ಕೆ.ಆರ್. ಆಸ್ಪತ್ರೆಗೆ ಸಚಿವ ಸೋಮಶೇಖರ್ ದಿಢೀರ್ ಭೇಟಿ

By Suvarna NewsFirst Published Apr 20, 2021, 1:18 PM IST
Highlights

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಮಂಗಳವಾರ ಇಲ್ಲಿನ ಕೆ.ಆರ್.ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಕೋವಿಡ್ ಪ್ರಕರಣಗಳ ಸ್ಥಿತಿಗತಿಯನ್ನು ಅವಲೋಕಿಸಿದರು.
 

ಮೈಸೂರು (ಏ.20): ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಮಂಗಳವಾರ ಇಲ್ಲಿನ ಕೆ.ಆರ್.ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಕೋವಿಡ್ ಪ್ರಕರಣಗಳ ಸ್ಥಿತಿಗತಿಯನ್ನು ಅವಲೋಕಿಸಿದರು.

ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಚಿವರಾದ ಸೋಮಶೇಖರ್ ಅವರು, ವಾರ್ಡ್ ಗಳ ಲಭ್ಯತೆ, ಕೋವಿಡ್ ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಔಷಧಗಳ ಲಭ್ಯತೆ, ಊಟ-ಉಪಹಾರ ಸರಬರಾಜು ಸೇರಿದಂತೆ ಕುಂದು-ಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ವೈದ್ಯಾಧಿಕಾರಿಗಳು ಹಾಗೂ ಸೋಂಕಿತರಿಂದ ಮಾಹಿತಿ ಪಡೆದ ಸಚಿವರು, ಯಾವುದೇ ಸಮಸ್ಯೆಗಳಿದ್ದರೂ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.

ಔಷಧಗಳು ಸೇರಿದಂತೆ ಯಾವುದೇ ನ್ಯೂನತೆಗಳು, ಸಮಸ್ಯೆಗಳಿದ್ದರೂ ತಮಗೆ ತಿಳಿಸಿದರೆ ಸರ್ಕಾರದ ಗಮನಕ್ಕೆ ತಂದು ತಕ್ಷಣ ಬಗೆಹರಿಸಿಕೊಡುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಮೈಸೂರು ಹಾಗೂ ಸುತ್ತಮುತ್ತಲಿನ ಭಾಗದ ಜನತೆಗೆ ಸಮಸ್ಯೆಯಾಗಬಾರು. ಆ ನಿಟ್ಟಿನಲ್ಲಿ ನಾನೂ ಸೇರಿದಂತೆ ಇಲ್ಲಿನ ಜಿಲ್ಲಾಡಳಿತ, ಜನಪ್ರತಿನಿಧಿಗಳು ಬದ್ಧವಾಗಿದ್ದೇವೆ ಎಂದು ತಿಳಿಸಿದರು.

ಕೊರೋನಾಟ್ಟಹಾಸ : ಕರ್ನಾಟಕ ಅರ್ಧ ಬಂದ್‌..? ಏಲೆಲ್ಲಾ ರೂಲ್ಸ್? ...

ಜಿಲ್ಲಾಧಿಕಾರಿಯವಾರದ ರೋಹಿಣಿ ಸಿಂಧೂರಿ, ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಎಲ್.ನಾಗೇಂದ್ರ ಸೇರಿದಂತೆ ಇನ್ನಿತರ ಮುಖಂಡರು ಇದೇ ವೇಳೆ ಉಪಸ್ಥಿತರಿದ್ದರು.

ಎಚ್ಚರದಿಂದಿರಲು ಜನತೆಗೆ ಮನವಿ

ಈಗ ಕಾಡುತ್ತಿರುವ ಕೋವಿಡ್ ಎರಡನೇ ಅಲೆ ಬಹಳ ಗಂಭೀರವಾಗಿದೆ. ಹೀಗಾಗಿ ಸಾರ್ವಜನಿಕರು ಸಹ ಇದನ್ನು ಅಷ್ಟೇ ಗಂಭೀರವಾಗಿ ಪರಿಗಣಿಸಬೇಕು. ಸ್ವಯಂಪ್ರೇರಿತವಾಗಿ ಸರ್ಕಾರದ ಜೊತೆಗೆ ಕೈಜೋಡಿಸಿ ನಮ್ಮ ನಾಡನ್ನು ಕೊರೋನಾ ಮುಕ್ತ ಮಾಡುವಲ್ಲಿ ಶ್ರಮವಹಿಸಬೇಕು. ಯಾರಿಗೇ ಸಹ ರೋಗದ ಲಕ್ಷಣಗಳು ಕಂಡುಬಂದರೆ ತಕ್ಷಣ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಸೋಂಕು ಉಲ್ಬಣವಾಗದಂತೆ ನೋಡಿಕೊಳ್ಳಬೇಕು. ಜೊತೆಗೆ ಅನಾವಶ್ಯಕವಾಗಿ ಹೊರಗಡೆ ಯಾರೂ ಸಂಚರಿಸಬಾರದು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಿ, ಆಗಾಗ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಜೊತೆಗೆ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಚಿವರಾದ ಸೋಮಶೇಖರ್ ಅವರು ಜನತೆಯಲ್ಲಿ ಮನವಿ ಮಾಡಿದರು.

click me!