ಗದಗ: ಸಿ.ಸಿ. ಪಾಟೀಲರಿಗೆ ಮೂರನೇ ಬಾರಿ ಒಲಿದ ಅದೃಷ್ಟ..!

By Kannadaprabha NewsFirst Published Aug 5, 2021, 3:36 PM IST
Highlights

*  ಕೋವಿಡ್‌ನಲ್ಲಿ ಉತ್ತಮ ನಿರ್ವಹಣೆ ಮತ್ತೊಮ್ಮೆ ಸಚಿವ ಸ್ಥಾನಕ್ಕೆ ಅರ್ಹತೆ
*  ಗದಗ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಹರ್ಷ
*  ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದು ಮತ್ತೆ ಸಚಿವರಾಗುವಂತೆ ಮಾಡಿದೆ
 

ಶಿವಕುಮಾರ ಕುಷ್ಟಗಿ

ಗದಗ(ಆ.05):  ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಚಿಸಿದ ಸಚಿವ ಸಂಪುಟದಲ್ಲಿ ನಿರೀಕ್ಷೆಯಂತೆ ಸಿ.ಸಿ. ಪಾಟೀಲ ಮತ್ತೊಮ್ಮೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಹತ್ತಾರು ಚರ್ಚೆ, ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಹರ್ಷಕ್ಕೆ ಕಾರಣವಾಗಿದೆ.

Latest Videos

ಜಿಲ್ಲೆಯಲ್ಲಿ ಸಂಘ ಪರಿವಾರದೊಂದಿಗೆ ಉತ್ತಮ ಬಾಂಧವ್ಯ, ಪಕ್ಷದ ಕಾರ್ಯಕರ್ತರೊಂದಿಗೆ ಉತ್ತಮ ಸಂವಹನ, ಜಿಲ್ಲೆಯ ಇನ್ನುಳಿದ ಕ್ಷೇತ್ರದ ಶಾಸಕರೊಂದಿಗೆ ಸಮನ್ವಯತೆ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಇನ್ನುಳಿದ ಶಾಸಕರ ಕ್ಷೇತ್ರದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪವಿಲ್ಲದ ಅಧಿಕಾರ ನಿರ್ವಹಣೆ, ಆಡಳಿತ, ವಿರೋಧ ಪಕ್ಷ ಸೇರಿದಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ರೀತಿ ಅವರಿಗೆ ಮರಳಿ ಸಚಿವ ಸ್ಥಾನ ಲಭ್ಯವಾಗುವಂತೆ ಮಾಡಿದೆ.

ಉತ್ತಮ ನಿರ್ವಹಣೆ:

ಯಡಿಯೂರಪ್ಪ ಸರ್ಕಾರದಲ್ಲಿ 2ನೇ ಬಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಎದುರಾದ ಕೋವಿಡ್‌ 1 ಮತ್ತು 2 ನೇ ಅಲೆ ನಿರ್ವಹಣೆಯಲ್ಲಿ ರಾಜ್ಯಕ್ಕೆ ಮಾದರಿಯಾಗುವ ಕಾರ್ಯ ಮಾಡಿದ್ದು, ಕೋವಿಡ್‌ ಸಾವಿನ ನಿಯಂತ್ರಣ, ಕೆಲವೇ ತಿಂಗಳಲ್ಲಿ ಆರೋಗ್ಯ ಇಲಾಖೆಯ ಮೂಲ ಸೌಕರ್ಯ ಹೆಚ್ಚಿಸಿದ್ದು, ಆಕ್ಸಿಜನ್‌ ಉತ್ಪಾದನೆಗೆ ಕ್ರಮ ಕೈಗೊಂಡಿದ್ದು ರಾಜ್ಯದಲ್ಲೇ ಮಾದರಿಯಾಗಿದೆ. ಪಂಚಮಸಾಲಿ ಹೋರಾಟದ ಸಂದರ್ಭದಲ್ಲಿ ಸರ್ಕಾರಕ್ಕೆ ತೀವ್ರ ಮುಜುಗರ ಆಗುತ್ತಿದ್ದ ಸಂದರ್ಭದಲ್ಲಿ ಸಚಿವ ನಿರಾಣಿ ಜೊತೆ ಸೇರಿ ಉತ್ತಮವಾಗಿ ನಿರ್ವಹಿಸಿ ಸರ್ಕಾರ ಮತ್ತು ಹೋರಾಟಗಾರರ ಮಧ್ಯೆ ಕೊಂಡಿಯಾಗಿ ಕಾರ್ಯ ನಿರ್ವಹಿಸಿದ್ದು ಸಹ ಅವರು ಮರಳಿ ಸಚಿವ ಸ್ಥಾನ ಸಿಗುವಂತೆ ಮಾಡಿದೆ.

ರಾಜ್ಯ ಸರ್ಕಾರ ರೈತರ ಪರವಾಗಿದೆ: ಸಚಿವ ಸಿ.ಸಿ. ಪಾಟೀಲ್‌

ಮಾರ್ಗದರ್ಶನ:

ಸಿ.ಸಿ. ಪಾಟೀಲ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ವೈ ಅವರ ಪರಮಾತ್ಮ ಶಿಷ್ಯ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗಿನ ಆತ್ಮೀಯತೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾರ್ಗದರ್ಶನ ಸಿ.ಸಿ. ಪಾಟೀಲರಿಗೆ ನೆರವಾಗಿದೆ. ಕಳೆದ ಕೆಲ ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ಚಟುವಟಿಕೆ ಪ್ರಹಸನಗಳಿಂದ ದೂರ ಉಳಿದಿದ್ದು, ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದು ಇವೆಲ್ಲವೂ ಮತ್ತೆ ಅವರು ಸಚಿವರಾಗುವಂತೆ ಮಾಡಿದೆ.

ರಾಜಕೀಯ ಹೆಜ್ಜೆಗಳು:

ಸಿ.ಸಿ. ಪಾಟೀಲ 22 ಅಕ್ಟೋಬರ್‌ 1958 ರಂದು ಆಚಮಟ್ಟಿ ಗ್ರಾಮದಲ್ಲಿ ಜನಿಸಿದ್ದು, ಪಂಚಮಸಾಲಿ ಸಮಾಜದಿಂದ ಬಂದವರಾಗಿರುವ ಇವರು, ಕೃಷಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ್ದು, 1995 ಬೆಳಗಾವಿ ಜಿಪಂ ಸದಸ್ಯನಾಗಿ ಚುನಾಯಿತಗೊಂಡು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಲಪ್ರಭಾ ಸಹಕಾರಿ ನೂಲಿನ ಗಿರಿಣಿಯ ನಿರ್ದೇಶಕ ಹಾಗೂ ಅಧ್ಯಕ್ಷನಾಗಿ 6 ವರ್ಷಗಳ ಕಾಲ, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ರೇಣುಕಾದೇವಿ ಮೆಕ್ಕೆಜೋಳ ಸಂಸ್ಕರಣಾ ಘಟಕದ ಸಂಸ್ಥಾಪಕ ಅಧ್ಯಕ್ಷನಾಗಿ 6 ವರ್ಷಗಳ ಕಾಲ ಸೇವೆ ಮಾಡಿದ್ದು, 2004 ರಲ್ಲಿ ನರಗುಂದ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದರು. ಬಳಿಕ 2008 ಮತ್ತು 2018 ರಲ್ಲೂ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಈ ಹಿಂದೆ 2010 ರಿಂದ 12 ರ ವರೆಗೆ ಯಡಿಯೂರಪ್ಪ ಮತ್ತು ಸದಾನಂದಗೌಡರ ಸಚಿವ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. 2008 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಸಂಸದೀಯ ಕಾರ್ಯದರ್ಶಿಯಾಗಿದ್ದರು. 2007 ರಲ್ಲಿ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ 2016 ರಿಂದ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ, 2019 ರಲ್ಲಿ ಬಿಎಸ್‌ವೈ ಸಚಿವ ಸಂಪುಟದಲ್ಲಿ ವಿವಿಧ ಹಂತದಲ್ಲಿ ಗಣಿ ಭೂವಿಜ್ಞಾನ, ಅರಣ್ಯ, ಪರಿಸರ, ಜೀವಶಾಸ್ತ್ರ, ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
 

click me!