ಉಪಚುನಾವಣೆ ಗೆಲುವು ಗ್ರಾಪಂ ಅಧಿಕಾರದ ದಿಕ್ಸೂಚಿ

By Kannadaprabha NewsFirst Published Nov 11, 2020, 11:04 AM IST
Highlights

ಈಗಾಗಲೇ ನಡೆದ ಉಪ ಚುನಾವಣೆಯಲ್ಲಿ  ಬಿಜೆಪಿ ಗೆಲುವು ಸಾಧಿಸಿದ್ದು ಇದೊಮದು ದಿಕ್ಸೂಚಿ ಎಂದು ಮುಖಂಡರೋರ್ವರು ಹೇಳಿದ್ದಾರೆ. 

 ಮಂಡ್ಯ (ನ.11):  ಬೆಂಗಳೂರಿನ ರಾಜರಾಜೇಶ್ವರಿ ನಗರ, ತುಮಕೂರಿನ ಶಿರಾ ವಿಧಾನಸಭಾ ಉಪ ಚುನಾವಣೆಯಲ್ಲಿ ಕಮಲ ಅರಳಿರುವುದು ಮುಂದಿನ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದರ ದಿಕ್ಸೂಚಿಯಾಗಿದೆ ಎಂದು ಬಿಜೆಪಿ ಮುಖಂಡ ಹೆಚ್‌.ಆರ್‌. ಅರವಿಂದ್‌ ಹೇಳಿದರು.

ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವುದಕ್ಕೆ ನಗರದಲ್ಲಿ ಜಿಲ್ಲಾ ಜಿಜೆಪಿ ಮುಖಂಡ ಎಚ್‌.ಆರ್‌. ಅರವಿಂದ್‌ ನೇತೃತ್ವದಲ್ಲಿ ಪದಾದಿಕಾರಿಗಳು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ಸಂಭ್ರಮಿಸಿದರು.

ನಗರದ ಜಯಚಾಮರಾಜೇಂದ್ರ ಒಡೆಯವರ್‌ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಸರ್ಕಾರದ ಪರ ಘೋಷಣೆಗಳನ್ನು ಕೂಗಿದರು. ಪ್ರಧಾನಿ ನರೇಂದ್ರಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತ ಯೋಜನೆಗಳು ಉಪ ಚುನಾವಣೆಯ ಗೆಲುವಿಗೆ ಶ್ರೀರಕ್ಷೆಯಾಗಿವೆ ಎಂದು ಸಂತಸಪಟ್ಟರು.

ಕಾಂಗ್ರೆಸ್ ಪರವಾಗಿ ನಿಂತ ಸುಮಲತಾ : ನನಗೆ ಬೆಂಬಲಿಸಿದ್ದಕ್ಕೆ ಸಪೋರ್ಟ್ ಎಂದ ಸಂಸದೆ ...

ರಾಜ್ಯದಲ್ಲಿ ನಡೆದ ಉಪಚುನಾವಣೆ ಮತ್ತು ಬಿಹಾರ, ಮಧ್ಯಪ್ರದೇಶ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಉಪ ಚುನಾವಣೆಗಳ ಬಹುಪಾಲು ಕ್ಷೇತ್ರಗಲ್ಲಿ ಬಿಜೆಪಿ ಗೆಲುವು ಸಾಧಿಸಿದೆ, ಈ ಗೆಲುವು ಮುಂಬರುವ ಗ್ರಾಪಂ ಚುನಾವಣೆಯ ಬಿಜೆಪಿ ಗೆಲುವು ಸಾಧಿಸುವುದರ ದಿಕ್ಸೂಚಿಯಾಗಿದೆ ಎಂದರು.

ಯಡಿಯೂರಪ್ಪನವರು ನೀಡಿರುವ ಉತ್ತಮ ಆಡಳಿತ ಜನರ ಮೆಚ್ಚುಗೆ ಗಳಿಸಿರುವುದಕ್ಕೆ ಉಪ ಚುನಾವಣೆಯ ಗೆಲುವು ಸಾಕ್ಷಿಯಾಗಿದೆ. ಕೆ.ಆರ್‌.ಪೇಟೆ ಮಾದರಿಯಲ್ಲೇ ಶಿರಾ ಕ್ಷೇತ್ರದಲ್ಲೂ ಬಿಜೆಪಿ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಚುನಾವಣಾ ಕಾರ್ಯತಂತ್ರ ಯಶಸ್ಸು ಕಂಡಿದೆ. ಸಂಘಟನಾ ಚತುರರಾಗಿರುವ ಬಿ.ವೈ.ವಿಜಯೇಂದ್ರ ಅವರು ತಂದೆಯಂತೆಯೇ ಬಿಜೆಪಿಗೆ ಭವಿಷ್ಯದ ಉತ್ತಮ ನಾಯಕರಾಗಲಿದ್ದಾರೆ ಎನ್ನುವುದನ್ನು ಉಪ ಚುನಾವಣೆಗಳು ಸಾಬೀತುಪಡಿಸಿವೆ ಎಂದು ಹೇಳಿದರು.

ರಾಜರಾಜೇಶ್ವರಿ ನಗರದಲ್ಲಿ ಒಕ್ಕಲಿಗರ ಮತಗಳು ಬಿಜೆಪಿಗೆ ಒಲಿದುಬಂದಿವೆ. ಕಾಂಗ್ರೆಸ್‌-ಜೆಡಿಎಸ್‌ನವರ ಆಟ ಕ್ಷೇತ್ರದಲ್ಲಿ ನಡೆಯಲಿಲ್ಲ. ಬಿಜೆಪಿ ಅಭ್ಯರ್ಥಿಯಾಗಿದ್ದ ಮುನಿರತ್ನ ಅವರು ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ. ಕಳೆದುಹೋಗಿದ್ದ ಕ್ಷೇತ್ರಗಳು ಮತ್ತೆ ಬಿಜೆಪಿ ಮಡಿಲು ಸೇರಿಕೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆಡಳಿತದ ಜನಪರ ಯೋಜನೆಗಳು, ಕೊವಿಡ್‌-19ರ ಸಂಕಷ್ಟಕರ ದಿನಗಳಲ್ಲಿ ತೆಗೆದುಕೊಂಡ ಜೀವರಕ್ಷಣೆಯ ಸವಾಲುಗಳು, ವಿವಿಧ ಯೋಜನೆಗಳಿಗೆ ಬಿಡುಗಡೆಮಾಡಿದ ಆರ್ಥಿಕ ನೆರವನ್ನು ಮತದಾರರು ಪರಿಗಣಿಸಿ ಗೆಲುವು ನೀಡಿದ್ದಾರೆ ಎಂದು ತಿಳಿಸಿದರು.

ಡಿಸೆಂಬರ್‌ ತಿಂಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಬಿಜೆಪಿ ಅಧಿಕಾರ ಹಿಡಿಯಲಿದೆ. ಆ ಚುನಾವಣೆಗೆ ಉಪ ಚುನಾವಣೆಯ ಫಲಿತಾಂಶಗಳೇ ದಿಕ್ಸೂಚಿಯಾಗಿವೆ. ಬಿಜೆಪಿ ದಕ್ಷಿಣ ಕರ್ನಾಟಕ ಸೇರಿದಂತೆ ದೇಶಾದ್ಯಂತ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಬಿಹಾರದಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದೆ. ಪ್ರಧಾನಿ ಮೋದಿ ಅವರ ಸಾಧನೆಗಳನ್ನು ದೇಶದ ಜನರು ಮೆಚ್ಚಿಕೊಂಡು ಬಿಜೆಪಿಗೆ ಪ್ರತಿ ಚುನಾವಣೆಯಲ್ಲೂ ಶಕ್ತಿ ತುಂಬುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ವಿವೇಕ್‌, ಹೊಸಹಳ್ಳಿಶಿವು, ಮಹೇಶ್‌, ಹನಿಯಂಬಾಡಿ ನಾಗರಾಜು, ಜವರೇಗೌಡ, ಮಂಜುನಾಥ್‌, ಚಾಮರಾಜ, ವಸಂತ್‌ ಮತ್ತಿತರರಿದ್ದರು.

click me!