ಜಾತಿ ನಿಂದನೆ: DHO ಸೇರಿ ಇಬ್ಬರ ಬಂಧನಕ್ಕೆ ದಸಂಸ ಆಗ್ರಹ

By Kannadaprabha NewsFirst Published Aug 12, 2020, 10:00 AM IST
Highlights

ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿದ್ದ ಜಿ.ನಿಜಲಿಂಗಪ್ಪಗೆ ಡಿಎಚ್‌ಓ ಡಾ.ರಾಘವೇಂದ್ರಸ್ವಾಮಿ, ಸತ್ಯನಾರಾಯಣರಾವ್‌ ಜಾತಿ ನಿಂದನೆ ಮಾಡಿದ್ದು, ಈ ಬಗ್ಗೆ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ನಿಜಲಿಂಗಪ್ಪ ದೂರು ದಾಖಲಿಸಿದ್ದರು. ಆದರೆ, ಈವರೆಗೆ ಆರೋಪಿಗಳ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದಾವಣಗೆರೆ(ಆ.12): ಜಾತಿ ನಿಂದನೆ ಪ್ರಕರಣದ ಆರೋಪಿಗಳಾದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಘವೇಂದ್ರ ಸ್ವಾಮಿ, ಕೆ.ಜಿ. ಸತ್ಯನಾರಾಯಣರಾವ್‌ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆ.14ರಂದು ಜಿಲ್ಲಾಧಿಕಾರಿ ಕಚೇರಿ ಎದುರು ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಚ್ಚರಿಸಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ರಾಜ್ಯ ಸಂಚಾಲಕ ಎಚ್‌.ಮಲ್ಲೇಶ್‌, ಅಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಡಿಎಚ್‌ಓ ಡಾ.ರಾಘವೇಂದ್ರ ಸ್ವಾಮಿ ಹಾಗೂ ಸತ್ಯನಾರಾಯಣರಾವ್‌ ಬಂಧಿಸಿ, ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಡಿಎಸ್ಸೆಸ್‌ ಹೋರಾಟ ಆರಂಭಿಸಲಿದೆ ಎಂದರು.

ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿದ್ದ ಜಿ.ನಿಜಲಿಂಗಪ್ಪಗೆ ಡಿಎಚ್‌ಓ ಡಾ.ರಾಘವೇಂದ್ರಸ್ವಾಮಿ, ಸತ್ಯನಾರಾಯಣರಾವ್‌ ಜಾತಿ ನಿಂದನೆ ಮಾಡಿದ್ದು, ಈ ಬಗ್ಗೆ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ನಿಜಲಿಂಗಪ್ಪ ದೂರು ದಾಖಲಿಸಿದ್ದರು. ಆದರೆ, ಈವರೆಗೆ ಆರೋಪಿಗಳ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.

ಸದ್ಯದಲ್ಲೇ ಕೊರೋನಾ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ: ಶಾಸಕ ರೇಣುಕಾಚಾರ್ಯ

ಜಾತಿ ನಿಂದನೆ ಪ್ರಕರಣ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟಜಾತಿ-ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದೂರು ಪ್ರಕರಣ ದಾಖಲಾದ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಸಂವಿಧಾನದ ಆಶಯಕ್ಕನುಗುಣವಾಗಿ ಈಚೆಗೆ ಸುಪ್ರೀಂ ಕೋರ್ಟ್‌ ಪುನರ್‌ ಪರಿಷ್ಕೃತ ಆದೇಶದನ್ವಯ ತನಿಖಾಧಿಕಾರಿಗಳು ತಕ್ಷಣವೇ ಆರೋಪಿಗಳ ಬಂಧಿಸಲು ಆದೇಶವಿದೆ. ಆದರೆ, ವಿದ್ಯಾನಗರ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಠಾಣೆಗೆ ದೂರು ನೀಡಿದ ನಿಜಲಿಂಗಪ್ಪ ತಮಗೆ ಆದ ಅನ್ಯಾಯ, ಅವಮಾನ, ದೌರ್ಜನ್ಯ ಮತ್ತು ಜಾತಿ ನಿಂದನೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಬಗ್ಗೆ ದೂರು ದಾಖಲಿಸಿದ್ದರೂ ಕ್ರಮ ಕೈಗೊಳ್ಳದ ಪೊಲೀಸ್‌ ಇಲಾಖೆ ಧೋರಣೆ ಖಂಡಿಸಿ, ಡಿಎಸ್ಸೆಸ್‌ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳು, ಚಿಂತಕರ ಸಹಯೋಗದಲ್ಲಿ ಆರೋಪಿಗಳನ್ನು ಬಂಧಿಸುವವರೆಗೂ ಹೋರಾಟ ಸಾಗಲಿದೆ ಎಂದು ಎಚ್‌.ಮಲ್ಲೇಶ್‌ ಸ್ಪಷ್ಟಪಡಿಸಿದರು.

ದೂರುದಾರ ಜಿ.ನಿಜಲಿಂಗಪ್ಪ ಮಾತನಾಡಿ, ಆರೋಗ್ಯಾಧಿಕಾರಿಗಳು ಕಚೇರಿ ಸಿಬ್ಬಂದಿ ಸಮ್ಮುಖದಲ್ಲೇ ಜಾತಿ ನಿಂದನೆ ಮಾಡಿದ್ದು, ಕರ್ತವ್ಯದಲ್ಲಿದ್ದ ವೇಳೆ ವಾಹನ ನೀಡುವ ವಿಚಾರದಲ್ಲಿ ಹೀಗೆ ವರ್ತಿಸಿದ್ದರು. ಈಗ ನಿವೃತ್ತಿಯಾಗಿರುವ ತಮಗೆ ನಿವೃತ್ತಿಸಂಬಂಧಿತ ದಾಖಲೆಗಳನ್ನು ಪಡೆಯಲು ಸಾಧ್ಯವಾಗದಂತೆ ಮಾಡಲಾಗಿದೆ. ಇದರಿಂದ ತಮಗೆ ತೀವ್ರ ಅನ್ಯಾಯವಾಗಿದೆ ಎಂದು ಅಳಲು ತೋಡಿಕೊಂಡರು.

ಹಿರಿಯ ವಕೀಲ ಗುಮ್ಮನೂರು ಮಲ್ಲಿಕಾರ್ಜುನ, ಜಿ.ಎನ್‌.ಮಲ್ಲಿಕಾರ್ಜುನ, ತಿಮ್ಮಣ್ಣ, ಎಚ್‌.ಸಿ.ಮಲ್ಲಪ್ಪ ಇತರರು ಇದ್ದರು.

click me!