ಚಲಿಸುತ್ತಿದ್ದ ರೈಲಿನಲ್ಲಿ ಎಚ್‌ಎಸ್ವಿ ಕುರಿತ ಪುಸ್ತಕ ಬಿಡುಗಡೆ!

By Kannadaprabha NewsFirst Published Feb 6, 2020, 11:49 AM IST
Highlights

ಮೈಸೂರು ನಿಲ್ದಾಣ ತೊರೆದು ಬೆಂಗಳೂರಿನತ್ತ ಹೊರಟ ಬಸವ ಎಕ್ಸ್‌ಪ್ರೆಸ್‌ ರೈಲಿನಲ್ಲಿ ’ಸಾಹಿತ್ಯ ಸಿಂಧೂರ’ ಪುಸ್ತಕ ಲೋಕಾಪರ್ಣೆಗೊಂಡಿತು. ಕಲ್ಬುರ್ಗಿಯಲ್ಲಿ ಫೆ. 5 ರಿಂದ ಆರಂಭವಾಗಿರುವ 85 ನೇ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ ಅವರ ಬದುಕು ಬರಹ ಕುರಿತ ಪುಸ್ತಕ ಬಿಡುಗಡೆ ಮಾಡಲಾಯಿತು.

ಮೈಸೂರು(ಫೆ.06): ಹಳಿಗಳ ಮೇಲೆ ರೈಲು ಚಲಿಸುತ್ತಿತ್ತು. ಬೋಗಿಯಲ್ಲಿ ಸುಶ್ರಾವ್ಯ ಗಾಯನ ಚಿಮ್ಮತ್ತಿತ್ತು. ಸಾಹಿತ್ಯ ಕುರಿತಾಗಿ ಹಿತಮಿತವಾದ ಮಾತು ಹೊಮ್ಮುತ್ತಿತ್ತು. ಪ್ರಯಾಣಿಕರ ಕುತೂಹಲ ಪುಟಿದೆದ್ದಿತ್ತು. ಸಮ್ಮೇಳನಕ್ಕೆ ಹೊರಟ ಸಹೃದಯ ಕನ್ನಡಾಭಿಮಾನಿಗಳ ಸಮಕ್ಷಮವಿತ್ತು.

ಹೌದು, ಮೈಸೂರು ನಿಲ್ದಾಣ ತೊರೆದು ಬೆಂಗಳೂರಿನತ್ತ ಹೊರಟ ಬಸವ ಎಕ್ಸ್‌ಪ್ರೆಸ್‌ ರೈಲಿನಲ್ಲಿ ’ಸಾಹಿತ್ಯ ಸಿಂಧೂರ’ ಪುಸ್ತಕ ಲೋಕಾಪರ್ಣೆಗೊಂಡಿತು. ಕಲ್ಬುರ್ಗಿಯಲ್ಲಿ ಫೆ. 5 ರಿಂದ ಆರಂಭವಾಗಿರುವ 85 ನೇ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ ಅವರ ಬದುಕು ಬರಹ ಕುರಿತು ಮೈಸೂರಿನ ಪತ್ರಕರ್ತ, ಸಾಹಿತಿ ಹಾಗೂ ಸಂಘಟಕರಾದ ರಂಗನಾಥ್‌ ಮೈಸೂರು (ರಂಗಣ್ಣ) ಅವರು ರಚಿಸಿರುವ ’ಸಾಹಿತ್ಯ ಸಿಂಧೂರ’ ಪುಸ್ತಕವನ್ನು ಕೊಡಗಿನ ಪತ್ರಕರ್ತರಾದ ರಫೀಕ್‌ ತೋಚಮಕೇರಿ ಬಿಡುಗಡೆ ಮಾಡಿದ್ದಾರೆ.

ಲೀಟರ್‌ ಹಾಲಿಗೆ 30: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮನ್ಮುಲ್‌ ಭಾರೀ ಕೊಡುಗೆ

’ಸಾಹಿತ್ಯ ಸಿಂಧೂರ’ ಕೃತಿಯನ್ನು ಬಿಡುಗಡೆಗೊಳಿಸಿದ ಪತ್ರಕರ್ತ ರಫೀಕ್‌ ತೂಚಮಕೇರಿ ಮಾತನಾಡಿ, ಯಾವುದೇ ಮೌಲಿಕವಾದ ಕೃತಿ ಸಾರ್ವಕಾಲಿಕವಾಗಿರುತ್ತದೆ. ದೊಡ್ಡ ವಿದ್ವಾಂಸರನ್ನು ಮತ್ತು ಪ್ರಾಧ್ಯಾಪಕರುಗಳನ್ನು ಗುರಿಯಾಗಿಸಿಕೊಂಡು ಕೃತಿಗಳನ್ನು ರಚಿಸುವುದು ಸಾಧನೆಯಲ್ಲ. ಸಾರ್ವಕಾಲಿಕ ಕೃತಿಗಳ ಸತ್ವವನ್ನು ಜೀವಂತವಾಗಿರಿಸಲು ಯುವ ಮನಸ್ಸುಗಳನ್ನು ಕೇಂದ್ರೀಕರಿಸಿ ಕೃತಿ ರಚಿಸುವುದು ಕವಿಯ ಅಥವಾ ಲೇಖಕರ ಬಹುದೊಡ್ಡ ಸಾಧನೆ. ಅದನ್ನು ರಂಗನಾಥ್‌ ಮೈಸೂರು ಅವರು ಸಾಧಿಸಿದ್ದಾರೆ ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಜಯಪ್ಪ ಹೊನ್ನಾಳಿ ಮಾತನಾಡಿ, ಸಾಹಿತ್ಯ ಸಿಂಧು ಡಾ. ಎಚ್ಚೆಸ್ವಿ ಅವರ ಬದುಕು ಬರಹವನ್ನು ಕಲಾತ್ಮಕವಾಗಿ ಕೈಗೆಟಕುವ ಬಿಂದುವಾಗಿಸಿ, ಕನ್ನಡಿಗರೆಲ್ಲ ತಮ್ಮ ಹೃದಯದ ಮೇಲಿನ ಜೇಬಿನಲ್ಲಿಟ್ಟುಕೊಳ್ಳಬಹುದಾದ ತಮ್ಮ ’ಸಾಹಿತ್ಯ ಸಿಂಧೂರ’ ಕೃತಿಯನ್ನಿಂದು ಓಡುವ ಟ್ರೈನಿನಲ್ಲಿ ಲೋಕಾರ್ಪಣೆಗೊಳಿಸಿ; ಆ ಮೂಲಕ ಸಾಹಿತ್ಯ ಸಂದರ್ಭದಲ್ಲಿ ಇತಿಹಾಸ ನಿರ್ಮಿಸಿದ್ದಾರೆ ರಂಗನಾಥ್‌ ಮೈಸೂರು ಎಂದು ಶ್ಲಾಘಿಸಿದರು.

ದಾವಣಗೆರೆ: ಮಾಜಿ ಶಾಸಕ, ಪತ್ನಿ ವಿರುದ್ಧ ಕ್ರಿಮಿನಲ್‌ ಕೇಸ್..?

ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್‌ ಜವರೇಗೌಡ, ಕೃತಿಕಾರ ರಂಗನಾಥ್‌ ಮೈಸೂರು, ಹಿರಿಯ ಪತ್ರಕರ್ತ ಟಿ.ಎಲ್‌. ಶ್ರೀನಿವಾಸ್‌ ಇದ್ದರು. ಬಳಿಕ ರಂಗನಾಥ್‌ ಅವರು ರೈಲು ಬೋಗಿಗಳಿಗೆ ತೆರಳಿ ಪುಸ್ತಕ ಮಾರಾಟ ಮಾಡಿದರು. ಆಸಕ್ತ ಓದುಗರು ಕೊಂಡು ಪೊ›ತ್ಸಾಹಿಸಿದರು.

click me!