ಹಾಸನ: ವಿಷ್ಣುಸಮುದ್ರ ಕೆರೆಯಲ್ಲಿ ದೋಣಿ ವಿಹಾರ

By Kannadaprabha NewsFirst Published Aug 20, 2019, 10:11 AM IST
Highlights

ವಿಶ್ವ ವಿಖ್ಯಾತ ಬೇಲೂರಿನ ವಿಷ್ಣುಸಮುದ್ರ ಕೆರೆಯಲ್ಲಿ ದೋಣಿ ವಿಹಾರ ಹಾಗೂ ನೃತ್ಯ ಕಾರಂಜಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ಹೇಳಿದರು. ಯಗಚಿ ಅಣೆಕಟ್ಟೆಯ ಸಮೀಪ 300 ಕೋಟಿ ವೆಚ್ಚದಲ್ಲಿ ಕೆಆರ್‌ಎಸ್‌ ಮಾದರಿಯಲ್ಲಿ ಬೃಹತ್‌ ಉದ್ಯಾನವನ್ನು ನಿರ್ಮಿಸಲು ರೂಪರೇಷೆ ಹಾಕಲಾಗಿದೆ ಎಂದರು.

ಹಾಸನ(ಆ.20): ವಿಶ್ವ ವಿಖ್ಯಾತ ಬೇಲೂರಿನ ವಿಷ್ಣುಸಮುದ್ರ ಕೆರೆಯಲ್ಲಿ ದೋಣಿ ವಿಹಾರ ಹಾಗೂ ನೃತ್ಯ ಕಾರಂಜಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ಹೇಳಿದರು.

ಪಟ್ಟಣದ ಚನ್ನಕೇಶವ ದೇಗುಲ ರಸ್ತೆಯಲ್ಲಿರುವ ಪ್ರವಾಸೋದ್ಯಮ ಇಲಾಖೆಯಿಂದ ನವೀಕರಣಗೊಂಡ ರೆಸ್ಟೋರೆಂಟ್‌ನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಹಳೇಬೀಡು- ಬೇಲೂರು ಉತ್ತಮ ಪ್ರವಾಸಿ ಕೇಂದ್ರಗಳಾಗಿದ್ದು, ಪ್ರವಾಸಿಗರಿಗೆ ಮನರಂಜನೆ ನೀಡುವ ನಿಟ್ಟಿನಲ್ಲಿ ದೋಣಿ ವಿಹಾರ, ನೃತ್ಯ ಕಾರಂಜಿಗಳನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದರು.

ಮಂಡ್ಯ: ನೆರೆ ಸಂತ್ರಸ್ತರಿಗೆ ವ್ಯಾಪಾರಿಗಳಿಂದ ನೆರವು

4 ಕೋಟಿ ವೆಚ್ಚದಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಚೆನ್ನಕೇಶವ ದೇಗುಲ ಹಿಂಭಾಗ ಕಾಮಗಾರಿಗಳನ್ನು ಆರಂಭಿಸಲಾಗಿತ್ತು. ಪ್ರವಾಸಿಗರ ವಾಹನ ನಿಲ್ದಾಣ, ಶೌಚಾಲಯ ಹಾಗೂ ಹೊಟೇಲ್‌ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಯಾರೋ ಒಬ್ಬರು ಕಾಮಗಾರಿ ನಿರ್ಮಾಣಕ್ಕೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದು, ಇದರಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದರು.

ಕೋರ್ಟ್‌ ತಡೆಯಾಜ್ಞೆಯಿಂದ ಪ್ರವಾಸಿಗರಿಗೆ ಅನಾನುಕೂಲವಾಗುತ್ತಿರುವ ಬಗ್ಗೆ ಕೋರ್ಟ್‌ಗೆ ಮನವರಿಗೆ ಮಾಡಿಕೊಟ್ಟು ಅಲ್ಲಿಯೇ ಕಾಮಗಾರಿಯನ್ನು ಆರಂಭಿಸುವ ವಿಶ್ವಾಸವಿದೆ. ದೇಗುಲಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ವಾಹನ ನಿಲುಗಡೆ, ಶೌಚಾಲಯ ಸಮೀಪದಲ್ಲೆಯೇ ಇರಬೇಕು. ಅದನ್ನು ಬಿಟ್ಟು 2-3 ಕಿಮೀ ದೂರದಲ್ಲಿ ಕಟ್ಟಿದರೆ ಯಾರಿಗೆ ಪ್ರಯೋಜನ ಎಂದು ಕೊರ್ಟ್‌ಗೆ ಹೊಗಿರುವವರು ತಿಳಿಸಲಿ ಎಂದರು.

ಬೃಹತ್ ಉದ್ಯಾನವನ:

ಪಟ್ಟಣದ ಯಗಚಿ ಅಣೆಕಟ್ಟೆಬಳಿ ಮೂರು ಕೋಟಿ ವೆಚ್ಚದಲ್ಲಿ ಸ್ಟಾರ್‌ ಹೊಟೇಲ್‌ ನಿರ್ಮಾಣವಾಗುತ್ತಿದೆ. ಅಲ್ಲದೇ, ಯಗಚಿ ಅಣೆಕಟ್ಟೆಯ ಸಮೀಪ 300 ಕೋಟಿ ವೆಚ್ಚದಲ್ಲಿ ಕೆಆರ್‌ಎಸ್‌ ಮಾದರಿಯಲ್ಲಿ ಬೃಹತ್‌ ಉದ್ಯಾನವನ್ನು ನಿರ್ಮಿಸಲು ರೂಪರೇಷೆ ಹಾಕಲಾಗಿದೆ. ಆದರೆ, ಈ ಹೊಸ ಸರ್ಕಾರ ಬಂದಿರುವುದರಿಂದ ಅವರು ಯೋಜನೆ ಮುಂದುವರೆಸುವ ಬಗ್ಗೆ ಮನವರಿಕೆ ಮಾಡಲಾಗುವುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪಟ್ಟಣದ ಕೆಎಸ್‌ಟಿಡಿಸಿ ಹೋಟೇಲ್‌ ವೇಲಾಪುರಿ ಅವರಣದಲ್ಲಿ ನವೀಕರಣಗೊಂಡ ರೆಸ್ಟೋರೆಂಟ್‌ನಲ್ಲಿ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ತಿಂಡಿ ತಿನಿಸುಗಳನ್ನು ನೀಡುವ ಮೂಲಕ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವಂತಾಗಲಿ ಎಂದರು.

ಇದೇ ವೇಳೆ ವೇಲಾಪುರಿ ಹೊಟೇಲ್‌ ವ್ಯವಸ್ಥಾಪಕ ಎಸ್‌.ಪಿ.ಚಂದ್ರಯ್ಯ, ಜಿಪಂ ಸದಸ್ಯೆ ಲತಾಮಂಜೇಶ್ವರಿ, ತಾಪಂ ಮಾಜಿ ಅಧ್ಯಕ್ಷ ಸುಭಾನ್‌, ವೈದ್ಯ ನರಸೇಗೌಡ ಇತರರು ಇದ್ದರು.

click me!