Hoskote: ಕಾರುಗಳು ನಡುವೆ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ

By Anusha KbFirst Published Aug 22, 2022, 11:57 AM IST
Highlights

ಕೋಲಾರ ಸಮೀಪದ ಮುರುಗುಮಲ್ಲ ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಇದು ಸೇರಿದಂತೆ ರಾಜ್ಯದ ವಿವಿಧೆಡೆ ಇಂದು ಮುಂಜಾನೆ ವೇಳೆ ಸಂಭವಿಸಿದ ಅಪಘಾತದಲ್ಲಿ ಒಟ್ಟು ಆರು ಜನ ಸಾವನ್ನಪ್ಪಿದ್ದಾರೆ.

ಹೊಸಕೋಟೆ : ಕೋಲಾರ ಸಮೀಪದ ಮುರುಗುಮಲ್ಲ ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೆ  ಇಬ್ಬರು ಸಾವನ್ನಪ್ಪಿದ್ದಾರೆ. ಕೃಷ್ಣರಾಜಪುರ ಸಮೀಪದ ನಿವಾಸಿಗಳಾದ ಒಂದೇ ಕುಟುಂಬಕ್ಕೆ ಸೇರಿದ 26 ವರ್ಷದ ಶಾಜಿಯಾ ಭಾನು, ಇಬ್ರಾಹಿಂಸಾಬ್ ಮೃತರು. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

ಬೈಲನರಸಾಪುರ ಮಾರ್ಗವಾಗಿ ಕೋಲಾರ ರಸ್ತೆ ಮುಖಾಂತರ ಕೆ.ಆರ್ ಪುರಕ್ಕೆ ಬರುತ್ತಿದ್ದಾಗ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿ ಅಟ್ಟೂರು ಗೇಟ್ ಬಳಿ ಕಟೈಂನರ್ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಒಟ್ಟು ಮೂರು ಕಾರುಗಳಲ್ಲಿ ಕೃಷ್ಣರಾಜಪುರದ 9 ಜನ  ಪ್ರಯಾಣಿಸುತ್ತಿದ್ದರು. ಒಂದು ಕಾರು ಅಪಘಾತದಿಂದ ಬಚಾವ್ ಆಗಿದೆ. ಮೃತರ ಶವಗಳನ್ನು ಎಂವಿಜೆ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಗಾಯಾಳುಗಳ ಚಿಕಿತ್ಸೆ ಮುಂದುವರೆಸಲಾಗಿದೆ.

ದುರಂತ ಸ್ಥಳಕ್ಕೆ ಡಿವೈಎಸ್ಪಿ ಉಮಾಶಂಕರ್ ಹಾಗೂ ಹೊಸಕೋಟೆ ಇನ್ಸ್ ಪೆಕ್ಟರ್ ಮಂಜುನಾಥ್‌ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. 

ರಾಜ್ಯದ 2 ಕಡೆ ಪ್ರತ್ಯೇಕ ಅಪಘಾತ; ಜವರಾಯನ ಅಟ್ಟಹಾಸಕ್ಕೆ ನಾಲ್ವರು ಬಲಿ

ಶಿರಾದಲ್ಲೂ ಅಪಘಾತ
ಹಾಗೆಯೇ ಇಂದು ಬೆಳ್ಳಂಬೆಳಗ್ಗೆ ಸ್ವಿಫ್ಟ್ ಕಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಕಾರು ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಬಂವಿಸಿದೆ. ಕಳ್ಳಂಬೆಳ್ಳ ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರಿಗೆ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಭೀಕರ ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. 

ಈ ಅಪಘಾತದಲ್ಲಿ ಅವಿನಾಶ(28), ಪ್ರಣಂತಿ ಇಬ್ಬರು ಮೃತ ದುರ್ದೈವಿಗಳು. ಸೌಮ್ಯ ಗಂಭೀರ ಗಾಯಗೊಂಡ ಮಹಿಳೆ.  ಗಾಯಳು ಮಹಿಳೆಯನ್ನ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ‌‌ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ರಸ್ತೆ ಅಪಘಾತ: ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಶಾಸಕ ಶರಣು ಸಲಗರ

ಕಾಲೇಜು ಬಸ್-ಲಾರಿ ಡಿಕ್ಕಿ
ಬೆಳ್ಳಂಬೆಳಗ್ಗೆ ಕಾಲೇಜು ವಾಹನ-ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತಕ್ಕೆ ಇಬ್ಬರು ಬಲಿಯಾಗಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿರುವ ಘಟನೆ ಅಥಣಿ ಹೊರವಲಯದಲ್ಲಿ ನಡೆದಿದೆ. ಬನಜವಾಡ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ ಅಥಣಿ ಗ್ರಾಮೀಣ ಭಾಗದಿಂದ ಅಥಣಿ ಪಟ್ಟಣಕ್ಕೆ ಪಿಯು ವಿದ್ಯಾರ್ಥಿಗಳನ್ನು ಹೊತ್ತು ಬರುತ್ತಿತ್ತು. ಇದೇ ವೇಳೆ  ಅಥಣಿಯಿಂದ ವಿಜಯಪುರದ ಕಡೆಗೆ ವೇಗವಾಗಿ ಹೊರಟಿದ್ದ ಲಾರಿ ಮುಖಾಮುಖಿ ಡಿಕ್ಕಿಯಾಗಿ ಅವಘಡ. ಈ ಅಪಘಾತದಲ್ಲಿ ಬಸ್ ಚಾಲಕ ಮತ್ತು ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 

click me!