ಬಳ್ಳಾರಿ ಜಿಲ್ಲೆ ವಿಭಜನೆ ಖಂಡಿಸಿ ಬಂದ್‌ : ಏನೇನಿರಲ್ಲ?

By Kannadaprabha NewsFirst Published Oct 1, 2019, 7:38 AM IST
Highlights

ಬಳ್ಳಾರಿ ಜಿಲ್ಲೆಯಿಂದ ಇಬ್ಭಾಗಿಸಿ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸುವ ಕುರಿತು ಪರ- ವಿರೋಧ ವ್ಯಕ್ತವಾಗುತ್ತಿರುವ ನಡುವೆ ಬಳ್ಳಾರಿ ನಗರದ ವಿವಿಧ ಸಂಘಟನೆಗಳು ಮಂಗಳವಾರ ‘ಬಳ್ಳಾರಿ ಬಂದ್‌’ಗೆ ಕರೆ ನೀಡಿವೆ.

ಬಳ್ಳಾರಿ [ಸೆ.01]:  ಬಳ್ಳಾರಿ ಜಿಲ್ಲೆಯಿಂದ ಇಬ್ಭಾಗಿಸಿ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸುವ ಕುರಿತು ಪರ- ವಿರೋಧ ವ್ಯಕ್ತವಾಗುತ್ತಿರುವ ನಡುವೆ ಬಳ್ಳಾರಿ ನಗರದ ವಿವಿಧ ಸಂಘಟನೆಗಳು ಮಂಗಳವಾರ ‘ಬಳ್ಳಾರಿ ಬಂದ್‌’ಗೆ ಕರೆ ನೀಡಿವೆ.

ಜಿಲ್ಲೆ ಪ್ರತ್ಯೇಕಿಸುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ನಗರದ ಸ್ನೇಹ ಸಂಪುಟ ಸಭಾಂಗಣದಲ್ಲಿ ಭಾನುವಾರ ಸಭೆ ನಡೆಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪ್ರಗತಿಪರರು ಹಾಗೂ ಚಿಂತಕರು ತೀವ್ರ ಆಕೋಶ ವ್ಯಕ್ತಪಡಿಸಿದರು. ಬಳಿಕ ಅ.1ರಂದು ಬಳ್ಳಾರಿ ಬಂದ್‌ ಹಮ್ಮಿಕೊಳ್ಳಬೇಕು. ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಬೇಕು. ಇದಕ್ಕೂ ಜಗ್ಗದಿದ್ದರೆ ನಾನಾ ಹಂತಗಳಲ್ಲಿ ಚಳವಳಿಯನ್ನು ರೂಪಿಸಬೇಕು ಎಂಬ ನಿರ್ಣಯಕ್ಕೆ ಬರಲಾಗಿದೆ.

ಬಂದ್‌ ಯಶಸ್ಸಿಗೆ ಮನವಿ:  ಅಖಂಡ ಬಳ್ಳಾರಿ ಉಳಿವಿಗೆ ಒತ್ತಾಯಿಸಿ ಬಳ್ಳಾರಿ ಬಂದ್‌ಗೆ ಕರೆ ನೀಡಿರುವ ‘ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ’ ಮುಖಂಡರು, ಬಂದ್‌ ಯಶಸ್ವಿಗೊಳಿಸುವಂತೆ ಕೋರಿ ನಗರದಲ್ಲಿ ಸೋಮವಾರ ಪ್ರಚಾರ ಕೈಗೊಂಡರು. ಧ್ವನಿವರ್ಧಕಗಳು ಹಾಗೂ ಕರಪತ್ರಗಳ ಮೂಲಕ ನಗರದೆಲ್ಲೆಡೆ ಸಂಚರಿಸಿ ಬಂದ್‌ ಯಶಸ್ವಿಗೆ ಕೋರಿದರು. ಇದಕ್ಕೂ ಮುನ್ನ ನಗರದಲ್ಲಿ ಸಭೆ ನಡೆಸಿದ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು, ಶಾಂತಿಯುತವಾಗಿ ಬಂದ್‌ ನಡೆಸುವ ಕುರಿತು ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಬಂದ್‌ಗೆ ಸೂಕ್ತ ಬಂದೋಬಸ್ತ್ ಒದಗಿಸುವಂತೆ ಹೋರಾಟಗಾರರು ಮನವಿ ಮಾಡಿದರು.

ವಿವಿಧ ಸಂಘಟನೆಗಳ ಬೆಂಬಲ:  ಬಳ್ಳಾರಿ ಬಂದ್‌ಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ, ಆಟೋ ಚಾಲಕರು ಹಾಗೂ ಮಾಲೀಕರ ಸಂಘಗಳು, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಜನಸೈನ್ಯ ಸಂಘಟನೆ, ಜಿಲ್ಲಾ ವಕೀಲರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಹಮಾಲಿ ಕಾರ್ಮಿಕರ ಸಂಘ, ಹೋಟೆಲ್‌ ಮಾಲೀಕರ ಸಂಘ ಸೇರಿದಂತೆ ನಗರದ ಬಹುತೇಕ ಸಂಘಟನೆಗಳು ಬೆಂಬಲ ನೀಡಿವೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಸ್‌ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರಿ, ಅನುದಾನಿತ ಶಾಲಾ- ಕಾಲೇಜುಗಳು, ಚಿತ್ರಮಂದಿರಗಳು, ಪೆಟ್ರೋಲ್‌ ಬಂಕ್‌ಗಳು ಬಂದ್‌ ಆಗಲಿವೆ ಎಂದು ಹೋರಾಟ ಸಮಿತಿ ತಿಳಿಸಿದೆ.

click me!