ಬಾಗಲಕೋಟೆ: ಕೊರೋನಾ ನಿಯಮ ಮೀರಿ ಜನರ ಸೇರಿಸಿ ಮದುವೆ, ಕೇಸ್ ದಾಖಲು

By Suvarna NewsFirst Published Apr 25, 2021, 3:04 PM IST
Highlights

ವಾಹನದಿಂದ ಎಲ್ಲರನ್ನೂ ಕೆಳಗಿಸಿ ಡ್ರೈವರ್‌ಗೆ ಲಾಠಿ ಏಟಿನ ರುಚಿ ತೋರಿಸಿದ ಪೊಲೀಸರು| ಒಂದೇ ಗಾಡಿಯಲ್ಲಿದ್ದ 32 ಜನರ ಪ್ರಯಾಣ| ಬಾಗಲಕೋಟೆಯಲ್ಲಿ ನಡೆದ ಘಟನೆ| 300 ಕ್ಕೂ ಅಧಿಕ ಜನರನ್ನ ಸೇರಿಸಿ ಮದುವೆ| ತಹಶೀಲ್ದಾರ್‌ ಗುರುಸಿದ್ದಯ್ಯ ಹಿರೇಮಠ ನೇತೃತ್ವದಲ್ಲಿ ದಾಳಿ| 

ಬಾಗಲಕೋಟೆ(ಏ.25): ಮದುವೆಗೆ ಕುರಿ ಹಿಂಡಿನಂತೆ ಜನರನ್ನ ಕೊಂಡೊಯ್ಯುತ್ತಿದ್ದ ಮಹೇಂದ್ರ ವಾಹನವನ್ನ ಸೀಜ್ ಮಾಡಿದ ಘಟನೆ ಇಂದು(ಭಾನುವಾರ) ನಗರದ ಬಸವೇಶ್ವರ ವೃತ್ತದಲ್ಲಿ ನಡೆದಿದೆ. 

ತಾಲೂಕಿನ ರಾಂಪುರ‌ ಗ್ರಾಮದಿಂದ ತುಳಸಿಗೇರಿ ಗ್ರಾಮಕ್ಕೆ ಮದುವೆಗೆಂದು ಒಂದೇ ಗಾಡಿಯಲ್ಲಿದ್ದ 32 ಜನರು ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಕಾರ್ಯಾಚರಣೆಗಿಳಿದ ಪೊಲೀಸರು ವಾಹನದಿಂದ ಎಲ್ಲರನ್ನೂ ಕೆಳಗಿಸಿ ಡ್ರೈವರ್‌ಗೆ  ಲಾಠಿ ಏಟಿನ ರುಚಿ ತೋರಿಸಿದ್ದಾರೆ.

ಮುತ್ತಣ್ಣ ಹಡಪದ ಎಂಬಾತ ತನ್ನ ಮಗಳ ಮದುವೆಗೆ ಜನರನ್ನ ಕರೆದೊಯ್ಯುತ್ತಿದ್ದರು. ಹೀಗಾಗಿ ಮದುವೆಗೆ ದಿಬ್ಬಣಕ್ಕೆ ಹೊರಟಿದ್ದ ಮಂದಿ ಕಂಗಾಲಾಗಿದ್ದಾರೆ. ಈ ವೇಳೆ ಮಹಿಳಾ ಪಿಎಸ್ಐ ಎಸ್.ಎಸ್.ತೇಲಿ ಅವರು ಕೊರೋನಾ ಬಗ್ಗೆ ಜಾಗೃತಿ ಪಾಠ ಮಾಡಿದ್ದಾರೆ.

ಬಾಗಲಕೋಟೆ: ಮಾಜಿ ಸಚಿವ ಮೇಟಿಗೆ ಕೊರೋನಾ ದೃಢ

ಮದುವೆ ಮನೆಯವರ ವಿರುದ್ಧ ಕೇಸ್ ದಾಖಲು

ಕೊರೋನಾ ನಿಯಮ ಮೀರಿ ಜನರನ್ನ ಸೇರಿಸಿ ಮದುವೆ ಮಾಡುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಜಿಲ್ಲೆಯ ಮುಚಖಂಡಿ ತಾಂಡಾ 1ರಲ್ಲಿ ಇಂದು ನಡೆದಿದೆ. ಸರ್ಕಾರದ ನಿಯಮ ಮೀರಿ ಜನರನ್ನ ಸೇರಿಸಿದ್ದರಿಂದ ಮದುವೆ ಮನೆಯವರ ವಿರುದ್ಧ ಕೇಸ್ ದಾಖಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ನಿಂಗಪ್ಪ ಚವ್ಹಾಣ ಎಂಬುವವರ ಮನೆಯಲ್ಲಿ ಮದುವೆ ನಡೆಯುತ್ತಿತ್ತು. 300 ಕ್ಕೂ ಅಧಿಕ ಜನರನ್ನ ಸೇರಿಸಿ ಮದುವೆ ಮಾಡುತ್ತಿದ್ದರು. ಈ ವೇಳೆ ಬಾಗಲಕೋಟೆ ತಹಶೀಲ್ದಾರ್‌ ಗುರುಸಿದ್ದಯ್ಯ ಹಿರೇಮಠ ನೇತೃತ್ವದಲ್ಲಿ ದಾಳಿ ನಡೆಸಿ ಜನರನ್ನು ಅಲ್ಲಿಂದ ಮರಳಿಸಿ, ಮದುವೆಗೆ ಹಾಕಿದ್ದ ಪೆಂಡಾಲ್ ತೆಗೆದು ಹಾಕಲು ಸೂಚನೆ ನೀಡಲಾಗಿದೆ. 

ಮದುವೆ ಮಾಡುತ್ತಿದ್ದವರ ವಿರುದ್ಧ ಬಾಗಲಕೋಟೆ ಗ್ರಾಮೀಣ ಪೋಲಿಸ್‌ ಠಾಣೆಯಲ್ಲಿ ಕೇಸ್ ದಾಖಲಿಸಲು ಪಿಡಿಓಗೆ ಅಧಿಕಾರಿಗಳು ಸೂಚಿಸಿದ್ದಾರೆ. ದಾಳಿ ವೇಳೆ ತಹಶೀಲ್ದಾರ್‌ಗೆ ಕಂದಾಯ ನಿರೀಕ್ಷಕ ಭಾವಿಮಠ, ವಿಶಾಲ್ ದೇವನಾಳ್ ಸಾಥ್ ನೀಡಿದ್ದರು.
 

click me!