ಕಡೂರು ಶಾಸಕರ ಕುರ್ಚಿಯಲ್ಲಿ 'ಸೂಪರ್ ಶಾಸಕ' ಆಪ್ತ ಸಹಾಯಕನ ಅಂಧಾ ದರ್ಬಾರ್! ಇದು ನಮ್ಮ ಸರ್ಕಾರ ಹೊಡೀರಿ ಚಪ್ಪಾಳೆ!

Published : Mar 13, 2026, 06:58 PM IST
Chikkamagaluru Kadur MLA KS Anand PA Manjunath

ಸಾರಾಂಶ

ಚಿಕ್ಕಮಗಳೂರಿನ ಕಡೂರಿನಲ್ಲಿ, ಶಾಸಕ ಕೆ.ಎಸ್. ಆನಂದ್ ಅನುಪಸ್ಥಿತಿಯಲ್ಲಿ ಅವರ ಆಪ್ತ ಸಹಾಯಕ (PA) ಅಧಿಕಾರಿಗಳ ಅಧಿಕೃತ ಸಭೆ ನಡೆಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಪ್ರೋಟೋಕಾಲ್ ಉಲ್ಲಂಘನೆಯು ಜನಾಕ್ರೋಶಕ್ಕೆ ಕಾರಣವಾಗಿದ್ದು, ಜನಪ್ರತಿನಿಧಿಗಳ ಅಧಿಕಾರದ ದುರ್ಬಳಕೆ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಮಾ.11): ಪ್ರಜಾಪ್ರಭುತ್ವ ಮತ್ತು ರಾಜ್ಯಾದಳಿತದ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಿಗೆ ತನ್ನದೇ ಆದ ಗೌರವ ಮತ್ತು ಪ್ರೋಟೋಕಾಲ್ (ಶಿಷ್ಟಾಚಾರ) ಇರುತ್ತದೆ. ಆದರೆ, ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ಈ ಪ್ರೋಟೋಕಾಲ್‌ ಅನ್ನು ಗಾಳಿಗೆ ತೂರಿದ ಘಟನೆಯೊಂದು ನಡೆದಿದೆ. ಶಾಸಕರು ಕುಳಿತು ಅಧಿಕಾರಿಗಳ ಸಭೆ ನಡೆಸಬೇಕಾದ ಜಾಗದಲ್ಲಿ, ಅವರ ಆಪ್ತ ಸಹಾಯಕ (PA) ಕುಳಿತು ದರ್ಬಾರ್ ನಡೆಸಿರುವುದು ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ನಡೆದಿದ್ದೇನು?

ಕಡೂರಿನ ತಾಲ್ಲೂಕು ಕಚೇರಿಯಲ್ಲಿ ನಿನ್ನೆ ಸಂಜೆ 4 ಗಂಟೆಗೆ ಮಹತ್ವದ ಸಭೆಯೊಂದನ್ನು ಆಯೋಜಿಸಲಾಗಿತ್ತು. ತಹಶೀಲ್ದಾರ್ ಪೂರ್ಣಿಮಾ ಅವರು ಕಂದಾಯ ಗ್ರಾಮಗಳು ಹಾಗೂ ಅವುಗಳ ಅಭಿವೃದ್ಧಿ ಕುರಿತಂತೆ ದಾಖಲೆಗಳ ಸಮೇತ ಸಭೆಗೆ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಸಭೆಯಲ್ಲಿ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕರು, ತಾಲ್ಲೂಕಿನ ಉಪ ತಹಶೀಲ್ದಾರ್‌ಗಳು ಹಾಗೂ ತಾಲ್ಲೂಕಿನ ಎಲ್ಲಾ ಪಿಡಿಒಗಳು (PDO) ಹಾಜರಿದ್ದರು. ಶಿಷ್ಟಾಚಾರದ ಪ್ರಕಾರ ಈ ಸಭೆಯ ಅಧ್ಯಕ್ಷತೆಯನ್ನು ಕಡೂರು ಶಾಸಕ ಕೆ.ಎಸ್. ಆನಂದ್ ವಹಿಸಬೇಕಿತ್ತು.

ವೇದಿಕೆ ಮೇಲೆ ಪಿಎ ಆಸೀನ: ಅಧಿಕಾರಿಗಳ ಸಭೆ!

ಸಭೆಗೆ ಶಾಸಕ ಕೆ.ಎಸ್. ಆನಂದ್ ಅನಿವಾರ್ಯ ಕಾರಣಗಳಿಂದ ಹಾಜರಿರಲಿಲ್ಲ. ಇಂತಹ ಸಮಯದಲ್ಲಿ ಸಭೆಯನ್ನು ತಹಶೀಲ್ದಾರ್ ಅವರೇ ಮುನ್ನಡೆಸಬೇಕಿತ್ತು. ಆದರೆ, ಇಲ್ಲಿ ನಡೆದಿದ್ದೇ ಬೇರೆ. ಶಾಸಕರ ಅನುಪಸ್ಥಿತಿಯಲ್ಲಿ ಅವರ ಆಪ್ತ ಸಹಾಯಕ ಮಂಜುನಾಥ್ ಎಂಬುವವರು ನೇರವಾಗಿ ವೇದಿಕೆ ಏರಿದ್ದಲ್ಲದೆ, ತಹಶೀಲ್ದಾರ್ ಅವರ ಪಕ್ಕದಲ್ಲೇ ಕುಳಿತು ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕೇವಲ ಕುಳಿತಿದ್ದಷ್ಟೇ ಅಲ್ಲದೆ, ಅಧಿಕಾರಿಗಳಿಗೆ ಸೂಚನೆಗಳನ್ನು ನೀಡುತ್ತಾ 'ಸೂಪರ್ ಶಾಸಕ'ನಂತೆ ವರ್ತಿಸಿರುವುದು ಎಲ್ಲರ ಕೆಣ್ಣು ಕೆಂಪಾಗಿಸಿದೆ.

ಸಾರ್ವಜನಿಕರ ಆಕ್ರೋಶ ಮತ್ತು ಪ್ರಶ್ನೆಗಳು:

ಶಾಸಕರ ಪಿಎ ಈ ರೀತಿ ಅಧಿಕೃತ ಸರ್ಕಾರಿ ಸಭೆ ನಡೆಸಿರುವುದು 'ಅಂಧಾ ದರ್ಬಾರ್' ಎಂದು ಕಡೂರಿನ ಜನತೆ ಕಿಡಿ ಕಾರಿದ್ದಾರೆ. 'ಶಾಸಕರು ಇಲ್ಲದ ಸಮಯದಲ್ಲಿ ಅವರ ಪಿಎ ಶಾಸಕರ ಸ್ಥಾನದಲ್ಲಿ ಕೂರುವುದು ಕಾನೂನು ಉಲ್ಲಂಘನೆಯಲ್ಲವೇ? ಇವರು ಕಡೂರಿಗೆ ಶಾಸಕರಾ ಅಥವಾ ಸೂಪರ್ ಶಾಸಕರಾ?' ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ನೀಡಲಾದ ಅಧಿಕಾರವನ್ನು ಅವರ ಕೆಳಗೆ ಕೆಲಸ ಮಾಡುವ ಸಿಬ್ಬಂದಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ ಎಂಬ ಚರ್ಚೆ ಶುರುವಾಗಿದೆ.

ತಹಶೀಲ್ದಾರ್ ಮೌನಕ್ಕೆ ಕಾರಣವೇನು?

ಈ ಇಡೀ ಘಟನೆಯಲ್ಲಿ ತಾಲ್ಲೂಕು ಆಡಳಿತದ ಮುಖ್ಯಸ್ಥರಾದ ತಹಶೀಲ್ದಾರ್ ಪೂರ್ಣಿಮಾ ಅವರ ನಡೆ ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಪ್ರೋಟೋಕಾಲ್ ಸಮಸ್ಯೆ ಆಗುತ್ತದೆ ಎಂದು ಗೊತ್ತಿದ್ದರೂ, ಶಾಸಕರ ಪಿಎ ವೇದಿಕೆ ಹತ್ತಿ ಸಭೆ ನಡೆಸುತ್ತಿದ್ದರೂ ತಹಶೀಲ್ದಾರ್ ಏಕೆ ಸುಮ್ಮನಿದ್ದರು? 'ಇದು ಪ್ರೋಟೋಕಾಲ್ ಉಲ್ಲಂಘನೆ, ನೀವು ಇಲ್ಲಿ ಕೂರುವಂತಿಲ್ಲ' ಎಂದು ಹೇಳುವ ಧೈರ್ಯ ಅಧಿಕಾರಿಗಳಿಗೆ ಇಲ್ಲವಾಯಿತೇ? ಎಂಬ ಪ್ರಶ್ನೆಗಳು ಮೂಡಿವೆ. ಶಾಸಕರ ಆಪ್ತ ಸಹಾಯಕನ ಈ ದರ್ಬಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಒಟ್ಟಾರೆಯಾಗಿ, ಕಡೂರಿನಲ್ಲಿ ನಡೆದಿರುವ ಈ ಘಟನೆ ಸರ್ಕಾರಿ ಕಚೇರಿಗಳಲ್ಲಿ ರಾಜಕೀಯ ಹಸ್ತಕ್ಷೇಪ ಯಾವ ಮಟ್ಟಕ್ಕೆ ತಲುಪಿದೆ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ. ಈ ಕುರಿತು ಶಾಸಕ ಕೆ.ಎಸ್. ಆನಂದ್ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

ಶಿರಾಡಿ ಘಾಟ್‌ನಲ್ಲಿ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್-ಕಾರು ಮುಖಾಮುಖಿ: ಮೂವರು ದುರಂತ ಅಂತ್ಯ!
ಯುದ್ಧದ ನಿರ್ಬಂಧ ಮೀರಿ ಯುಎಇಯಿಂದ ಕಾರವಾರ ತಲುಪಿದ ಕಚ್ಚಾ ಡಾಂಬರ್ ತುಂಬಿದ ಹಡಗು