Kodagu: ಕಾವೇರಿ ನದಿ ಪ್ರವಾಹ ಭೀತಿ: ಮನೆ ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳಿಂದ ನೋಟಿಸ್

By Govindaraj SFirst Published May 31, 2023, 9:43 PM IST
Highlights

ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುವುದಕ್ಕೆ ಇನ್ನು ನಾಲ್ಕು ದಿನಗಳಷ್ಟೇ ಬಾಕಿ ಇದ್ದರೆ, ಈಗಾಗಲೇ ಕಾವೇರಿ ನದಿ ಪಾತ್ರದ 45 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಎದುರಾಗಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿದೆ. 

ವರದಿ: ರವಿ.ಎಸ್,ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಮೇ.31): ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುವುದಕ್ಕೆ ಇನ್ನು ನಾಲ್ಕು ದಿನಗಳಷ್ಟೇ ಬಾಕಿ ಇದ್ದರೆ, ಈಗಾಗಲೇ ಕಾವೇರಿ ನದಿ ಪಾತ್ರದ 45 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಎದುರಾಗಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಇದೇ ಆಧಾರದಲ್ಲಿ ಕಾವೇರಿ ನದಿ ಪಾತ್ರದ ಗ್ರಾಮಗಳಲ್ಲಿ ವಾಸಿಸುತ್ತಿರುವ ನೂರಾರು ಕುಟುಂಬಗಳಿಗೆ ನೋಟಿಸ್ ನೀಡಲಾಗಿದ್ದು, ಮಳೆಗಾಲಕ್ಕೂ ಮುನ್ನ ನದಿ ಪಾತ್ರದ ಸ್ಥಳಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಇದು ನದಿ ದಂಡೆ ಮತ್ತು ನದಿಪಾತ್ರದ ಸ್ಥಳಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಜನರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. 

ಹೌದು 2018 ನೇ ಇಸವಿಯಿಂದಲೂ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತ ಎದುರಾಗುತ್ತಿದ್ದು, ಜನರನ್ನು ಜರ್ಜರಿತರನ್ನಾಗಿಸಿದೆ. ಪ್ರವಾಹ ಭೂಕುಸಿತದಿಂದ ಮನೆ ಮಠ ಪ್ರಾಣಗಳನ್ನು ಕಳೆದುಕೊಂಡು ಬೀದಿಗೆ ಬಿದ್ದ ಜನರು ಪ್ರವಾಹ, ಭೂಕುಸಿತವನ್ನು ಊಹಿಸಿಕೊಳ್ಳುವುದಕ್ಕೆ ಭಯಪಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮದ 100 ಕ್ಕೂ ಹೆಚ್ಚು ಕುಟುಂಬಗಳು, ಗುಹ್ಯಗ್ರಾಮದ 80 ಕ್ಕೂ ಹೆಚ್ಚು ಕುಟುಂಬಗಳಿಗೆ ಈಗಿರುವ ಮನೆಗಳನ್ನು ಬಿಟ್ಟು ಮಳೆ ಆರಂಭವಾಗುವುದರ ಒಳಗಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಪಂಚಾಯಿತಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. 

ಯಾವುದೇ ಅನುಮಾನ ಬೇಡ, ಗ್ಯಾರಂಟಿ ಅನುಷ್ಠಾನ ಖಚಿತ: ಡಾ.ಜಿ.ಪರಮೇಶ್ವರ್‌

ಸದ್ಯ ನೋಟಿಸ್ ಪಡೆದಿರುವ ಕುಟುಂಬಗಳು ತೀವ್ರ ಆತಂಕಕ್ಕೆ ಒಳಗಾಗಿವೆ. ಅಷ್ಟೇ ಅಲ್ಲ ಪ್ರತೀ ವರ್ಷ ಮಳೆಗಾಲ ಆರಂಭವಾಯಿತ್ತೆಂದರೆ ಹೀಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಿ ಎಂದು ನೋಟಿಸ್ ನೀಡುವ ಅಧಿಕಾರಿಗಳು ಕನಿಷ್ಠ ಯಾವುದೇ ಪರ್ಯಾಯ ವ್ಯವಸ್ಥೆಯನ್ನೂ ಮಾಡುವುದಿಲ್ಲ. ಕೇವಲ ಸುರಕ್ಷಿತ ಸ್ಥಳಗಳಿಗೆ ಹೋಗಿ ಎಂದು ನೋಟಿಸ್ ನೀಡಿ ಹೋದರೆ ನಾವು ಎಲ್ಲಿಗೆ ಹೋಗುವುದು. ಎಲ್ಲೂ ಹೋಗಲು ಸಾಧ್ಯವಾಗದವರಿಗೆ ಕಾಳಜಿ ಕೇಂದ್ರ ತೆರೆಯುತ್ತೇವೆ ಎಂದು ಹೇಳುತ್ತಾರೆ. ಆದರೆ ಮಳೆ ಮುಗಿಯುವವರೆಗೆ ಒಂದೆರಡು ತಿಂಗಳು ಕಾಳಜಿ ಕೇಂದ್ರ ತೆರೆದು ಪ್ರವಾಹ ಪರಿಸ್ಥಿತಿ ಕಡಿಮೆಯಾಗುತ್ತಿದ್ದಂತೆ ತಿರುಗಿ ಕಳುಹಿಸುತ್ತಾರೆ. 

ನಾವು ಬರುವಷ್ಟರಲ್ಲಿ ನಮ್ಮ ಮೆನಯಲ್ಲಿದ್ದ ಎಲ್ಲವೂ ಕೊಚ್ಚಿ ಹೋಗಿರುತ್ತದೆ. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ಪ್ರತೀ ವರ್ಷವೂ ನಾವು ಹೊಸದಾಗಿ ಮತ್ತೆ ನಮ್ಮ ಬದುಕು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ  ನಿರ್ಮಾಣವಾಗಿದೆ. ಹಾಗಾದರೆ ನಮಗೆ ಶಾಶ್ವತ ಸುರಕ್ಷಿತ ಸೂರು ನಿರ್ಮಿಸಿಕೊಡುವುದಕ್ಕೆ ಸಾಧ್ಯವಿಲ್ಲವೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಮನೆ ನಿರ್ಮಿಸಿಕೊಳ್ಳಲು ನಿವೇಶನ ನೀಡುವುದಾಗಿ ಅಧಿಕಾರಿಗಳು ಹೇಳಿ ನಾಲ್ಕು ವರ್ಷಗಳಾಗಿವೆ. ಆದರೆ ಇದುವರೆಗೆ ನಿವೇಶನಕ್ಕೆ ಬೇಕಾಗಿರುವ ಜಾಗವನ್ನು ಹುಡುಕಲು ಅಧಿಕಾರಿಗಳು ಮುಂದಾಗಿಲ್ಲ. ಕೆಲವರು ಹತ್ತಾರು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ಬಿಡಿಸಿ ಈ ಸಂತ್ರಸ್ಥರಿಗೆ ನಿವೇಶನಗಳನ್ನು ಕೊಡಬಹುದು. 

ಮೂಲ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯ: ಶಾಸಕ ಬಾಲ​ಕೃ​ಷ್ಣ

ಇವರ ಪರಿಸ್ಥಿತಿ ಸಿಎಂ ಸಿದ್ದರಾಮಯ್ಯನವರಿಗೂ ಚೆನ್ನಾಗಿ ಗೊತ್ತಿದೆ. ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭ ಸ್ವತಃ ಅವರೇ ಸ್ಥಳಕ್ಕೆ ಬಂದಿದ್ದರು. ಇನ್ನು ಇಲ್ಲಿನ ಇಬ್ಬರು ಶಾಸಕರು ಹೊಸಬರಿದ್ದು, ಅವರು ಪ್ರಯತ್ನಿಸಿ ಜನರಿಗೆ ಸುರಕ್ಷಿತ ಸ್ಥಳಗಳಲ್ಲಿ ನಿವೇಶನ ನೀಡಬಹುದು ಎಂದು ಸಂತ್ರಸ್ಥರಪರ ಹೋರಾಟಗಾರ ಪಿ.ಆರ್. ಭರತ್ ಅವರು ಒತ್ತಾಯಿಸುತ್ತಿದ್ದಾರೆ. ಏನೇ ಆಗಲಿ ಕಳೆದ ನಾಲ್ಕೈದು ವರ್ಷಗಳಿಂದ ಪ್ರವಾಹದಲ್ಲಿ ಮುಳುಗೇಳುತ್ತಿರುವ ನೂರಾರು ಕುಟುಂಬಗಳಿಗೆ ಮತ್ತೆ ಪ್ರವಾಹದ ದಿನಗಳು ಸಮೀಪಿಸುತ್ತಿದ್ದು ಅವರಿಗೆ ಶಾಶ್ವತವಾದ ಸುರಕ್ಷಿತ ಸ್ಥಳಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆದರೆ ಕೇವಲ ನೋಟಿಸ್ ನೀಡಿ ಕೈತೊಳೆದುಕೊಳ್ಳುವ ಅಧಿಕಾರಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

click me!