ಚಿಕ್ಕಮಗಳೂರಲ್ಲಿ ಗೌಡರ ಕಾಫಿ ತೋಟಕ್ಕೆ ಬೆಂಕಿ; ಸುಟ್ಟು ಕರಕಲಾದ ಎಲ್ಲ ಗಿಡಕ್ಕೂ ಪರಿಹಾರ ಕೊಡಲು ಆಗ್ರಹ!

Published : Apr 11, 2026, 07:18 PM IST
Chikkamagaluru Coffee estate fire

ಸಾರಾಂಶ

ಚಿಕ್ಕಮಗಳೂರು ತಾಲೂಕಿನ ಕದ್ರಿಮಿದ್ರಿ ಗ್ರಾಮದಲ್ಲಿ ಧರ್ಮೇಗೌಡರಿಗೆ ಸೇರಿದ ಒಂದು ಎಕರೆ ಕಾಫಿ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ನಾಶವಾಗಿದೆ. ಈ ದುರ್ಘಟನೆಯಲ್ಲಿ ಕಾಫಿ ಗಿಡಗಳು, ಸಿಲ್ವರ್ ಓಕ್ ಮರಗಳು ಹಾಗೂ ಮೆಣಸಿನ ಬಳ್ಳಿಗಳು ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಚಿಕ್ಕಮಗಳೂರು (ಏ.11): ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ತಾಲೂಕಿನ ಕದ್ರಿಮಿದ್ರಿ ಗ್ರಾಮದಲ್ಲಿ ಗೌಡರಿಗೆ ಕಾಫಿ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಸುಮಾರು ಒಂದು ಎಕರೆ ಪ್ರದೇಶದ ತೋಟ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಬೆಳೆ ಕಣ್ಣೆದುರೇ ಬೆಂಕಿಗಾಹುತಿಯಾಗುತ್ತಿರುವುದನ್ನು ಕಂಡು ರೈತ ಕುಟುಂಬ ಕಣ್ಣೀರು ಹಾಕಿದೆ.

ಸಂಪೂರ್ಣ ನಾಶವಾದ ತೋಟ:

ಕದ್ರಿಮಿದ್ರಿ ಗ್ರಾಮದ ನಿವಾಸಿ ಧರ್ಮೇಗೌಡ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಈ ಅವಘಡ ಸಂಭವಿಸಿದೆ. ಬೇಸಿಗೆಯ ಬಿಸಿಲಿನ ತಾಪಕ್ಕೆ ಒಣಗಿದ್ದ ಎಲೆಗಳು ಮತ್ತು ಗಿಡಗಳಿಗೆ ಬೆಂಕಿ ತಗುಲಿದ್ದರಿಂದ, ಜ್ವಾಲೆಯು ಅತೀ ವೇಗವಾಗಿ ತೋಟದಾದ್ಯಂತ ವ್ಯಾಪಿಸಿತು. ಈ ದುರ್ಘಟನೆಯಲ್ಲಿ ಸುಮಾರು 1300 ಕಾಫಿ ಗಿಡಗಳು, 300 ಸಿಲ್ವರ್ ಓಕ್ ಮರಗಳು ಹಾಗೂ 150ಕ್ಕೂ ಹೆಚ್ಚು ಮೆಣಸಿನ ಬಳ್ಳಿಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ.

ಭಾರೀ ಆರ್ಥಿಕ ನಷ್ಟ:

ಕಾಫಿ ತೋಟವನ್ನೇ ನಂಬಿ ಬದುಕುತ್ತಿದ್ದ ಧರ್ಮೇಗೌಡ ಅವರ ಕುಟುಂಬಕ್ಕೆ ಈ ಅವಘಡದಿಂದ ಭಾರಿ ಆರ್ಥಿಕ ಏಟು ಬಿದ್ದಿದೆ. ನಾಶವಾದ ಬೆಳೆಯ ಮೌಲ್ಯ ಲಕ್ಷಾಂತರ ರೂಪಾಯಿಗಳಾಗಿದ್ದು, ಮತ್ತೆ ತೋಟವನ್ನು ಮೊದಲಿನ ಸ್ಥಿತಿಗೆ ತರಲು ದಶಕಗಳೇ ಬೇಕಾಗುತ್ತವೆ. ತಮ್ಮ ಕಣ್ಣೆದುರೇ ಇಡೀ ತೋಟ ಭಸ್ಮವಾಗುವುದನ್ನು ಕಂಡ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ, ಗಾಳಿಯ ವೇಗ ಮತ್ತು ಒಣ ಹವೆಯಿಂದಾಗಿ ಪ್ರಯೋಜನವಾಗಲಿಲ್ಲ.

ಕಿಡಿಗೇಡಿಗಳ ಕೃತ್ಯದ ಶಂಕೆ?

ಈ ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಇದು ಕಿಡಿಗೇಡಿಗಳ ಕೃತ್ಯವಿರಬಹುದು ಎಂಬ ಶಂಕೆಯನ್ನು ತೋಟದ ಮಾಲೀಕರು ವ್ಯಕ್ತಪಡಿಸಿದ್ದಾರೆ. ತೋಟದ ಪಕ್ಕದಲ್ಲಿರುವ ರಸ್ತೆಯಲ್ಲಿ ಸಂಚರಿಸುವವರು ಸಿಗರೇಟ್ ಸೇದಿ, ಅದರ ಕಿಡಿಯನ್ನು ಆರಿಸದೆ ತೋಟದ ಕಡೆಗೆ ಎಸೆದಿರಬಹುದು, ಅದರಿಂದ ಈ ಅನಾಹುತ ಸಂಭವಿಸಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬೇಸಿಗೆಯ ಸಮಯದಲ್ಲಿ ತೋಟಗಳ ರಕ್ಷಣೆಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಇದ್ದು, ರಸ್ತೆ ಬದಿಗಳಲ್ಲಿ ಹೋಗುವವರು ಅಜಾಗರೂಕತೆಯಿಂದ ಬೆಂಕಿಯ ಕಿಡಿಗಳನ್ನು ಎಸೆಯದಂತೆ ಮನವಿ ಮಾಡಲಾಗಿದೆ. ಸಂತ್ರಸ್ತ ರೈತ ಕುಟುಂಬಕ್ಕೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ಆರ್‌ಡಿ ಪಾಟೀಲ್ ಜೈಲು ವರ್ಗಾವಣೆ ರದ್ದು, ಹೈಕೋರ್ಟ್ ಮಹತ್ವದ ತೀರ್ಪು ಮತ್ತೆ ಕಲಬುರಗಿಗೆ ಶಿಫ್ಟ್
ಬೆಂಗಳೂರು: ಅಜ್ಜಿ ಮನೆಯಲ್ಲೇ 5 ಲಕ್ಷದ ಚಿನ್ನ ಕದ್ದ ಮೊಮ್ಮಗ! ಪೊಲೀಸರು ಬಂಧನಕ್ಕೆ ಬಂದಾಗ ಅದಾಗಲೇ ಅಪ್ರಾಪ್ತ ಜೈಲಲಿದ್ದ!