ಹೊಸಕೋಟೆ ಚುನಾವಣೆ ಕಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಫಿಕ್ಸ್

By Kannadaprabha NewsFirst Published Oct 1, 2019, 9:37 AM IST
Highlights

ರಾಜ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ಉಪ ಚುನಾವಣೆ ನಡೆಯಲಿದ್ದು, ಇದೀಗ ವಿವಿಧ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ಚಟುವಟಿಕೆ ಜೋರಾಗಿದೆ. ಇದೇ ವೇಳೆ ಹೊಸ ಕೋಟೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಬಹುತೇಕ ಖಚಿತವಾದಂತಾಗಿದೆ. 

ಬೆಂಗಳೂರು [ಸೆ.01]:  ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗುವುದು ಬಹುತೇಕ ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಹೆಬ್ಬಾಳ ಶಾಸಕ ಬೈರತಿ ಸುರೇಶ್‌ ಪತ್ನಿ ಪದ್ಮಾವತಿ ಸುರೇಶ್‌ ಅವರು ಸೋಮವಾರ ಅಧಿಕೃತವಾಗಿ ಹೊಸಕೋಟೆ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

ಚುನಾವಣಾ ಸಿದ್ಧತೆಗೆ ಚುರುಕು ನೀಡಿದ ಅವರು ಸೋಮವಾರ ನಗರದ ರಸ್ತೆಗಳು ಹಾಗೂ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ಪ್ರಮುಖ ದೇವಸ್ಥಾನಗಳು, ಮಸೀದಿಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಅಲ್ಲದೆ, ನಾಡಪ್ರಭು ಕೆಂಪೇಗೌಡ, ಸಂಗೊಳ್ಳಿರಾಯಣ್ಣ, ಡಾ.ಬಿ.ಆರ್‌. ಅಂಬೇಡ್ಕರ್‌, ಬಸವಣ್ಣ, ಕನಕದಾಸ ಹಾಗೂ ವಾಲ್ಮೀಕಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ವಿದ್ಯುಕ್ತವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೊದಲಿಗೆ ಹೊಸಕೋಟೆ ಪಟ್ಟಣದಲ್ಲಿರುವ ಆದಿ ಮುಕ್ತೇಶ್ವರ ದೇವಸ್ಥಾನ, ದೊಡ್ಡ ಮಾರಮ್ಮನ ದೇವಸ್ಥಾನ, ವರದಾಪುರ ಅಭಯ ಆಂಜನೇಯ ಸ್ವಾಮಿ ದೇವಸ್ಥಾನ, ಹೊಸಕೋಟೆಯ ವಿವಿಧ ದೇವಸ್ಥಾನಗಳಲ್ಲಿ ಪೂಜೆ ನಡೆಸಿ ದೇವರ ಆಶಿರ್ವಾದ ಪಡೆದರು. ಹೊಸಕೋಟೆಯ ಖಾದಿಯಾ ಮಸೀದಿಗೆ ಭೇಟಿ ನೀಡಿದ್ದರು. ಈ ವೇಳೆ ಪದ್ಮಾವತಿ ಸುರೇಶ್‌ ಹಾಗೂ ಬೈರತಿ ಸುರೇಶ್‌ ಅವರಿಗೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು, ಸದಸ್ಯರುಗಳು, ಕೆಪಿಸಿಸಿ ಸದಸ್ಯರು, ನಗರಸಭೆ, ಪುರಸಭೆ, ಬ್ಲಾಕ್‌ ಕಾಂಗ್ರೆಸ್‌, ಜಿಲ್ಲಾ ಪಂಚಾಯ್ತಿ, ಗ್ರಾಮಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಸೇರಿ ಹಲವರು ಸಾಥ್‌ ನೀಡಿದರು. ಇದೇ ವೇಳೆ ಕಾರ್ಯಕರ್ತರೊಂದಿಗೆ ಚುನಾವಣೆ ಸಿದ್ಧತೆ ಕುರಿತು ಅನೌಪಚಾರಿಕ ಮಾತುಕತೆಯನ್ನೂ ನಡೆಸಿದರು.

click me!