್ಸವದ ಮೆರಗು ಹೆಚ್ಚಿಸಿದವು. 

ಶ್ರೀಮಠದ ಶ್ರೀ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳ ವೇದಘೋಷ, ಭಕ್ತರ ಜಯಘೋಷ ಮೊಳಗಿತು.ತೇರು ಸಾಗುವ ಮಾರ್ಗವನ್ನು ತಳಿರು ತೋರಣ, ರಂಗೋಲಿ ಚಿತ್ತಾರದಿಂದ ಅಲಂಕರಿಸಲಾಗಿತ್ತು. ಭಾರತಿ ಚೌಕದಲ್ಲಿರುವ ಕಟ್ಟೆಬಾಗಿಲು ಗಣಪತಿಗೆ ಪೂಜೆ ಸಲ್ಲಿಸಿಬಲಕ್ಷ ಮೋದಕ ಗಣಹೋಮ ನಡೆಯಿತು.ಮಠದ ಆಡಳಿತಾಧಿಕಾರಿ ಗೌರಿಶಂಕರ್, ಪುರೋಹಿತರಾದ ಸೀತಾರಾಮಶರ್ಮ, ಶಿವಕುಮಾರಶರ್ಮ, ಕೃಷ್ಣ ಭಟ್  ಉತ್ಸವದಲ್ಲಿದ್ದರು.

ಭೋಗನಂಧೀಶ್ವರ ಬ್ರಹ್ಮರಥೋತ್ಸವಕ್ಕೆ ದಿನಗಣನೆ :
ಚಿಕ್ಕಬಳ್ಳಾಪುರ (ಫೆ.09):  ಐತಿಹಾಸಿಕ, ಪುರಾಣ ಪ್ರಸಿದ್ದ ಭೋಗನಂಧೀಶ್ವರ ಬ್ರಹ್ಮರಥೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಮಹಾಶಿವರಾತ್ರಿ ಪ್ರಯುಕ್ತ ನಡೆಯುವ ಈ ರಥೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ದೇವಾಲಯ ಆಡಳಿತ ಮಂಡಳಿ ಮಾಡಿಕೊಳ್ಳುತ್ತಿದೆ. ಈಗಾಗಲೇ ದೇವಸ್ಥಾನದ ಬಳಿ ರಥವನ್ನು ಸಿದ್ಧಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಬಳಿ ಇರೋ ಬೋಗನಂಧೀಶ್ವರ ದೇವಾಲಯದ ಬಳಿ ಸಾಕಷ್ಟು ಸ್ವಚ್ಚತೆಯನ್ನು ಕೂಡ ಮಾಡಲಾಗುತ್ತಿದೆ. ದೇವಸ್ಥಾನ ಆಡಳಿತ ಮಂಡಳಿ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳು ಭರದ ಸಿದ್ಧತೆಯನ್ನು ಮಾಡುತ್ತಿದ್ದಾರೆ.. ಶಿವರಾತ್ರಿ ಮಾರನೇ ದಿನ ನಡೆಯುವ ಈ ರಥೋತ್ಸವಕ್ಕೆ ಅಕ್ಕ ಪಕ್ಕದ ಜಿಲ್ಲೆಗಳು ಮಾತ್ರವಲ್ಲದೇ ನೆರೆಯ ಆಂಧ್ರ, ತಮಿಳುನಾಡಿನಿಂದಲೂ ಬಂದು ಇಲ್ಲಿ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗುತ್ತಾರೆ. 

ಮನಮೋಹನ್‌ ಸಿಂಗ್‌ರನ್ನು ಡಮ್ಮಿ ಪ್ರಧಾನಿ ಮಾಡಿದ್ರು: ಸಚಿವ ಸುಧಾಕರ್‌

ಶಿವರಾತ್ರಿ ಮಾರನೇ ದಿನ ನಡೆಯುವ ಜಾತ್ರೆ: ಶಿವರಾತ್ರಿ ಹಬ್ಬದ ಮರು ದಿನ ನಡೆಯೋ ಭೋಗನಂಧೀಶ್ವರನ ಜಾತ್ರೆ ಎಲ್ಲರ ಆಕರ್ಷಣೆಯಾಗಿರುತ್ತದೆ.. ಸಾವಿರಾರು ವರ್ಷಗಳಿಂದ ಈ ಈ ಜಾತ್ರೆ ನಡೆದುಕೊಂಡು ಬರುತ್ತಿದ್ದು, ಸಾವಿರಾರು ಜನರು ಬಂದು ಈ ರಥೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ದೇವಾಲಯದ ಸುತ್ತು ಹಾಕುವ ಮೂಲಕ ಈ ರಥೋತ್ಸವ ಮುಕ್ತಾಯವಾಗಲಿದೆ. ಶಿವರಾತ್ರಿ ಹಬ್ಬ ಅಂದರೇನೆ ಜಾಗರಣೆಗೆ ವಿಶೇಷ, ಅದರಂತೆಯೇ ಭೋಗನಂಧೀಶ್ವರ ದೇವವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತರು ಆಗಮಿಸಿ ಜಾಗರಣೆ ಮಾಡಲಿದ್ದಾರೆ. ಶಿವನ ಆರಾಧನೆ, ಭಜನೆ ಸೇರಿದಂತೆ ವಿವಿಧ ಗೀತ ಗಾಯನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗುತ್ತದೆ. ನೆರೆಯ ಆಂಧ್ರಪ್ರದೇಶದಿಂದಲೂ ಸಾವಿರಾರು ಭಕ್ತರು ಕಲಾವಿದರು ಆಗಮಿಸಿ ಜಾಗರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 

click me!