Omicron Threat: ಧರ್ಮಾ​ನು​ಷ್ಠಾ​ನಕ್ಕೆ ರೋಗ ತಡೆ​ಯುವ ಶಕ್ತಿ: ಸ್ವರ್ಣ​ವಲ್ಲೀ ಶ್ರೀ

By Kannadaprabha NewsFirst Published Dec 23, 2021, 6:37 AM IST
Highlights

*   ಸಹಸ್ರ ಚಂಡಿಕಾ ಯಾಗದ ಪೂರ್ಣಾ​ಹುತಿ ಕಾರ್ಯ​ಕ್ರ​ಮ​ದಲ್ಲಿ ಸ್ವರ್ಣ​ವಲ್ಲೀ ಶ್ರೀ
*   ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಸಹಸ್ರ ಚಂಡಿಕಾ ಯಾಗ
*   ಆಸ್ತಿಕರಿಗೆ ನಿಷ್ಠೆ, ಶ್ರದ್ಧೆ, ಆಚರಣೆಗಳು ಅಗತ್ಯ ಬೇಕು 

ಯಲ್ಲಾಪುರ(ಡಿ.23):  ಇಂದಿನ ಸಮಾಜದ ಜನರಲ್ಲಿ ಧಾರ್ಮಿಕ ಭಾವನೆಯ ಕೊರತೆ ಮತ್ತು ಪ್ರತಿಯೊಬ್ಬರ ದೇಹದಲ್ಲಿ ಸುದೀರ್ಘ ಕಾಲದ ದೋಷ ಸಂಚಯ, ನಿದ್ರಾ ಕೊರತೆಯ ಕಾರಣದಿಂದಾಗಿ ರೋಗಗಳ(Disease) ಸೃಷ್ಟಿಯಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ, ಪ್ರತಿಯೊಬ್ಬರೂ ಅಗತ್ಯವಿರುವ ನಿವಾರಣೋಪಾಯಗಳನ್ನು ಅನುಸರಿಸಬೇಕಿದೆ ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ(Shri Gangadharendra Sarswati Swamiji) ನುಡಿದರು.

ಅವರು ಬುಧ​ವಾರ ತಾಲೂಕಿನ ಉಮ್ಮಚಗಿಯಲ್ಲಿ ಶ್ರೀ ಶ್ರೀಮಾತಾ ಸಂಸ್ಕೃತ ವೈದಿಕ ಶಿಕ್ಷಣ ಸಂಸ್ಥೆ (ಕೋಟೆಮನೆ), ಶ್ರೀ ಶ್ರೀಮಾತಾ ಸಂಸ್ಕೃತ ಮಹಾಪಾಠಶಾಲೆ 5 ದಿನಗಳಿಂದ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಸಹಸ್ರ ಚಂಡಿಕಾ ಯಾಗದ(Chandika Yaga) ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪಾದಪೂಜೆ ಸ್ವೀಕರಿಸಿ, ಆಶೀರ್ವಚನ ನೀಡಿದ​ರು. ಬದಲಾಗುತ್ತಿರುವ ಪ್ರಸ್ತುತ ವಾತಾವರಣದಲ್ಲಿ ಅಧಿಕಗೊಳ್ಳುತ್ತಿರುವ ರೋಗ-ರುಜಿನಗಳು ಪರಿಹಾರವಾಗಿ ಸಮಾಜದಲ್ಲಿ ಧಾರ್ಮಿಕ ಭಾವನೆಗಳು ಅಧಿಕಗೊಳ್ಳಲಿ ಎಂಬ ಸದಾಶಯದಿಂದ ಸ್ಥಳೀಯ ವಿದ್ಯಾಸಂಸ್ಥೆಯ ಹಳೆಯ ಮತ್ತು ಇಂದಿನ ವಿದ್ಯಾರ್ಥಿಗಳೇ(Students) ಕೂಡಿ ನಡೆಸುತ್ತಿರುವ ಇಂದಿನ ಕಾರ್ಯಕ್ರಮ ಐತಿಹಾಸಿಕವಾಗಿದ್ದು, ಖಂಡಿತ ಶ್ಲಾಘನೀಯವಾಗಿದೆ ಎಂದರು.

ಶಿರಸಿ: ಬೇಡ್ತಿ ನದಿ ನೀರು ಜೋಡಣೆ ಅವೈಜ್ಞಾನಿಕ, ಸ್ವರ್ಣವಲ್ಲೀ ಶ್ರೀ

ಸಹಸ್ರ ಚಂಡಿಕಾ ಯಾಗವು ಲೋಕದಲ್ಲಿ ಹರಡುತ್ತಿರುವ ವ್ಯಾಧಿಗೆ ಅತ್ಯುತ್ತಮ ಚಿಕಿತ್ಸೆಯೂ(Treatment) ಆಗಿದ್ದು, ಪುನಃ ರೋಗ ಬಾರದಂತೆ ತಡೆಯುವ ಶಕ್ತಿಯುಳ್ಳ ಕಾರ್ಯವೂ ಆಗಿದೆ. ಪ್ರತಿಯೊಬ್ಬರಿಗೂ ನಿತ್ಯ ಧರ್ಮಾನುಷ್ಠಾನ ಎಲ್ಲ ರೋಗಗಳನ್ನು ತಡೆಯುವ ಶಕ್ತಿಯನ್ನು ಹೊಂದಿದೆ ಎಂದ ಶ್ರೀಗಳು, ನೈಮಿತ್ತಿಕ ಅನುಷ್ಠಾನಗಳ ಅನುಸರಣೆಯಿಂದ ಅಧರ್ಮ ಕಳೆದು, ಧರ್ಮ ಸಂಸ್ಥಾಪನೆಯಾಗಲು ಸಾಧ್ಯ ಎಂದರು.

ಎಲ್ಲರಿಗೂ ಗುರುವಾಗುವ ಸಾಮರ್ಥ್ಯವನ್ನು ಹೊಂದಿದ ಬ್ರಾಹ್ಮಣರೇ ಇತ್ತೀಚೆಗೆ ತಮ್ಮ ಆಚರಣೆಗಳಲ್ಲಿ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿರುವುದು ವಿಷಾದನೀಯ. ಪ್ರತಿಯೊಂದಕ್ಕೂ ಒಂದೊಂದು ಕಾಲ ನಿಯಮವಿದ್ದು, ಧರ್ಮಕ್ಕೂ ಉನ್ನತಿ-ಅವನತಿಗಳಿವೆ. ಆದರೆ ಆಸ್ತಿಕರಿಗೆ ನಿಷ್ಠೆ, ಶ್ರದ್ಧೆ, ಆಚರಣೆಗಳು ಅಗತ್ಯ ಬೇಕು ಎಂದರು.

ಮಾತೆಯರ ಪೂರ್ಣಕುಂಭ ಸ್ವಾಗತ ಹಾಗೂ ಭಗವದ್ಗೀತಾ ಪಠಣದೊಂದಿಗೆ ಶ್ರೀಗಳನ್ನು ಸ್ವಾಗತಿಸಲಾಯಿತು. ಭರತನಹಳ್ಳಿ ಸೀಮಾ ಪರಿಷತ್‌, ವೈದಿಕ ಪರಿಷತ್‌ ಹಾಗೂ ಮಾತೃಮಂಡಳಿಯ ವತಿಯಿಂದ ಶ್ರೀಗಳಿಗೆ ಫಲ ಸಮರ್ಪಣೆ ಮಾಡಲಾಯಿತು.

ಶಿರಸಿ: ಬೇಡ್ತಿ-ವರದಾ ಜೋಡಣೆಗೆ ಇನ್ನಷ್ಟು ಚಿಂತನೆ ಅಗತ್ಯ, ಸ್ವರ್ಣವಲ್ಲೀ ಸ್ವಾಮೀಜಿ

ಡಿ. 18ರಂದು ಆರಂಭಗೊಂಡ ಈ ಧಾರ್ಮಿಕ ಕಾರ್ಯಕ್ರಮದ ಮೊದಲ ದಿನ ಬ್ರಹ್ಮಕೂರ್ಚ ಹೋಮ, ಕೂಷ್ಮಾಂಡ ಹೋಮ, ಶುದ್ಧಿ ಕರ್ಮಗಳು, ಗಣಹವನ, ಮಹಾಸಂಕಲ್ಪ, ಋುತ್ವಿಗ್ಚರಣ, ಮಧುಪರ್ಕ, ಚಂಡೀ ಸಪ್ತಶತಿ ಪಾರಾಯಣ; ಡಿ. 19, 20, 21ರಂದು ಚಂಡೀ ಸಪ್ತಶತಿ ಪಾರಾಯಣ, ನವಾರ್ಣ ಮಂತ್ರ ಜಪ, ರಾಜೋಪಚಾರ ಪೂಜಾ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಡಿ. 22ರಂದು ಮುಂಜಾನೆಯಿಂದ ಹವನ ಸಂಕಲ್ಪ, ಅನ್ವಾಧಾನ, ಪ್ರಧಾನ ಆಹುತಿ, ಅಗ್ನಿ ವಿಹರಣ, 150 ಋುತ್ವಿಜರಿಂದ ಸಹಸ್ರ ಚಂಡೀಹವನ, 1 ಲಕ್ಷ ನವಾರ್ಣ ಮಂತ್ರ ಹವನ, ಪೂರ್ಣಾಹುತಿ ಮತ್ತಿತರ ವೈದಿಕ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ಸಂಪನ್ನಗೊಂಡವು.

ಚಂಡಿಕಾ ಯಾಗಕ್ಕೆ ಮೊದಲ ದಿನ ಸಚಿವ ಶಿವರಾಮ ಹೆಬ್ಬಾರ(Shivaram Hebbar), ಮರುದಿನ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri)ಭೇಟಿ ನೀಡಿ, ಪ್ರಸಾದ ಸ್ವೀಕರಿಸಿದರು. ಪೂರ್ಣಾಹುತಿಯ ದಿನದಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ್‌, ಕಾಂಗ್ರೆಸ್‌(Congress) ಧುರೀಣ ಪ್ರಶಾಂತ ದೇಶಪಾಂಡೆ, ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಡಿ.ಎನ್‌. ಗಾಂವ್ಕರ್‌, ಪ್ರಮುಖರಾದ ಎನ್‌.ಎಸ್‌. ಹೆಗಡೆ ಕುಂದರಗಿ, ದೀಪಕ ದೊಡ್ಡೂರು, ನಟರಾಜ ಗೌಡರ್‌, ತಹಸೀಲ್ದಾರ್‌ ಶ್ರೀಕೃಷ್ಣ ಕಾಮ್ಕರ್‌ ಮತ್ತಿತರು ಆಗಮಿಸಿ, ಪ್ರಸಾದ ಸ್ವೀಕರಿಸಿದರು. ಪಾಠಶಾಲಾ ಪ್ರಾಚಾರ್ಯೆ ಶರಾವತಿ ಭಟ್ಟ ಮತ್ತು ಅಧ್ಯಾಪಕ ವೃಂದ, ಸಂಸ್ಥೆಯ ಕಾರ್ಯದರ್ಶಿ ಎಲ್‌.ಜಿ. ಹೆಗಡೆ ಬೆಳಗುಂದ್ಲಿ, ಅಧ್ಯಕ್ಷ ಟಿ.ವಿ. ಹೆಗಡೆ ಬೆದೆಹಕ್ಲು, ಉಪಾಧ್ಯಕ್ಷ ಜಿ.ಜಿ. ಹೆಗಡೆ ಕನೇನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
 

click me!