ಹಾಸನ: ಶೀಘ್ರ ಕ್ಯಾತನಹಳ್ಳಿ ಏತ ನೀರಾವರಿ ಕಾಮಗಾರಿ ಪೂರ್ಣ, ಸಚಿವ ಡಿ.ಕೆ. ಶಿವಕುಮಾರ್

By Kannadaprabha NewsFirst Published Dec 13, 2023, 11:00 PM IST
Highlights

ಈ ಯೋಜನೆಗೆ ಅವಶ್ಯವಿರುವ ಅನುದಾನವನ್ನು ಬಿಡುಗಡೆ ಮಾಡಿ ಯಾವ ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂಬ ಸ್ವರೂಪ್‌ ಅವರ ಮತ್ತೊಂದು ಪ್ರಶ್ನೆಗೆ, ಕಾಮಗಾರಿಯ ಪ್ರಗತಿ ಅನುಸಾರ ವೆಚ್ಚ ಭರಿಸಲಾಗುತ್ತಿದ್ದು, ಅವಶ್ಯವಿರುವ ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ಕಾಮಗಾರಿಯನ್ನು ಡಿಸೆಂಬರ್ 2024ರೊಳಗೆ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಹಾಸನ(ಡಿ.13):  ಕುಂಟುತ್ತಾ ತೆವಳುತ್ತಾ ಸಾಗಿರುವ ಹಾಸನ ತಾಲೂಕಿನ ಕ್ಯಾತನಹಳ್ಳಿ ಏತ ನೀರಾವರಿ ಯೋಜನೆಯ ಸ್ಥಿತಿಗತಿ ಕುರಿತಂತೆ ಶಾಸಕ ಸ್ವರೂಪ್ ಅವರು ಬೆಳಗಾವಿ ಅಧಿವೇಶನದಲ್ಲಿ ಜಲಸಂಪನ್ಮೂಲ ಸಚಿವರನ್ನು ಪ್ರಶ್ನಿಸಿದ್ದು, ನಾಲೆಗಳ ಬಾಕಿ ಕಾಮಗಾರಿ ಭೂಸ್ವಾಧೀನ ಸಮಸ್ಯೆಯಿಂದ ಸ್ಥಗಿತಗೊಂಡಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಉತ್ತರಿಸಿದ್ದಾರೆ.

ಕ್ಯಾತನಹಳ್ಳಿ ಏತ ನೀರಾವರಿ ಯೋಜನೆಯನ್ನು ಯಾವ ಸಾಲಿನಲ್ಲಿ ಆರಂಭಿಸಲಾಯಿತು. ಅನುದಾನದ ಕೊರತೆಯಿಂದ ಕಾಮಗಾರಿ ವಿಳಂಬ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಮತು ಪ್ರಸಕ್ತ ಕಾಮಗಾರಿಯ ಪ್ರಗತಿ ಏನು, ಕಾಮಗಾರಿಗೆ ಮಂಜೂರಾದ ಅನುದಾನ ಎಷ್ಟು, ಈವರೆಗೂ ಬಿಡುಗಡೆಯಾದ ಮೊತ್ತವೆಷ್ಟು ಎಂದು ಶಾಸಕ ಸ್ವರೂಪ್‌ ಕೇಳಿದರು. ಇದಕ್ಕೆ ಉತ್ತರ ನೀಡಿದ ಸಚಿವರು, 2000ನೇ ಇಸವಿಯಲ್ಲಿ 16 ಕೋಟಿ ಮೊತ್ತದ ಅಂದಾಜಿಗೆ(ಮೂಲ), 21.50 ಕೋಟಿ ಮೊತ್ತದ ಪರಿಷ್ಕೃತ ಅಂದಾಜಿಗೆ 2001ರಂದು ಹಾಗೂ 52.10 ಕೋಟಿ ಮೊತ್ತದ ಮಾರ್ಪಾಡಿತ ಅಂದಾಜಿಗೆ 2007ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸದರಿ ಯೋಜನೆಯ ಕಾಮಗಾರಿಗಳನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದ್ದಾರೆ.

ಪುಷ್ಪಗಿರಿ ಮಹಾಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗೆ ಕೊಲೆ ಬೆದರಿಕೆ?: ಬಹಿರಂಗ ವೇದಿಕೆಯಲ್ಲಿ ಆಗಿದ್ದೇನು?

ಕ್ಯಾತನಹಳ್ಳಿ ಏತ ನೀರಾವರಿ ಯೋಜನೆಯ ಮೊದಲನೇ ಹಂತದ ಕಾಮಗಾರಿಗಳಲ್ಲಿ 2001ರಲ್ಲಿ ಆರಂಭಿಸಿ 2013ರಲ್ಲಿ ಪೂರ್ಣಗೊಳಿಸಿ ಚಾಲನೆ ಗೊಳಿಸಲಾಗಿದ್ದು, ಸುಮಾರು 22.65 ಕೋಟಿ ರು. ವೆಚ್ಚವಾಗಿದೆ. ಎರಡನೇ ಹಂತದ ಕಾಮಗಾರಿಯನ್ನು 8.19 ಕೋಟಿ ಗುತ್ತಿಗೆ ಮೊತ್ತಕ್ಕೆ 2006ರಲ್ಲಿ ಆರಂಭಿಸಲಾಗಿದೆ.

ಕಾಮಗಾರಿಯು ಭೂಸ್ವಾಧೀನ ಸಮಸ್ಯೆಯಿಂದ ಹಾಗೂ ಮುಖ್ಯ ನಾಲೆಯ ಸರಪಳಿ 2.60 ಕಿ.ಮೀ.ನಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ323 ( ಚಿಕ್ಕಮಗಳೂರಿನಿಂದ ಬಿಳಿಕೆರೆ ರಸ್ತೆ ದಾಟುವಿಕೆ(ಎನ್‌.ಎಚ್ ಕ್ರಾಸಿಂಗ್) ಕಾಮಗಾರಿಗೆ ೨೦೨೨ ರಂದು ಅನುಮೋದನೆ ದೊರೆತಿದೆ. ಕಾಮಗಾರಿ ವಿಳಂಬವಾಗಿದೆ. ಇಲ್ಲಿವರೆಗೆ 5.99 ಕೋಟಿ ವೆಚ್ಚವಾಗಿದೆ ಎಂದು ತಿಳಿಸಿದರು.

ಆರ್ಟಿಕಲ್ 370 ರದ್ದು: ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ ಮಾಜಿ ಪ್ರಧಾನಿ ದೇವೇಗೌಡ

ಇನ್‌ಟೇಕ್ ಚಾನೆಲ್, ಸಂಪ್ ವೆಲ್, ಪಂಪ್ ಹೌಸ್, ರೈಸಿಂಗ್ ಮೈನ್, ಸಿಸ್ಟರ್ನ್, ಪಂಪು, ಮತ್ತು ಮೋಟಾರ್‌ಗಳನ್ನು ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ. ಸೆಸ್ಕಾಂ ವತಿಯಿಂದ ವಿದ್ಯುತ್ ಸಂಪರ್ಕ ದೊರೆತಿದೆ. ಒಟ್ಟು 6.235 ಕಿ.ಮೀ. ಉದ್ದದ ನಾಲೆಯ ಮಣ್ಣು ಅಗೆಯುವ ಕಾಮಗಾರಿ ಪೈಕಿ 4.00 ಕಿ.ಮೀ. ಪೂರ್ಣಗೊಂಡಿದೆ. 4.00 ಕಿ.ಮೀ. ಯಿಂದ 5.20 ಕಿ.ಮೀ. ವರೆಗೆ ಆಯ್ದ ಭಾಗಗಳಲ್ಲಿ ಮಣ್ಣು ಅಗೆತ ಕಾಮಗಾರಿಯು ಪೂರ್ಣಗೊಂಡಿದೆ. ಬಾಕಿ ನಾಲಾ ಕಾಮಗಾರಿಗಳು ಭೂಸ್ವಾಧೀನ ಸಮಸ್ಯೆಯಿಂದ ಸ್ಥಗಿತಗೊಂಡಿದೆ.

ಒಟ್ಟು 38 ಬಿಡಿ ಕಾಮಗಾರಿಗಳ ಪೈಕಿ 16 ಪೂರ್ಣಗೊಂಡಿದ್ದು, ಉಳಿದ 23 ಕಾಮಗಾರಿಗಳು ಭೂ ಸ್ವಾಧೀನ ಸಮಸ್ಯೆಯಿಂದ ಸ್ಥಗಿತಗೊಂಡಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

click me!