
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಬದಲು ‘ವಿರಾಟ ಬೆಂಗಳೂರು’ ಎಂದು ಹೆಸರಿಡುವುದು ಉತ್ತಮ ಎಂದು ಬೆಂಗಳೂರು ಮಹಾನಗರ ಕಾರ್ಯಪಡೆಯ (ಬಿಎಂಟಿಎಫ್) ಎಡಿಜಿಪಿ ರೂಪ ಮೌದ್ಗಿಲ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಜಿಬಿಎ ಕೇಂದ್ರ ಕಚೇರಿಯಲ್ಲಿ ಜಿಬಿಎ ಪಾಲಿಕೆಗಳ ನೌಕರರ ಕನ್ನಡ ಸಂಘದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಡಾ. ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರದಾನ ಹಾಗೂ ಪಾಲಿಕೆಗಳ ಅಧಿಕಾರಿ ಮತ್ತು ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಂಗಳೂರು ನಗರದಲ್ಲಿ ಎಲ್ಲಾ ಭಾಷೆಯ ಜನರಿದ್ದಾರೆ. ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕೆಲಸವಾಗಬೇಕು. ಕನ್ನಡ ಭಾಷೆ ಉಳಿಯದೇ ಹೋದರೆ ನಮ್ಮ ಆಸ್ಮಿತೆ ಉಳಿಯುವುದಿಲ್ಲ. ನಮ್ಮ ಸೊಗಡಿನ ಭಾಷೆ ಉಳಿಯಬೇಕು. ನಮ್ಮ ಭಾಷೆ ಹೆಮ್ಮೆ ಎಂಬ ಅಭಿಮಾನದಿಂದ ಮಾತನಾಡಿ ಎಂದು ರೂಪ ಹೇಳಿದರು.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, ಜಿಬಿಎ ಆಡಳಿತದಲ್ಲಿ ಉತ್ತಮ ಕೆಲಸಗಳು ಆಗುತ್ತಿವೆ. ಜನರು ಸಹಕಾರದಿಂದ ಬೆಂಗಳೂರು ನಗರ ವೇಗವಾಗಿ ಅಭಿವೃದ್ದಿಯಾಗುತ್ತದೆ. ನೌಕರರ ಕನ್ನಡ ಸಂಘ ಕನ್ನಡ ರಾಜ್ಯೋತ್ಸವವನ್ನು ರಾಷ್ಟ್ರಿಯ ಮಟ್ಟದಲ್ಲಿ ಅಚರಿಸುತ್ತಿರುವುದು ಶ್ಲಾಘನೀಯ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್, ಪಾಲಿಕೆಗಳ ನೌಕರರ ಸಂಘದ ಅಧ್ಯಕ್ಷ ಎ. ಅಮೃತ್ ರಾಜ್, ಸಾಯಿಶಂಕರ್, ಪ್ರಕಾಶ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.