
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಿದ ಹಿನ್ನೆಲೆಯಲ್ಲಿ, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಶಾಲೆಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ. ಈ ಅವಧಿಯಲ್ಲಿ ಶಿಕ್ಷಕರು ಮತ್ತು ಸರ್ಕಾರಿ ಸಿಬ್ಬಂದಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದು ಅಧಿಕೃತವಾಗಿ ಕರೆಯಲಾಗುವ ರಾಜ್ಯವ್ಯಾಪಿ ಜಾತಿ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಈ ಸಮೀಕ್ಷೆಯು ಸೆಪ್ಟೆಂಬರ್ 22ರಂದು ಆರಂಭಗೊಂಡಿತ್ತು. ಜೊತೆಗೆ ಅಕ್ಟೋಬರ್ 7ರಂದು ಮುಕ್ತಾಯಗೊಳ್ಳಬೇಕಿತ್ತು. ಆದರೆ ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ನಿಧಾನವಾಗಿರುವುದರಿಂದ, ರಾಜ್ಯ ಸರ್ಕಾರವು ಸಮೀಕ್ಷೆ ಗಡವನ್ನು ಹೆಚ್ಚುವರಿ ಮಾಡಿ 10 ದಿನ ವಿಸ್ತರಿಸಿ ಅಕ್ಟೋಬರ್ 18ರವರೆಗೆ ಮುಂದೂಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ನಾವು ಅಕ್ಟೋಬರ್ 7ರೊಳಗೆ ಸಮೀಕ್ಷೆ ಮುಗಿಸಲು ಯೋಜಿಸಿದ್ದೆವು. ಆದರೆ ಕೆಲವು ಜಿಲ್ಲೆಗಳು ಬಹುತೇಕ ಪೂರ್ಣಗೊಳಿಸಿದರೂ, ಇನ್ನು ಕೆಲವು ಜಿಲ್ಲೆಗಳು ಹಿಂದುಳಿದಿವೆ. ಅದಕ್ಕಾಗಿ ಸಮಯ ವಿಸ್ತರಣೆ ಅನಿವಾರ್ಯವಾಯಿತು ಎಂದಿದ್ದಾರೆ.
ಬೆಂಗಳೂರು ನಗರದಲ್ಲಿಯೇ ಸುಮಾರು 6,700 ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯಾದ್ಯಂತ ಒಟ್ಟು 1.6 ಲಕ್ಷಕ್ಕೂ ಹೆಚ್ಚು ಸರ್ಕಾರಿ ಸಿಬ್ಬಂದಿ ಈ ಕಾರ್ಯದಲ್ಲಿ ಭಾಗವಹಿಸುತ್ತಿದ್ದು, ಇದರಲ್ಲಿ 1.2 ಲಕ್ಷ ಶಿಕ್ಷಕರು ಮತ್ತು 40,000 ಇತರ ಸರ್ಕಾರಿ ನೌಕರರು ಸೇರಿದ್ದಾರೆ.
ಕರ್ನಾಟಕ ಶಿಕ್ಷಕರ ಸಂಘ ಮತ್ತು ಕಾಂಗ್ರೆಸ್ ಎಂಎಲ್ಸಿ ಪುಟ್ಟಣ್ಣ ಅವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಶಿಕ್ಷಕರಿಗೆ ಕಾರ್ಯ ಮುಗಿಸಲು ಹೆಚ್ಚುವರಿ ಸಮಯ ನೀಡುವಂತೆ ವಿನಂತಿಸಿದ್ದರು. ಇದರ ಬಳಿಕ, ಶಿಕ್ಷಣ ಇಲಾಖೆ ಹಿಂದುಳಿದ ವರ್ಗಗಳ ಆಯೋಗದೊಂದಿಗೆ ಚರ್ಚಿಸಿ ಶಾಲಾ ರಜೆಯನ್ನು ಘೋಷಿಸಿತು.
ಪದವಿ ಪೂರ್ವ ಕಾಲೇಜುಗಳಲ್ಲಿ ನಡೆಯುತ್ತಿರುವ ಮಧ್ಯಂತರ ಪರೀಕ್ಷೆಗಳಲ್ಲಿ ತೊಡಗಿರುವ ಶಿಕ್ಷಕರಿಗೆ ಮಾತ್ರ ಸಮೀಕ್ಷಾ ಕಾರ್ಯದಿಂದ ವಿನಾಯಿತಿ ನೀಡಲಾಗಿದೆ.
ರಾಜ್ಯ ಸರ್ಕಾರದ ಹೊಸ ನಿರ್ಧಾರದ ಪ್ರಕಾರ, ಜಾತಿ ಸಮೀಕ್ಷೆಯು ಈಗ ಅಕ್ಟೋಬರ್ 18, 2025ರಂದು ಮುಕ್ತಾಯಗೊಳ್ಳಲಿದೆ. ಅದರ ನಂತರವೇ ಬೆಂಗಳೂರು ಸೇರಿದಂತೆ ರಾಜ್ಯದ ಶಾಲೆಗಳು ಮರು ತೆರೆಯುವ ಸಾಧ್ಯತೆ ಇದೆ. ತಪ್ಪಿದ ಪಾಠದ ಅವಧಿಯನ್ನು ಸರಿದೂಗಿಸಲು ವಿಶೇಷ ತರಗತಿಗಳನ್ನು ಆಯೋಜಿಸುವ ಯೋಜನೆ ಈಗಾಗಲೇ ರೂಪಿತವಾಗಿದೆ.
ಸಮೀಕ್ಷೆ ಕಾರ್ಯಕ್ಕಾಗಿ ಸರ್ಕಾರ ₹420 ಕೋಟಿ ರೂಪಾಯಿ ಮೀಸಲಿಟ್ಟಿದೆ.
ಸಮೀಕ್ಷೆಯ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಾವನ್ನಪ್ಪಿದ ಮೂವರು ಸರ್ಕಾರಿ ಸಿಬ್ಬಂದಿಗಳ ಕುಟುಂಬಗಳಿಗೆ ಸರ್ಕಾರ ₹20 ಲಕ್ಷ ರೂ ಪರಿಹಾರ ಧನ ನೀಡಲಿದೆ.
ಯಾವುದೇ ಶಿಕ್ಷಕರು ಅಥವಾ ನೌಕರರು ಉದ್ದೇಶಪೂರ್ವಕವಾಗಿ ಕರ್ತವ್ಯ ಬಿಟ್ಟುಬಿಟ್ಟರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಿಕ್ಷಕರು ಲೇಖಿತ ಭರವಸೆ ನೀಡಿ, ಮಿಸ್ ಆಗಿರುವ ತರಗತಿ ಸಮಯವನ್ನು ಹೆಚ್ಚುವರಿ ತರಗತಿಗಳ ಮೂಲಕ ಪೂರ್ಣಗೊಳಿಸುವುದಾಗಿ ಘೋಷಿಸಿದ್ದಾರೆ.