Vijayapura: ಮಹಾನಗರ ಪಾಲಿಕೆ ಚುನಾವಣೆ ನಡುವೆ ಮಾಟಮಂತ್ರದ ಕಾಟ!

By Govindaraj SFirst Published Oct 19, 2022, 10:31 AM IST
Highlights

• ಲಿಂಬೆ, ಮೊಟ್ಟೆ,‌ ಕುಂಕುಮ ಎಸೆದು ಪ್ರಯೋಗ, ಅಭ್ಯರ್ಥಿಗಳಲ್ಲಿ ಆತಂಕ..!
• ಪ್ರಬಲ ಅಭ್ಯರ್ಥಿ ಸೋಲಿಸಲು ವಾಮಮಾರ್ಗ ಹಿಡಿದ್ರಾ.?!
• ಕಿಡಿಗೇಡಿಗಳ ಕೃತ್ಯಕ್ಕೆ ಸಾರ್ವಜನಿಕರ ಆಕ್ರೋಶ..!

ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಅ.19): ಮಹಾನಗರ ಪಾಲಿಕೆ ಚುನಾವಣೆ ಜೋರಾಗಿದೆ. ಟಿಕೆಟ್ ಪೈಪೋಟಿ ಬಳಿಕ ಈಗ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. ಅಬ್ಬರದ ಪ್ರಚಾರದ‌ ಜೊತೆಗೆ ಚುನಾವಣೆಯ ಅಸಲಿ ಆಟ ಶುರುವಾಗುವ ಮುನ್ನವೇ ಅಭ್ಯರ್ಥಿಗಳಿಗೆ ಮಾಟಮಂತ್ರದ ಕಾಟ ಜೋರಾಗಿದೆ.. ಬಂಡಾಯದ ಬಿಸಿಯ ನಡುವೆ ಮಾಟಮಂತ್ರ ಅಭ್ಯರ್ಥಿಗಳನ್ನ ಕಂಗೆಡಿಸಿದೆ.

ತೀವ್ರ ಪೈಪೋಟಿ ಹುಟ್ಟಿಸಿರುವ ಪಾಲಿಕೆ ಚುನಾವಣೆ: 4 ವರ್ಷದ ಬಳಿಕ ನಡೆಯುತ್ತಿರುವ ಪಾಲಿಕೆ ಚುನಾವಣೆ ಬಾರಿ ಪೈಪೋಟಿಗೆ ಕಾರಣವಾಗಿದೆ. ಟಿಕೆಟ್‌ಗಾಗಿಯು ಪಕ್ಷಗಳಲ್ಲಿ ಪೈಪೋಟಿ ಇತ್ತಾದರು ಅಳೆದು ತೂಗಿ ನಾಯಕರು ಟಿಕೆಟ್ ನೀಡಿದ್ದಾರೆ.‌ ಆದ್ರೆ ಈ ನಡುವೆ ಸ್ಪರ್ಧೆಗೆ ಇಳಿದಿರುವ ಅಭ್ಯರ್ಥಿಗಳಿಗೆ ಹೊಸ ತಲೆ ನೋವು ಶುರುವಾಗಿದೆ. ಮಾಟಮಂತ್ರದ ಭಯ ಈಗ ಅಭ್ಯರ್ಥಿಗಳನ್ನ ಕಾಡ್ತಿದೆ.

ವಿಜಯಪುರ ಪಾಲಿಕೆ ಎಲೆಕ್ಷನ್: ತಡೆಯಾಜ್ಞೆ ಕೋರಿ ಅರ್ಜಿ ವಜಾಗೊಳಿಸಿದ ಕಲಬುರ್ಗಿ ಹೈಕೋರ್ಟ್ ಪೀಠ

ವಾರ್ಡ್ ನಂ 14ರಲ್ಲಿ ಲಿಂಬೆ, ಕುಂಕುಮ, ಮೊಟ್ಟೆ ಪ್ರತ್ಯಕ್ಷ: ನಗರದ ವಾರ್ಡ್ ನಂಬರ್ 14ರಲ್ಲಿ ದಿಢೀರ್ ಅಂತಾ ನಿಂಬೆ ಹಣ್ಣು, ಎಲೆ, ಮೊಟ್ಟೆ ಕುಂಕುಮ ಸೇರಿ ಮಾಟಮಂತ್ರ‌ ಪ್ರಯೋಗಕ್ಕೆ ಬಳಸುವ ಸಾಮಗ್ರಿ ಪತ್ತೆಯಾಗಿವೆ. ಶಿಕಾರಖಾನೆಯ ಅನಂತಲಕ್ಷ್ಮೀ ಹಾಲ್ ಬಳಿಯಲ್ಲಿ ಅಪರಿಚಿತರು ಮೊಟ್ಟೆ, ಕುಂಕುಮ, ಲಿಂಬೆ ಹಣ್ಣು, ಎಲೆಗಳನ್ನ ಎಸೆದು ಹೋಗಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ. ಬಳಿಕ ಸ್ಥಳೀಯರ ಲಿಂಬೆ, ಕುಂಕುಮ ಪ್ಯಾಕೆಟ್, ಎಲೆ‌ ಸೇರಿದಂತೆ ಇತರೆ ಸಾಮಗ್ರಿಗಳನ್ನ ಸ್ಥಳದಿಂದ‌ ತೆರವು ಮಾಡಿದ್ದಾರೆ.

ಅಭ್ಯರ್ಥಿಗಳ ಎದೆಯಲ್ಲು ಢವಢವ: ಇತ್ತ ಮಾಟಮಂತ್ರದ ಪ್ರಯೋಗದಿಂದ‌ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಚುನಾವಣೆ ಸಮಯದಲ್ಲಿ ತಮ್ಮ‌ ಏರಿಯಾದಲ್ಲಿ ಈ ರೀತಿಯ ವಸ್ತುಗಳು ಕಂಡು ಬಂದಿರೋದು ಸಹಜವಾಗಿಯೇ ಅಭ್ಯರ್ಥಿಗಳಲ್ಲಿ ಆತಂಕ ಉಂಟುಮಾಡಿದೆ. ಸ್ಥಳೀಯ ಜನರಲ್ಲು ಸಹಜವಾಗಿಯೆ ಇದು ಭಯ ಮೂಡಿಸಿದೆ. 

ಚುನಾವಣೆ ನಡೆಯೊವಾಗಲೇ ಮಾಟದ ಕಾಟ: ಚುನಾವಣೆ ನಡೆಯುವಾಗಲೆ‌ ಮಾಟಮಂತ್ರದ ಪ್ರಯೋಗ ಸಾಮಾನ್ಯ. ಎದುರಾಳಿಯನ್ನ ಸೋಲಿಸಲು ತಾವು ಶಕ್ತರು ಅಲ್ಲ ಎನಿಸಿದಾಗ ಕೆಲವರು ಮಾಟಮಂತ್ರ ಪ್ರಯೋಗದ ಮೊರೆ ಹೋಗ್ತಾರೆ. ಹೀಗೆ ವಾಮಮಾರ್ಗ ಹಿಡಿದು ವಿನಾಕಾರಣ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡ್ತಾರೆ. ಪಾಲಿಕೆ ಚುನಾವಣೆಯಲ್ಲು ಮಾಟಮಂತ್ರದ ಪ್ರಯೋಗ ಕಂಡು ಬರ್ತಿರೋದು ಅಭ್ಯರ್ಥಿಗಳಲ್ಲಿ ಗೊಂದಲ‌ ಮೂಡಿಸಿದೆ ಕಂಡುಬರ್ತಿದೆ.

ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ: ಶಿಕಾರಖಾನೆಯ ವಾರ್ಡ್ ನಂಬರ್ 14ರಲ್ಲಿ ಕಿಡಿಗೇಡಿ ನಡೆಸಿದ ಕೃತ್ಯಕ್ಕೆ‌ ಸ್ಥಳೀಯ ಆಕ್ರೋಶ ಹೊರಹಾಕಿದ್ದಾರೆ. ಚುನಾವಣೆ ನಡೆಯುತ್ತಿರುವಾಗ ಬೇಕಂತಲೆ ಗೊಂದಲ ಸೃಷ್ಟಿಸಲು ಹೀಗೆ ಮಾಡಿದ್ದಾರಾ ಎನ್ನುವ ಅನುಮಾನಗಳನ್ನ ಸ್ಥಳೀಯರು ವ್ಯಕ್ತ ಪಡೆಸಿದ್ದಾರೆ‌.‌ ಇದು ಕೇವಲ ಕಿಡಿಗೇಡಿಗಳ ಆಟವಾ? ಅಥವಾ ನಿಜಕ್ಕು ಚುನಾವಣೆಯ ದೃಷ್ಟಿಯಿಂದಲೇ ಪೈಪೋಟಿ ನಡುವೆ ಹೀಗೆ ಮಾಟಮಂತ್ರ ಪ್ರಯೋಗ ನಡೆದಿದೇಯಾ ಅನ್ನೋದು ಸ್ಪಷ್ಟವಾಗಿಲ್ಲ. 

ಕೆರೆ ತುಂಬಿಸಿದ ಬಿಜೆಪಿ ಸರ್ಕಾರ ಸ್ಮರಿಸಿ: ಎಂ.ಬಿ.ಪಾಟೀಲಗೆ ಈಶ್ವರಪ್ಪ ಟಾಂಗ್‌

ಚುನಾವಣೆ ಬಂದ್ರೆ ಅಭ್ಯರ್ಥಿಗಳಿಗೆ ಮಾಟದ ತಲೆನೋವು: ಇನ್ನೂ ಚುನಾವಣೆ ಬಂದಾಗಲೇ ಇಂಥ ಕೃತ್ಯಗಳು ಹೆಚ್ಚಾಗುತ್ವೆ.‌ ಚುನಾವಣೆಯಲ್ಲಿ ಎದುರಾಳಿಗಳನ್ನ ಸೋಲಿಸಲು ಅಭ್ಯರ್ಥಿಗಳ ಮನೆ ಎದುರು ಲಿಂಬೆ ಹಣ್ಣು ಎಸೆಯುವುದು. ಮೊಟ್ಟೆ, ಕೋಳಿ ಮಾಂಸ,‌‌ ಕುಂಕುಮ ಎಸೆದು ಮಾಟ ಮಾಡಿಸ್ತಾರೆ. ಇದಕ್ಕೂ ಮುಂದೆ ಸಾಗಿ ಊಡೋ ಮಾದರಿಯಲ್ಲಿ ಗೊಂಬೆಗೆ ಸೂಜಿ ಚುಚ್ಚಿ ಮಾಟ ಮಾಡಿಸೋದು ಉಂಟು. ಗ್ರಾ.ಪಂ ಎಲೆಕ್ಷನ್‌ಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಇಂಥಹ ಘಟನೆಗಳು ಕಂಡು ಬರುತ್ವೆ. ಈಗ ಇಂಥದ್ದೆ ಘಟನೆ ಮಹಾನಗರ ಪಾಲಿಕೆ‌ ಚುನಾವಣೆ ನಡೆಯುವಾಗ ನಡೆದಿರೋದು ಆತಂಕಕ್ಕೆ ಕಾರಣವಾಗಿದೆ.

click me!