'ನಾನು ಬಿಎಸ್‌ವೈ ಜೊತೆ ಅಡ್ಜಸ್ಟ್ ಆಗ್ತೀನಿ ನೀವೇನ್ ಮಾಡ್ತೀರಾ ಅಂತಾರೆ HDK' : ಹೊಸ ಬಾಂಬ್

By Kannadaprabha NewsFirst Published Dec 8, 2020, 8:56 AM IST
Highlights

ನಾನು ಬಿ ಎಸ್‌ ಯಡಿಯೂರಪ್ಪ ಜೊತೆ ಅಡ್ಜಸ್ಟ್ ಆಗ್ತೀನಿ ನೀವೇನ್ ಮಾಡ್ತೀರಾ ಎಂದು ಸ್ವತಃ ಕುಮಾರಸ್ವಾಮಿಯೇ ಹೇಳ್ತಾರೆ ಎಂದು ನಾಯಕರೋರ್ವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. 

ಮದ್ದೂರು (ಡಿ.08):  ದೂರವಾಗುತ್ತಿರುವ ಒಕ್ಕಲಿಗ ಸಮುದಾಯದ ಸಿಂಪತಿ ಗಿಟ್ಟಿಸಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಕೊಪ್ಪ ಸಮೀಪ ಕೌಡ್ಲೆ ಗ್ರಾಮದಲ್ಲಿ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಒಕ್ಕಲಿಗರನ್ನು ಮತ್ತಷ್ಟುಹತ್ತಿರ ಮಾಡಿಕೊಳ್ಳಲು ಅವಶ್ಯಕತೆ ಇಲ್ಲದ ಹೇಳಿಕೆ ಕೊಡುತ್ತಾರೆ. ಇದು ರಾಜ್ಯದ ಜನತೆಗೆ ಅರ್ಥವಾಗಿದೆ ಎಂದರು.

ಕಾಂಗ್ರೆಸ್‌ಗೆ ಬಿಗ್ ಶಾಕ್: ರಾಜಕೀಯ ನಿವೃತ್ತಿ ಘೋಷಿಸಿದ ಕರ್ನಾಟಕದ ಕೈ ಹಿರಿಯ ನಾಯಕ ..

ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್‌ ಅನ್ನು ರಾಜ್ಯದ ನಂಬರ್‌ ಒನ್‌ ಪಕ್ಷ ಮಾಡಬಹುದಿತ್ತು. ಇವರಿಗೆ ಕಾಂಗ್ರೆಸ್‌ ಎಲ್ಲಾ ತರಹದ ಅವಕಾಶ ಕೊಟ್ಟಿದೆ. ಜೆಡಿಎಸ್‌ ಅದ್ವಾನದ ಪರಿಸ್ಥಿತಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾರಣ ಹೊರತು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅಲ್ಲ ಎಂದು ತಿಳಿಸಿದರು.

ದೇವೇಗೌಡರೇ ಉತ್ತರ ಕೊಡಲಿ: ಡಿಸಿಸಿ ಬ್ಯಾಂಕ್‌ ನೆಪವೊಡ್ಡಿ ಮುಖ್ಯಮಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಳಿ ಎಚ್‌.ಡಿ.ಕುಮಾರಸ್ವಾಮಿ ಹೋಗಿದ್ದರು. ಮಸ್ಕಿ, ಬಸವ ಕಲ್ಯಾಣ ನಡೆಯುವ ಉಪ ಚುನಾವಣೆಗೆ ಜೆಡಿಎಸ್‌ನಿಂದ ಅಭ್ಯರ್ಥಿಗಳನ್ನು ಹಾಕಲ್ಲ ಅಂತಾರೆ. ಅವರ ಪಕ್ಷದ ಶಾಸಕಾಂಗ ಸಭೆಯಲ್ಲಿ ಜೆಡಿಎಸ್‌ ಶಾಸಕರಿಗೆ ಎಚ್‌.ಡಿ.ಕುಮಾರಸ್ವಾಮಿ ಹೇಳುತ್ತಾರೆ. ನೀವು ಕಾಂಗ್ರೆಸ್‌ ಅಥವಾ ಬಿಜೆಪಿ ಹೋಗ್ತಿರಾ?. ನಾನೇ ಸಿಎಂ ಬಿ.ಎಸ್‌.ಯಡಿಯೂರಪ್ಪ ಬಳಿ ಅಡ್ಜಸ್ವ್‌ ಆಗ್ತೀನಿ ನೀವೆಲ್ಲಿ ಹೋಗ್ತೀರಾ ಅಂತಾರೆ. ಇದಕ್ಕೆಲ್ಲ ಉತ್ತರ ದೇವೇಗೌಡರೇ ಕೊಡಬೇಕು ಎಂದು ತಿಳಿಸಿದರು.

ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಬಿ.ವಿವೇಕಾನಂದ, ನಾಗಮಂಗಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌, ಮುಖಂಡರಾದ ಕೃಷ್ಣೇಗೌಡ, ರಮೇಶ್‌, ಗಟ್ಟಹಳ್ಳಿ ರಮೇಶ್‌, ಮಂಚಣ್ಣ, ಶ್ರೀಧರ್‌, ವಿಜೇಂದ್ರ, ಕುಮಾರ್‌ , ಪದ್ಮನಾಬ್‌ ಇತರರು ಇದ್ದರು.

click me!