
ಕಲಬುರಗಿ: ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದ ಹಿರಿಯರಾಗಿದ್ದ ಬಸವಂತರಾಯ ಸಿದ್ದಣ್ಣ ಸಾಣಾಕ್ (ಸಾಹುಕಾರ) (81) ಹಾಗೂ ಶಿವರಾಯ ಸಿದ್ದಣ್ಣ ಸಾಣಾಕ್ (ಸಾಹುಕಾರ) (79) ಸಹೋದರರು ಸಾವಲ್ಲೂ ಒಂದಾಗಿದ್ದಾರೆ. ಜ.25ರಂದು ರಾತ್ರಿ 8 ಗಂಟೆಗೆ ಬಸವಂತರಾಯ ಸಾಣಾಕ್ ಅವರು ವಯೋಸಹಜವಾಗಿ ಮೃತಪಟ್ಟಿದ್ದರು. ಇವರಿಗೆ 2 ಗಂಡು, 2 ಹೆಣ್ಣು ಮಕ್ಕಳಿದ್ದಾರೆ. ಇವರ ಅಂತ್ಯಕ್ರೀಯೆ ಜ.26 ರಂದು ಸಂಜೆ 4 ಗಂಟೆಗೆ ಸ್ವಂತ ತೋಟದಲ್ಲಿ ಜರುಗಿತ್ತು. ಊರಿನ ಗಣ್ಯರು, ಸಂಬಂಧಿಗಳು, ಗ್ರಾಮಸ್ಥರೆಲ್ಲರೂ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಮೃತ ಬಸವಂತರಾಯ ಅವರ ಕಿರಿಯ ಸಹೋದರ ಕೂಡ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಅಣ್ಣನ ಸಾವಿನಿಂದಾಗಿ ಮನೆಯಲ್ಲಿ ಸೂತಕದ ವಾತಾವರಣವಿತ್ತು. ಆದರೆ ತಮ್ಮನ ಮನದಲ್ಲಿ ಅಣ್ಣನ ಸಾವು ಬಹಳ ಪರಿಣಾಮ ಬೀರಿತ್ತು. ಇದು ಮನೆಯವರು ಮತ್ತು ಸಂಬಂಧಿಕರಿಗೆ ಕಂಡು ಬರಲಿಲ್ಲ. ಮನದಲ್ಲೇ ನೊಂದುಕೊಂಡ ಕಿರಿಯ ಸಹೋದರ ಅಣ್ಣನ ಅಗಲಿಕೆಯ ನೋವಿನಲ್ಲೇ ಜ.26ರಂದು ರಾತ್ರಿ 8 ಗಂಟೆಗೆ ಉಸಿರು ಚೆಲ್ಲಿದ್ದಾರೆ.
ಇದು ಗ್ರಾಮಸ್ಥರಲ್ಲಿ ದಿಗ್ಭ್ರಾಂತಿ ಉಂಟು ಮಾಡಿದೆ. ಇವರಿಗೆ 2 ಗಂಡು, 1 ಹೆಣ್ಣು ಮಗಳಿದ್ದಾರೆ. ಇಬ್ಬರು ಸಹೋದರರು ಮಕ್ಕಳು, ಮೊಮ್ಮಕ್ಕಳು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಜ.26ರಂದು ಹಿರಿಯ ಅಣ್ಣನ ಸಾವಿನ ಸುದ್ದಿ ತಿಳಿದು ಅಂತ್ಯಕ್ರಿಯೆಗೆ ಬಂದಿದ್ದ ಸಂಬಂಧಿಕರೆಲ್ಲಾ ಅಂತ್ಯಕ್ರಿಯೆ ಮುಗಿಸಿ ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದ್ದರು. ಮರುದಿನ ಅದೇ ಸಮಯಕ್ಕೆ ಮತ್ತೆ ಎಲ್ಲಾ ಸಂಬಂಧಿಕರು, ಬಂಧು ಬಾಂಧವರು ಬಡದಾಳ ಗ್ರಾಮಕ್ಕೆ ಬಂದು ಕಿರಿಯ ಸಹೋದರನ ಅಂತ್ಯಕ್ರಿಯೆಯಲ್ಲೂ ಭಾಗಿಯಾಗುವಂತಾಯಿತು. ಇವರ ಅಂತ್ಯಕ್ರಿಯೆ ಕೂಡ ಸ್ವಂತ ತೋಟದಲ್ಲಿ ಹಿರಿಯ ಅಣ್ಣನ ಅಂತ್ಯಕ್ರಿಯೆ ನಡೆದ ಜಾಗದ ಪಕ್ಕದಲ್ಲಿ ಸಂಜೆ 4 ಗಂಟೆಗೆ ನಡೆದಿದ್ದು ಕೂಡ ವಿಶೇಷವಾಗಿತ್ತು. ಅಂತ್ಯಕ್ರಿಯೆಗೆ ಬಂದವರೆಲ್ಲಾ ಅಣ್ಣ ತಮ್ಮಂದಿರು ಒಂದೇ ದಿನದ ಅಂತರದಲ್ಲಿ ಇಹಲೋಕ ತ್ಯಜಿಸಿದರು.
ಇದನ್ನೂ ಓದಿ: ಅವಿವಾಹಿತ ಜೋಡಿ ಹೋಟೆಲ್ ಅಥವಾ ಲಾಡ್ಜ್ಗಳಲ್ಲಿ ತಂಗುವುದು ಕಾನೂನುಬಾಹಿರವೇ ?
ಬದುಕಿದ್ದಾಗಲೂ ಸಹೋದರರು ಹೇಗಿರಬೇಕೆನ್ನುವುದಕ್ಕೆ ಮಾದರಿಯಾಗಿದ್ದರು. ಸಾವಿನಲ್ಲೂ ಕೂಡ ಒಂದಾಗುವುದು ಅಪರೂಪ ಎನ್ನುವಂತೆ ಜನ ಮಾತನಾಡುವಂತಾಯಿತು. ಸಹೋದರರ ನಿಧನಕ್ಕೆ ಡಾ.ಅಭಿನವ ಚನ್ನಮಲ್ಲ ಶಿವಯೋಗಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಬಡದಾಳ ಗ್ರಾಮಸ್ಥರು ಕೂಡ ಸಾಹುಕಾರ ಸಹೋದರರ ನಿಧನಕ್ಕೆ ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಬಾಯ್ಫ್ರೆಂಡ್ ಎದುರೇ ಮಾಜಿ ಹುಡುಗನಿಗೆ ಲೊಚ ಲೊಚ ಕಿಸ್ ಕೊಟ್ಟ ಸ್ಟಾರ್ ನಟಿ! ಕಕ್ಕಾಬಿಕ್ಕಿ ಗೆಳೆಯ- ವಿಡಿಯೋ ವೈರಲ್