
ಗೌರಿಬಿದನೂರು: ಇರಾನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಗೆ ತಾಲೂಕಿನ ಅಲಿಪುರ ಗ್ರಾಮದ ಶಿಯಾ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಂತಿಮ ವಿದಾಯ ಹೇಳಿದರು.
ಗ್ರಾಮದಲ್ಲಿ ಇರುವ ಬಹುತೇಕ ಮುಸ್ಲಿಂ ಸಮುದಾಯದವರು ಇರಾನ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳೊಂದಿಗೆ ಸಂಬಂಧ ಹೊಂದಿರುವ ಶಿಯಾ ಮುಸ್ಲಿಮರು. 4 ದಶಕಗಳ ಹಿಂದೆ ಖುದ್ದು ಆಯಾತೊಲ್ಲಾ ಅಲಿ ಖಮೇನಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ನಿರ್ಮಿಸಿದ ಆಸ್ಪತ್ರೆಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದ್ದರಿಂದ ಧಾರ್ಮಿಕ ಗುರು ಖಮೇನಿ ಮೇಲೆ ಎಲ್ಲಿಲ್ಲದ ಪ್ರೀತಿ ತೋರ್ಪಡಿಸುತ್ತಿದ್ದರು.
ಅಮೆರಿಕ ಮತ್ತು ಇಸ್ರೇಲ್ ಫೆ.28ರಂದು ನಡೆಸಿದ ಜಂಟಿ ದಾಳಿಯಲ್ಲಿ ಆಯಾತೊಲ್ಲಾ ಅಲಿ ಖಮೇನಿ ಮೃತಪಟ್ಟಾಗ ಇಡೀ ಅಲಿಪುರ ಗ್ರಾಮ ಸ್ವಯಂ ಪ್ರೇರಿತವಾಗಿ ಬಂದ್ ಆಗಿತ್ತಲ್ಲದೆ ಸಾವಿರಾರು ಗ್ರಾಮಸ್ಥರು ಗ್ರಾಮದಲ್ಲಿ ಮೌನ ಮೆರವಣಿಗೆ ನಡೆಸಿ, ಸಂತಾಪ ಸೂಚಿಸಿದ್ದರು. ಇಸ್ರೇಲ್ ಹಾಗೂ ಅಮೆರಿಕ ನಾಶವಾಗುತ್ತವೆ ಎಂದು ಶಾಪಹಾಕಿದ್ದರು. ಗ್ರಾಮದಲ್ಲಿ ಮೂರು ದಿನ ಶೋಕಾಚರಣೆ ಘೋಷಿಸಿದ್ದರು. ಈ ಕಾರಣಕ್ಕೆ ಗ್ರಾಮ ಇಡೀ ದೇಶದ ಗಮನ ಸೆಳೆದಿತ್ತು.
ಜು. 9ರಂದು ಇರಾನ್ನ ಮಶಾದ್ನಲ್ಲಿ ನಡೆಯಲಿರುವ ಖಮೇನಿ ಅಂತ್ಯಕ್ರಿಯೆ ಪ್ರಕ್ರಿಯೆಗಳನ್ನು ವೀಕ್ಷಿಸಲು ಗ್ರಾಮದ ಅಸ್ತೇನಿ ಮಸೀದಿ ಒಳಾಂಗಣದಲ್ಲಿ ಬೃಹತ್ ಎಲ್ಇಡಿ ಪರದೆಗಳನ್ನು ಅಳವಡಿಸಿ ನೇರಪ್ರಸಾಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 1500-2000 ಮಂದಿ ಭಾಗವಹಿಸಿದ್ದರು. ಜೊತೆಗೆ ಪ್ರಾರ್ಥನೆ ಸಲ್ಲಿಸಿ, ತಮ್ಮ ನಾಯಕನಿಗೆ ಭಕ್ತಿ ಭಾವದಿಂದ ಅಂತಿಮ ವಿದಾಯ ಹೇಳಿದರು.
ಇರಾನ್ನ ಮಶಾದ್ ನಗರದಲ್ಲಿ ನಡೆಯಲಿರುವ ಅಂತಿಮ ವಿಧಿ ವಿದಾನಗಳಲ್ಲಿ ನೇರವಾಗಿ ಭಾಗವಹಿಸಲು ಅಲಿಪುರ ಗ್ರಾಮದಿಂದ 20 ಮಂದಿ ತೆರಳಿದ್ದಾರೆ.