
ಚಿಕ್ಕಮಗಳೂರು: ಜಿಲ್ಲೆಯ ತಾಲೂಕಿನ ತುಡುಕೂರು ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮ ವಸತಿ ಶಾಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಘೋರ ನಿರ್ಲಕ್ಷ್ಯ ಎದ್ದು ಕಾಣುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಶಾಲೆಯ ಆವರಣದಲ್ಲಿ ಪುಟ್ಟ ಮಕ್ಕಳು ತಡರಾತ್ರಿ ಎಸ್ಕೇಪ್ ಆಗಲು ಯತ್ನಿಸಿದ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಮೂಲಗಳ ಪ್ರಕಾರ, ನಿನ್ನೆ ತಡರಾತ್ರಿ ವಸತಿ ಶಾಲೆಯ ಹಾಸ್ಟೆಲ್ನಲ್ಲಿ ಮಕ್ಕಳ ನಡುವೆ ಸಣ್ಣದಾಗಿ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ. ಈ ಗಲಾಟೆಯಿಂದ ತೀವ್ರವಾಗಿ ಭಯಗೊಂಡ ಉತ್ತರ ಕರ್ನಾಟಕ ಮೂಲದ ನಾಲ್ವರು ಪುಟ್ಟ ಮಕ್ಕಳು, ಆಶ್ರಮದಲ್ಲಿ ತಮಗೇನಾಗುತ್ತದೋ ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ವಾರ್ಡನ್ ಹಾಗೂ ಅಲ್ಲಿನ ಸಿಬ್ಬಂದಿ ಮಕ್ಕಳ ನಡುವಿನ ಗಲಾಟೆಯನ್ನು ಶಾಂತಗೊಳಿಸುವಲ್ಲಿ ಅಥವಾ ಮಕ್ಕಳಿಗೆ ಧೈರ್ಯ ತುಂಬುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇದರ ಪರಿಣಾಮವಾಗಿ, ಭಯಭೀತರಾದ ಮಕ್ಕಳು ಹೇಗಾದರೂ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ತಮ್ಮ ಮನೆಗೆ ಸೇರಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ.
ಭಯದ ನೆರಳಿನಲ್ಲೇ ರಾತ್ರಿ ಕಳೆದ ಮಕ್ಕಳು, ಇಂದು ಬೆಳ್ಳಂಬೆಳಗ್ಗೆಯೇ ಯಾರಿಗೂ ತಿಳಿಯದಂತೆ ವಸತಿ ಶಾಲೆಯಿಂದ ಹೊರಬಂದಿದ್ದಾರೆ. ಆಶ್ರಮದಿಂದ ನೇರವಾಗಿ ಚಿಕ್ಕಮಗಳೂರು ನಗರದ ಕಡೆಗೆ ಹೋಗುವ ರಸ್ತೆಯನ್ನು ಹಿಡಿದು ಹೆಜ್ಜೆ ಹಾಕಲಾರಂಭಿಸಿದ್ದಾರೆ. ಬೆಳಗಿನ ಚಳಿಯನ್ನೂ ಲೆಕ್ಕಿಸದೆ ಈ ಪುಟ್ಟ ಕಂದಮ್ಮಗಳು ವಸತಿ ಶಾಲೆಯಿಂದ ಸುಮಾರು 2 ಕಿಲೋಮೀಟರ್ನಷ್ಟು ದೂರದವರೆಗೆ ನಡೆದುಕೊಂಡೇ ಬಂದಿದ್ದಾರೆ.
ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ತುಡುಕೂರು ಭಾಗದ ಸ್ಥಳೀಯ ಗ್ರಾಮಸ್ಥರಿಗೆ ಅನುಮಾನ ಮೂಡಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಮಕ್ಕಳನ್ನು ತಡೆದು ಪ್ರೀತಿಯಿಂದ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಕ್ಕಳು ರಾತ್ರಿ ನಡೆದ ಗಲಾಟೆ ಮತ್ತು ತಮಗಾದ ಭಯದ ಬಗ್ಗೆ ಗ್ರಾಮಸ್ಥರ ಮುಂದೆ ತೋಡಿಕೊಂಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಗ್ರಾಮಸ್ಥರು, ಮಕ್ಕಳಿಗೆ ಧೈರ್ಯ ತುಂಬಿ ಸಮಾಧಾನಪಡಿಸಿದ್ದಾರೆ. ತದನಂತರ ಅತ್ಯಂತ ಜವಾಬ್ದಾರಿಯಿಂದ ಮಕ್ಕಳನ್ನು ಸುರಕ್ಷಿತವಾಗಿ ಮರಳಿ ಅದೇ ವಸತಿ ಶಾಲೆಗೆ ಕರೆತಂದು ಒಪ್ಪಿಸಿದ್ದಾರೆ.
ಈ ಘಟನೆಯಿಂದಾಗಿ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮ ವಸತಿ ಶಾಲೆಯ ಆಡಳಿತ ಮಂಡಳಿ, ವಾರ್ಡನ್ ಹಾಗೂ ಕಾವಲು ಕಾಯುವ ಸಿಬ್ಬಂದಿಯ ಬೇಜವಾಬ್ದಾರಿತನ ಸಂಪೂರ್ಣವಾಗಿ ಬಯಲಾಗಿದೆ. ರಾತ್ರಿ ಮಕ್ಕಳ ನಡುವೆ ಗಲಾಟೆಯಾಗುತ್ತಿದ್ದರೂ ವಾರ್ಡನ್ ಎಲ್ಲಿ ಹೋಗಿದ್ದರು? ಮುಂಜಾನೆ ನಾಲ್ಕು ಜನ ಪುಟ್ಟ ಮಕ್ಕಳು ಗೇಟ್ ದಾಟಿ ಅಷ್ಟು ದೂರ ಹೋದರೂ ಸಿಬ್ಬಂದಿಯ ಗಮನಕ್ಕೆ ಬರಲಿಲ್ಲವೇ? ಒಂದು ವೇಳೆ ಮಕ್ಕಳಿಗೆ ರಸ್ತೆಯಲ್ಲಿ ಏನಾದರೂ ಅನಾಹುತ ಸಂಭವಿಸಿದ್ದರೆ ಅದಕ್ಕೆ ಯಾರು ಹೊಣೆ? ಎಂಬ ಹತ್ತಾರು ಪ್ರಶ್ನೆಗಳು ಈಗ ಸಾರ್ವಜನಿಕರನ್ನು ಕಾಡುತ್ತಿವೆ. ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಮಕ್ಕಳ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ವಹಿಸಿದ ವಾರ್ಡನ್ ಹಾಗೂ ಸಂಬಂಧಪಟ್ಟ ಸಿಬ್ಬಂದಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಹಾಗೂ ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.