ಕರ್ನಾಟಕ ಖಾಕಿ ಹಗಲು ದರೋಡೆ: ಉದ್ಯಮಿಯಿಂದ ₹4 ಲಕ್ಷ ಸುಲಿಗೆ ಮಾಡಿದ ಪಿಎಸ್‌ಐ ಸೇರಿ ನಾಲ್ವರು ನಾಪತ್ತೆ!

Published : Jul 29, 2025, 07:25 PM IST
Karnataka Police Robbery

ಸಾರಾಂಶ

ಚಾಮರಾಜನಗರದಲ್ಲಿ ಪೊಲೀಸರೇ ಹಗಲು ದರೋಡೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಉದ್ಯಮಿಯಿಂದ 3.70 ಲಕ್ಷ ರೂ. ಸುಲಿಗೆ ಮಾಡಿದ ಆರೋಪದ ಮೇಲೆ ಪಿಎಸ್ಐ ಸೇರಿದಂತೆ ನಾಲ್ವರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಪೊಲೀಸರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.

ವರದಿ - ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್

ಚಾಮರಾಜನಗರ (ಜು.29): ಇದು ಬೇಲಿಯೆ ಎದ್ದು ಹೊಲವನ್ನ ಮೇಯ್ದ ಕಥೆ.., ಲಾ ಎಂಡ್ ಆರ್ಡರ್ ಕಾಪಾಡ್ತೀವಿಯಂತ ಪಣ ತೊಟ್ಟ ಖಾಕಿಯೇ ರಾಬರಿ ಮಾಡಿದ ದುರಂತ ಕಥೆಯಿದು. ಮೈ ಮೇಲೆ ಖಾಕಿ ಹಾಕಿಕೊಂಡು ಥೇಟ್ ಸಿನ್ಮಾ ಸ್ಟೈಲ್ ನಲ್ಲಿ ತಮಿಳುನಾಡು ಉದ್ಯಮಿ ಬಳಿ ಬರೋಬ್ಬರಿ 3.70 ಲಕ್ಷ ರೂ. ಕಿತ್ತ ಪೊಲೀಸಪ್ಪ ಅಂಡ್ ಟೀಂ ಗಾಯಬ್ ಆಗಿದ್ದು, ಈಗ ಆ ಕರಪ್ಟ್ ಪೊಲೀಸರನ್ನ ಬಂಧಿಸೋಕೆ ಎಸ್.ಪಿ ವಿಶೇಷ ತನಿಖಾ ತಂಡವನ್ನ ರಚಿಸಿದ್ದಾರೆ.

ಕಾಲ ಎಷ್ಟು ಕೆಟ್ಟೊಗಿದೆ ಅಂದ್ರೆ ಲಾ ಅಂಡ್ ಆರ್ಡರ್ ಕಾಪೋಡೊ ಪೊಲೀಸರೆ ಈಗ ಹಗಲು ದರೋಡೆಗೆ ಇಳಿದು ಬಿಟ್ಟಿದ್ದಾರೆ.. ಈ ಹಾಳಾದ್ ಕಾಸಿಗಾಗಿ ಮಾನವೀಯತೆ ಮನುಷತ್ವವನ್ನೆ ಬದಿಗೊತ್ತಿಬಿಟ್ಟಿದ್ದಾರೆ.. ಕಳ್ಳ ಕಾಕರನ್ನ ಹಿಡ್ದು ಒದ್ದು ಒಳಗೆ ಹಾಕೋ ಕೆಲ್ಸ ಮಾಡ್ಬೇಕಾದವರೆ ಈಗ ತಮಿಳುನಾಡು ಉದ್ಯಮಿಯೊಬ್ಭರ ಬಳಿ 3 ಲಕ್ಷದ 70 ಸಾವಿರ ಸುಲಿಗೆ ಮಾಡಿ ಈಡಿ ಪೊಲೀಸ್ ಡಿಪಾರ್ಟ್ ಮೆಂಟ್ ಸಮಾಜದ ಮುಂದೆ ತಲೆ ತಗ್ಗಿಸುವಂತ ಪರಿಸ್ಥಿತಿ ಎದುರಾಗಿದೆ..

ಅಂದ ಹಾಗೇ ಮೈ ಮೇಲೆ ಖಾಕಿ ಹಾಕೊಂಡು ಉದ್ಯಮಿಯನ್ನ ಸುಲಿಗೆ ಮಾಡಿದ ಆ ಸೂಪರ್ ಕಾಪ್ ಯಾರು ಅಂದರೆ ಆತ ಬೇರಾರು ಅಲ್ಲ ಇದೆ ಚಾಮರಾಜನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿಎಸ್ಐ ಅಯ್ಯನಗೌಡ, ಅದೇ ಠಾಣೆಯ ಕಾನ್ಸ್ ಟೇಬಲ್ ಗಳಾದ ಮೋಹನ್ ಮಹೇಶ್ ಹಾಗೂ ಚಾಮರಾಜನಗರ ಟೌನ್ ಠಾಣೆಯ ಕಾನ್ಸ್ ಟೇಬಲ್ ಬಸವಣ್ಣರ ಮೇಲೆ ಎಫ್ ಐ ಆರ್ ಆಗಿದ್ದು ಎಲ್ಲ 4 ಮಂದಿ ಆರೋಪಿಗಳು ಈಗ ತಲೆ ಮರೆಸಿಕೊಂಡಿದ್ದಾರೆ. ಇನ್ಫಮೇಷನ್ ಕನ್ಫರ್ಮ್ ಆದ್ಮೇಲೆ 4 ಮಂದಿ ಪೊಲೀಸಪ್ಪರನ್ನ ಸ್ವತಃ ಎಸ್.ಪಿ ಡಾ ಬಿಟಿ ಕವಿತಾ ಅಮಾನತು ಮಾಡಿದ್ದಾರೆ.

ಘಟನೆಯ ವಿವರವೇನು?

ಜುಲೈ 26ನೇ ತಾರೀಖು ತಮಿಳುನಾಡು ಮೂಲದ ಉದ್ಯಮಿ ಸಚ್ಚಿದಾನಂದ ಮೂರ್ತಿಗೆ ಕರೆ ಮಾಡಿದ ಸೈಯದ್ ಅನ್ಸಾರಿ ಹಾಗೂ ಇಮ್ರಾನ್ ₹3 ಲಕ್ಷ ಹಣ ತನ್ನಿ, ಆ ಹಣವನ್ನ ಒಂದು ತಿಂಗಳ ಒಳಗಾಗಿ ಡಬಲ್ ಮಾಡಿ ಕೊಡ್ತೀವಿ ಅಂತ ಪುಂಗಿದ್ದರು. ಈ ವಿಚಾರ ನಂಬಿದ ಉದ್ಯಮಿ ಸಚ್ಚಿದಾನಂದ ಇದೇ ಜುಲೈ 26 ರಂದು 3 ಲಕ್ಷ ರೂ. ಕ್ಯಾಶ್ ತಗೊಂಡು ಸೀದಾ ಚಾಮರಾಜನಡರದ ಡೆಲ್ಲಿ ದರ್ಬಾರ್ ಹೋಟೇಲ್ ಗೆ ಬಂದಿದ್ದರು. ಈ ವೇಳೆ ಮೊದಲೇ ಪಕ್ಕಾ ಪ್ಲಾನ್ ಮಾಡಿದ ರೀತಿ ಅನ್ಸಾರಿ ಹಾಗೂ ಸೈಯದ್ ಸಿಇಎನ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅಯ್ಯನಗೌಡಗೆ ಮ್ಯಾಟರ್ ತಿಳಿಸಿದ್ದಾರೆ. 

ತಕ್ಷಣವೇ ಎಚ್ಚೆತ್ತ ಅಯ್ಯನಗೌಡ 3 ಜನ ಕಾನ್ಸ್ ಟೇಬಲ್ ಜೊತೆ ಸೇರಿ ಡೆಲ್ಲಿ ದರ್ಬಾರ್ ಹೋಟೇಲ್ ಮೇಲೆ ದಾಳಿ ಮಾಡುತ್ತಾರೆ. ಈ ವೇಳೆ ಉದ್ಯಮಿ ಸಚ್ಚಿದಾನಂದರಿಗೆ ಧಮ್ಕಿ ಹಾಕುತ್ತಾರೆ. ನಿಮ್ಮ ಮೇಲೆ ಕೇಸ್ ರಿಜಿಸ್ಟರ್ ಆಗಬಾರದು ಅಂದ್ರೆ 4 ಲಕ್ಷ ರೂ. ಹಣ ಕೊಡಿ ಎಂದು ಬೆದರಿಸಿದ್ದಾರೆ. ಅದೇ ರೀತಿ ಉದ್ಯಮಿ ಬಳಿಯಿದ್ದ ₹3 ಲಕ್ಷ ಹಣವನ್ನು ಕಿತ್ತುಕೊಂಡಿದ್ದಲ್ಲದೇ, ಪುನಃ 70 ಸಾವಿರ ಹಣವನ್ನ ಫೋನ್ ಪೇ ಮೂಲಕ ಅನ್ಸಾರಿ ಎಂಬ ಮತ್ತೊಬ್ಬ ಆರೋಪಿಯ ಖಾತೆಗೆ ಹಾಕಿಸಿಕೊಳ್ಳುತ್ತಾರೆ. ಇದರಿಂದ ರೊಚ್ಚಿಗೆದ್ದ ಉದ್ಯಮಿ ಸಚ್ಚಿದಾನಂದ ಸೀದಾ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಇನ್ನು ಆರೋಪಿಗಳಾದ ಅನ್ಸಾರಿ ಹಾಗೂ ಸೈಯದ್‌ನ ಬಂಧನ ಆಗುತ್ತಿದ್ದಂತೆ ಪಿಎಸ್ಐ ಅಯ್ಯನಗೌಡ, ಕಾನ್ಸ್ ಟೇಬಲ್ ಗಳಾದ ಬಸವಣ್ಣ, ರಮೇಶ್ ಹಾಗೂ ಮೋಹನ್ ಈಗ ತಲೆ ಮರೆಸಿಕೊಂಡಿದ್ದಾರೆ. ಇದೀಗ ಎಸ್ಕೇಪ್ ಆದ ಪೊಲೀಸರ ಬಂಧನಕ್ಕಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಅದೇನೆ ಹೇಳಿ ನೊಂದವರಿಗೆ ನ್ಯಾಯ ಕೊಡಿಸಬೇಕಾದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೆ ಈ ರೀತಿ ಹಣಕ್ಕಾಗಿ ಹಗಲು ದರೋಡೆಗೆ ಇಳಿದಿದ್ದು ನಿಜಕ್ಕೂ ದುರಂತವೇ ಸರಿ..

PREV
Read more Articles on
click me!

Recommended Stories

ಒಣಬೇಸಾಯ ಜಾಗದಲ್ಲಿ ಡ್ರ್ಯಾಗನ್ ಫ್ರುಟ್ ಬೆಳೆದು ಯಶಸ್ವಿಯಾದ ಪದವೀಧರೆ; 10 ಟನ್‌ಗೂ ಅಧಿಕ ಇಳುವರಿ
ಇಡೀ ಊರಿಗೆ ಊಟ ಹಾಕಿಸಿ ಎತ್ತಿನ ಹುಟ್ಟುಹಬ್ಬ ಆಚರಿಸಿದ ರೈತ; ಗ್ರಾಮದಲ್ಲಿ ಹಬ್ಬದ ವಾತಾವರಣ