
ಬೆಂಗಳೂರು: ತನ್ನ ಅಜ್ಜಿಯ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಅಪ್ರಾಪ್ತ ಬಾಲಕನೊಬ್ಬನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದು, ಆತನಿಂದ ₹5 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಇತ್ತೀಚಿಗೆ ತಮ್ಮ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಬಗ್ಗೆ ಈರಪ್ಪ ರೆಡ್ಡಿ ಲೇಔಟ್ ನಿವಾಸಿ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಕೃತ್ಯದಲ್ಲಿ ದೂರುದಾರರ ಮೊಮ್ಮಗನ ಪಾತ್ರ ಪತ್ತೆಯಾಯಿತು. ಆದರೆ, ಅಷ್ಟರಲ್ಲಿ ಬೇರೊಂದು ಕಳ್ಳತನ ಪ್ರಕರಣದಲ್ಲಿ ಆತನನ್ನು ಚಿಕ್ಕಮಗಳೂರು ಜಿಲ್ಲೆ ಲಿಂಗದನಹಳ್ಳಿ ಪೊಲೀಸರು ಬಂಧಿಸಿ ಬಾಲನ್ಯಾಯ ಮಂಡಳಿಗೆ ಕಳುಹಿಸಿದ್ದರು. ಬಳಿಕ ನ್ಯಾಯಾಲಯದಿಂದ ಬಾಡಿ ವಾರೆಂಟ್ ಪಡೆದು ಬಾಲಕನನ್ನು ಬಂಧನಕ್ಕೊಪಡಿಸಲಾಯಿತು. ಅನಾರೋಗ್ಯ ಹಿನ್ನೆಲೆಯಲ್ಲಿ ಅಜ್ಜ-ಅಜ್ಜಿ ಆಸ್ಪತ್ರೆಗೆ ತೆರಳಿದ್ದಾಗ ಮನೆಯಲ್ಲಿ ಚಿನ್ನವನ್ನು ಬಾಲಕ ಕಳವು ಮಾಡಿದ್ದ.
ಹನೂರು: ಮೂರು ಪ್ರತ್ಯೇಕ ಮನೆಗಳಲ್ಲಿ ಕಳ್ಳತನ ಮಾಡಿ ಹಣ ಹಾಗೂ ಚಿನ್ನವನ್ನು ದೋಚಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ರಾಮಾಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತರನ್ನು ದಿನ್ನಳ್ಳಿ ಗ್ರಾಮದ ಅಬ್ದುಲ್ ಮೋಮಿನ್ (28), ಅಮೀರ್ ಖಾನ್ (24), ಮುಜಾಹಿದ್ ಪಾಷಾ (24), ಮಹಮ್ಮದ್ ಸಾಹೀಲ್ (19) ಹಾಗೂ ಅಲಿಮುಲ್ಲಾ (19) ಎಂದು ಗುರುತಿಸಲಾಗಿದೆ.
ಹುಣಸೆಮರದ ದೊಡ್ಡಿ ಯಡಿಯಾರಳ್ಳಿ ಗ್ರಾಮದ ಪುಟ್ಟಮಾದೇಗೌಡ ಹಾಗೂ ಅವರ ಇಬ್ಬರು ಮಕ್ಕಳು ಪ್ರತ್ಯೇಕವಾಗಿ ಮೂರು ಮನೆಗಳಲ್ಲಿ ವಾಸವಾಗಿದ್ದರು. ಇಬ್ಬರು ಮಕ್ಕಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಮನೆಗಳಿಗೆ ಬೀಗ ಹಾಕಲಾಗಿತ್ತು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿದ ಆರೋಪಿಗಳು ಡಿ.12ರಂದು 3 ಮನೆಗಳ ಬೀಗ ಒಡೆದು ಸುಮಾರು 22 ಗ್ರಾಂ ಚಿನ್ನ ಹಾಗೂ 10 ಸಾವಿರ ರು. ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಈ ಕುರಿತು ಪುಟ್ಟಮಾದೇಗೌಡ ರಾಮಾಪುರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಇನ್ಸ್ಪೆಕ್ಟರ್ ಚಿಕ್ಕರಾಚಶೆಟ್ಟಿ ಮಾರ್ಗದರ್ಶನದಲ್ಲಿ ಸಬ್ಇನ್ಸ್ಪೆಕ್ಟರ್ ಮಂಜುನಾಥ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ದೊರೆತ ಖಚಿತ ಮಾಹಿತಿಯ ಮೇರೆಗೆ ದಿನ್ನಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಐವರನ್ನು ಬಂಧಿಸಿ, ಕೊಳ್ಳೇಗಾಲ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.