'ಕೊರೋನಾ ಅಟ್ಟಹಾಸ : ಮಗುವಿಗೂ ಮಾಸ್ಕ್‌ ಹಾಕಿ'

By Kannadaprabha NewsFirst Published Apr 20, 2021, 3:14 PM IST
Highlights

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಜೋರಾಗಿದ್ದು, ಎಲ್ಲೆಡೆ ತೀವ್ರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿಯೂ ಅಧಿಕಾರಿಗಳು ಎಚ್ಚರಿಕಾ ಕ್ರಮ  ವಹಿಸುತ್ತಿದ್ದಾರೆ.

 ಚನ್ನರಾಯಪಟ್ಟಣ (ಏ.20):  ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣಗಳು ಹೆಚ್ಚತ್ತಿದ್ದು, ಸಾರ್ವಜನಿಕರು ಸೋಂಕಿನ ಕುರಿತಾಗಿ ಎಚ್ಚರಿಕೆ ವಹಿಸದೇ ತಾತ್ಸರ ನಿಲುವು ತಾಳಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಮತ್ತು ಪುರಸಭಾ ಮುಖ್ಯಾ​ಧಿಕಾರಿಗಳೇ ಮಾರ್ಷಲ್‌ಗಳಾಗಿ ಕಲ್ಯಾಣ ಮಂಟಪಗಳ ಮೇಲೆ ದಾಳಿ ನಡೆಸಿ ನಿಯಮ ಪಾಲಿಸದವರಿಗೆ ದಂಡ ವಿ​ಧಿಸಿದ ಘಟನೆ ಸೋಮವಾರ ನಡೆಯಿತು.

ಕೋರೊನಾ 2ನೇ ಅಲೆ ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಜೆ.ಬಿ.ಮಾರುತಿ ಮತ್ತು ಪುರಸಭಾ ಮುಖ್ಯಾ​ಧಿಕಾರಿ ಕೃಷ್ಣಮೂರ್ತಿ ಅವರು ಪುರಸಭಾ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿಯೊಂದಿಗೆ ಪಟ್ಟಣದಲ್ಲಿ ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಗಳ ಮೇಲೆ ದಾಳಿ ನಡೆಸಿದರು.

ದಾಳಿ ವೇಳೆ ಮೊದಲಿಗೆ ಶಿವಜ್ಯೋತಿ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿದರು. ಅಲ್ಲಿ ಜನಸಮೂಹ ಕಡಿಮೆಯಿತ್ತಾದರೂ ಸಾಮಾಜಿಕ ಅಂತರವಿಲ್ಲದಿರುವುದು ಮತ್ತು ಕೆಲ ಮಂದಿ ಮಾಸ್ಕ್‌ ಧರಿಸದಿರುವುದು ಕಂಡುಬಂತು. ಮಾಸ್ಕ್‌ ಧರಿಸದರವರಿಗೆ  250 ರು. ದಂಡ ವಿ​ಧಿಸಿ ಕೋವಿಡ್‌ ನಿಯಮ ಪಾಲನೆ ಕುರಿತು ನಿರ್ಲಕ್ಷ್ಯ ವಹಿಸಿದ್ದ ಕಲ್ಯಾಣ ಮಂಟಪದ ವ್ಯವಸ್ಥಾಪಕರಿಗೆ 1000 ರು. ದಂಡ ಹಾಕಲಾಯಿತು.

ಜಾಗೃತಿ ಮೂಡಿಸಿದ ತಹಸೀಲ್ದಾರ್‌, ಮುಖ್ಯಾಧಿಕಾರಿ:  ಅಲ್ಲಿಂದ ದಾಳಿಯು ಪಕ್ಕದ ಗಣಪತಿ ಪೆಂಡಾಲಿನಲ್ಲಿ ನಡೆಯುತ್ತಿದ್ದ ನಾಮಕರಣ ಮಹೋತ್ಸವದತ್ತ ಸಾಗಿ ಅಲ್ಲಿ ತುಸು ಹೆಚ್ಚಾಗೆ ಇದ್ದ ಜನಸಂದಣೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲದಿದ್ದರೂ ದಾಳಿ ವಿಚಾರ ಅರಿತು ಮಾಸ್ಕ್‌ ಧರಿಸಿದ್ದು ಕಂಡುಬಂತು. ತಹಸೀಲ್ದಾರ್‌ ಸೀದಾ ವೇದಿಕೆಯ ಮೇಲೆ ಮಾಸ್ಕ್‌ ಇಲ್ಲದೇ ನಾಮಕರಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಮಗುವಿನ ತಂದೆ, ತಾಯಿ ಮಾಸ್ಕ್‌ ಹಾಕದ ಹಿನ್ನೆಲೆಯಲಿ ಸ್ಥಳದಲ್ಲೆ ಮಾಸ್ಕ್‌ ಧರಿಸಿ ಮಗುವಿಗೂ ಮಾಸ್ಕ್‌ ತೊಡಿಸಿ ಸೋಂಕಿನ ತೀವ್ರತೆಯನ್ನು ತಿಳಿಸಿ ನಿಮ್ಮೆಲ್ಲರ ಸುರಕ್ಷತೆ ದೃಷ್ಟಿಯಿಂದ ದಯಮಾಡಿ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವಿನಂತಿಸಿದರು.

ರಾಜ್ಯಾದ್ಯಂತ ಏನೆಲ್ಲ ಟಫ್ ರೂಲ್ಸ್ ಜಾರಿಯಾಗುತ್ತೆ? ...

ಕಲ್ಯಾಣ ಮಂಟಪಗಳ ಮೇಲೆ ನಿಗಾಕ್ಕೆ 5 ತಂಡ

ತದನಂತರ ಮಾತನಾಡಿದ ತಹಶೀಲ್ದಾರ್‌ ಜೆ.ಬಿ.ಮಾರುತಿ, ಸರ್ಕಾರದ ಸುತ್ತೊಲ್ಲೆಯಂತೆ ಕಲ್ಯಾಣ ಮಂಟಪಗಳಲ್ಲಿ 100 ಜನರಿಗಷ್ಟೆಅವಕಾಶ ನೀಡಿ ಮದುವೆಗೆ ನಡೆಸಲು ಸೂಚಿಸಿದ್ದು, ಈಗಾಗಲೇ ತಾಲೂಕಿನ ಎಲ್ಲಾ ಕಲ್ಯಾಣ ಮಂಟಪಗಳಿಗೆ ಮಾರ್ಗಸೂಚಿ ತಿಳಿಸಲಾಗಿದೆ. ಆದಾಗ್ಯೂ ಇದು ಪಾಲನೆಯಾಗದ ಬಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು 2 ಕಲ್ಯಾಣ ಮಂಟಪಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿ ಸಾಮಾಜಿಕ ಅಂತರವಿಲ್ಲದಿರುವುದು ಕಂಡುಬಂದಿದೆ. ಸರ್ಕಾರದ ನಿಯಮಾವಳಿ ಕೈಗೊಳ್ಳುವ ಕುರಿತು ಮಂಗಳವಾರದಂದು ಎಲ್ಲ ಕಲ್ಯಾಣ ಮಂಟಪಗಳ ಮಾಲೀಕರ ಸಭೆ ಕರೆದು ತಿಳಿಸಲಾಗುವುದು ಎಂದರು.

ಕಲ್ಯಾಣ ಮಂಟಪಗಳ ಮೇಲೆ ನಿಗಾ ವಹಿಸಲು 5 ತಂಡ ರಚನೆ ಮಾಡಿದ್ದು, ಮದುವೆ ಸಂದರ್ಭ ಕಲ್ಯಾಣಮಂಟಪಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಪುರಸಭೆಯು 5 ತಂಡ ರಚಿಸಿ ಪಟ್ಟಣದ 5 ರಸ್ತೆಗಳಲ್ಲಿ ಸಾಮಾಜಿಕ ಅಂತರದ ಕುರಿತಾಗಿ ಪರಿಶೀಲನೆ ನಡೆಸಲಿದ್ದಾರೆ. ಇನ್ನೂ ವರ್ತಕರು, ಕಾಂಡಿಮೆಂಟ್ಸ್‌, ಹೊಟೇಲ್‌ ಮಾಲೀಕರ ಸಭೆ ನಡೆಸಿ ಕೋವಿಡ್‌ ಹಿನ್ನಲೆಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತಾಗಿ ಸೂಚಿಸಿ ತಿಂಡಿ ತಿನಿಸುಗಳನ್ನು ಪಾರ್ಸೆಲ್‌ ಕೊಡುವಂತೆ, ಬೇಕರಿಗಳಲ್ಲಿ ಟೀ, ಕಾಫಿ ನೀಡದಂತೆ, ಹಾಗೂ ಪೇಪರ್‌ ತಟ್ಟೆ, ಲೋಟ ಬಳಕೆ ಮಾಡುವಂತೆ ತಿಳಿಸಲಾಗಿದೆ ಎಂದರು.

ಇನ್ನೂ ತಾಲೂಕಿನೆಲ್ಲಿಯೂ ಹಬ್ಬ, ಜಾತ್ರೆ ಸೇರಿ ಧಾರ್ಮಿಕ ಸಭೆಗೆ ಅವಕಾಶ ನೀಡದಂತೆ ಆರ್ಚಕರ ಸಭೆ, ಪಂಚಾಯ್ತಿ ಅಭಿವೃದ್ಧಿ ಅ​ಕಾರಿಗಳ ಸಭೆ ನಡೆಸಿ ಸೂಚನೆ ನೀಡಲಾಗಿದೆ ಎಂದರು.

click me!