ಯಾರಾಗ್ತಾರೆ ದಾವಣಗೆರೆ ಮೇಯರ್, ಉಪಮೇಯರ್? ಬಿಜೆಪಿಯಲ್ಲಿ ಶುರುವಾಗಿದೆ ಲೆಕ್ಕಾಚಾರ!

By Suvarna NewsFirst Published Aug 25, 2022, 8:39 PM IST
Highlights

ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪಮೇಯರ್ ಮೀಸಲಾತಿಯನ್ನು ಪ್ರಕಟಿಸಿದೆ. ಇದರ ಬೆನ್ನಲ್ಲೇ ದಾವಣಗೆರೆ ಪಾಲಿಕೆಯಲ್ಲಿ ಹಲವು ಲೆಕ್ಕಾಚಾರಗಳು ಆರಂಭವಾಗಿವೆ.

ವರದಿ : ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್ 

ದಾವಣಗೆರೆ (ಆಗಸ್ಟ್ 25):
ದಾವಣಗೆರೆ ಮಹಾನಗರ ಪಾಲಿಕೆಯ 24ನೇ ಅವಧಿಗೆ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 

ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾತಿ ನೀಡಿ ಆದೇಶಿಸಿದೆ. 23ನೇ ಅವಧಿಗೆ ಎಸ್ ಸಿ ಮೀಸಲಾತಿಯಡಿ ಪಾಲಿಕೆಯ ಮೇಯರ್ ಆಗಿ ಜಯಮ್ಮ ಗೋಪಿನಾಯ್ಕ್, ಸಾಮಾನ್ಯ ಮಹಿಳೆ ಉಪಮೇಯರ್ ಆಗಿ ಗಾಯತ್ರಿ ಖಂಡೋಜಿರಾವ್ ಆಯ್ಕೆಯಾಗಿ ಪ್ರಸ್ತುತ ಅಧಿಕಾರ ನಡೆಸುತ್ತಿದ್ದಾರೆ. ಮೊದಲ ಬಾರಿಗೆ ಅಜಯ್ ಕುಮಾರ್ ಹಾಗೂ 2 ನೇ ಅವಧಿಗೆ ಎಸ್. ಟಿ. ವೀರೇಶ್ ಮೇಯರ್ ಆಗಿ ಕಾರ್ಯ ನಿರ್ವಹಿಸಿದ್ದರು. 

ಕರ್ನಾಟಕದ 10 ಪಾಲಿಕೆಗಳ ಮೇಯರ್​, ಉಪಮೇಯರ್​ ಸ್ಥಾನಕ್ಕೆ ಮೀಸಲಾತಿ ನಿಗದಿ

ಪಾಲಿಕೆ ಚುನಾವಣೆ ನಡೆದಾಗ 17 ಸ್ಥಾನ ಪಡೆದಿದ್ದ ಬಿಜೆಪಿಯು ಪಕ್ಷೇತರ ಅಭ್ಯರ್ಥಿಗಳು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರ ಬಲದಿಂದ ಅಧಿಕಾರದ ಗದ್ದುಗೆ ಹಿಡಿದಿತ್ತು. ಆ ಬಳಿಕ ಆಪರೇಷನ್ ಕಮಲ ಮಾಡಿತ್ತು.  ಎರಡು ಸ್ಥಾನಗಳಿಗೆ ತೆರವಾದ ಚುನಾವಣೆಯಲ್ಲಿ ಒಂದು ಕಾಂಗ್ರೆಸ್ ಹಾಗೂ ಒಂದು ಬಿಜೆಪಿ ಜಯಭೇರಿ ಬಾರಿಸಿತ್ತು. ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಬಿಜೆಪಿಯು ಮತ್ತೆ ಆಪರೇಷನ್ ಕಮಲ ಮಾಡಿತ್ತು. ಆಗ ಜೆ. ಎನ್. ಶ್ರೀನಿವಾಸ್ ಹಾಗೂ  ಶ್ವೇತಾ ಶ್ರೀನಿವಾಸ್ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ರಾಜೀನಾಮೆ ನೀಡಿದ್ದರು. ಈ ಎರಡು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದರೆ, ಕಮಲ ಅರಳಿತ್ತು. ಈಗ 20 ಸ್ಥಾನ ಹೊಂದಿರುವ ಬಿಜೆಪಿಗೆ ಅಧಿಕಾರ  ಹಿಡಿಯುವುದು ಕಷ್ಟ ಏನೂ ಆಗುವುದಿಲ್ಲ. 

ಯಾರಾಗ್ತಾರೆ ದಾವಣಗೆರೆ ಮೇಯರ್?
ಮುಂದಿನ ಬಾರಿ ಯಾರು ಮೇಯರ್ ಆಗ್ತಾರೆ ಎಂಬ ಚರ್ಚೆ ಈಗಲೇ ಬಿಜೆಪಿಯಲ್ಲಿ ಶುರುವಾಗಿದೆ. ಸಾಮಾನ್ಯ ಮಹಿಳೆಗೆ ಸ್ಥಾನ ಸೀಮಿತವಾಗಿರುವ ಕಾರಣ ಶಾಸಕ ಎಸ್. ಎ. ರವೀಂದ್ರನಾಥ್ ಪುತ್ರಿ ವೀಣಾ ಅವರ ಹೆಸರು ಕೇಳಿ ಬರುತ್ತಿದೆ. ಇನ್ನು 
ಕೈ ಬಿಟ್ಟು ಕಮಲ ಹಿಡಿದು ಉಪಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದ ಶ್ವೇತಾ ಶ್ರೀನಿವಾಸ್ ಹೆಸರು ಸಹ ಮೇಯರ್  ರೇಸ್ ನಲ್ಲಿದೆ. ಈ ಇಬ್ಬರಲ್ಲಿ ಒಬ್ಬರಿಗೆ ಸಿಗುವ ಸಾಧ್ಯತೆ ಇದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ 

ಅಂತಿಮವಾಗಿ ಪಾಲಿಕೆ ಮೇಯರ್ ಯಾರಾಗುತ್ತಾರೆ ಎಂಬ ಸಸ್ಪೆನ್ಸ್ ಜಿಲ್ಲಾ ಬಿಜೆಪಿ ಮುಖಂಡರ ಮುಂದೆ ಮುಂದಿನ‌ ವಿಧಾನಸಭಾ ಚುನಾವಣೆ ಲೆಕ್ಕಾಚಾರವು ಇದೆ.  ಅಚ್ಚರಿ ಎಂಬಂತೆ ಇಬ್ಬರನ್ನು ಬಿಟ್ಟು ಬೇರೆಯೊಬ್ಬರಿಗೆ ಮೇಯರ್ ಗಿರಿ ನೀಡಿದರೂ ಅಚ್ಚರಿ ಏನಿಲ್ಲ. ಕುಟುಂಬ ರಾಜಕಾರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ  ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ವೀಣಾ ನಂಜಪ್ಪ ಅವರು ಎಸ್. ಎ. ರವೀಂದ್ರನಾಥ್ ರ ಪುತ್ರಿ. ಇನ್ನು ಶ್ವೇತಾ ಶ್ರೀನಿವಾಸ್ ಅವರು ಪಾಲಿಕೆ ಸದಸ್ಯ ಜೆ. ಎನ್. ಶ್ರೀನಿವಾಸ್ ರ ಪತ್ನಿ. ಈ ಹಿನ್ನೆಲೆಯಲ್ಲಿ ಬೇರೆ ಯಾರಾದರೂ ಮೇಯರ್ ಆಗ್ತಾರೋ ಇಲ್ಲವೇ, ಇವರಿಬ್ಬರಲ್ಲಿ ಯಾರಾದರೂ ಒಬ್ಬರು ಮಹಾಪೌರರಾಗಬಹುದು ಎಂದು ಹೇಳಲಾಗುತ್ತಿದೆ.

click me!