ಮಾಜಿ ಸಚಿವ ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ತೀವ್ರ ಹತಾಶರಾಗಿದ್ದಾರೆ. ಅವರಿಗೆ ಇದೆಲ್ಲಾ ಇಷ್ಟವಾಗುತ್ತಿಲ್ಲ...
ಹಾಸನ (ಅ.15) : ಜನತೆ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಇಷ್ಟಪಡುತ್ತಾರೆಯೇ ಹೊರತು ಪಾಳೆಗಾರಿಕೆ ಸಂಸ್ಕೃತಿಯನ್ನಲ್ಲ ಎಂದು ಹೇಳುವ ಮೂಲಕ ‘ಹಾಸನದಲ್ಲಿ ಅಧಿಕಾರಿಗಳು ಬಿಜೆಪಿ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ’ ಎನ್ನುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆಗೆ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡರು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಜಿಲ್ಲೆಯಲ್ಲಿ ಅವರು ಹೇಳಿದ್ದೆ ಶಾಸನ ಎಂಬಂತೆ ಆಡಳಿತ ನಡೆಸಲಾಗುತಿತ್ತು. ಆದರೆ ಹಾಸನದಲ್ಲಿ ಯಾವ ಪಾಳೆಗಾರಿಕೆ ಸಂಸ್ಕೃತಿ ನಡೆಯುವುದಿಲ್ಲ. ಜನರು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಿರೀಕ್ಷೆ ಮಾಡುತ್ತಿದ್ದರು. ಇಲ್ಲಿನ ಅಧಿಕಾರಿಗಳು ಕೂಡ ಇದೀಗ ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ. ಇದು ಮಾಜಿ ಸಚಿವರಿಗೆ ಇಷ್ಟವಾಗುತ್ತಿಲ್ಲ. ಹಾಗಾಗಿ ಹೀಗೆಲ್ಲಾ ಆರೋಪ ಮಾಡುತ್ತಿದ್ದಾರೆ. ಇದು ಅವರ ಹತಾಶೆಯನ್ನು ತೋರಿಸುತ್ತದೆ ಎಂದರು.
'ಗೊಮ್ಮಟೇಶ್ವರ ನಿರ್ಮಿಸಿದ್ದು ನಾವೇ ಅಂತಾರೆ ರೇವಣ್ಣ'
ಹಾಸನದ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿ, ನಗರಸಭೆ ಅಧ್ಯಕ್ಷರ ಸ್ಥಾನ ಎಸ್.ಟಿ. ಪಂಗಡ ಬಂದಿರುವುದಕ್ಕೆ ಇದು ಕಾನೂನು ಬಾಹಿರವಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಆರೋಪಿಸಿದ್ದಾರೆ. ಆದರೆ ಸರಕಾರವು ಕಾನೂನಿನಲ್ಲಿ ಇರುವಂತೆ ಮೀಸಲಾತಿ ನಿಗದಿಮಾಡಿದೆ. ಹಿಂದಿನ ದಿನಗಳಲ್ಲಿ ನಗರಸಭೆಯ 35 ವಾರ್ಡ್ಗಳ ಮೀಸಲಾತಿಯನ್ನು ಕಾಂಗ್ರೆಸ್ ಸರಕಾರದ ಅವದಿಯಲ್ಲಿ ನಿಗದಿ ಮಾಡಿತ್ತು. ಜೆಡಿಎಸ್ ಅಕಾರಕ್ಕೆ ಬಂದಾಗ ಆ ಮೀಸಲಾತಿಯನ್ನು ಏತಕ್ಕಾಗಿ ಬದಲಾವಣೆ ಮಾಡಿದರು? ಹಳೆಯದನ್ನು ನೆನಪಿಸಿಕೊಂಡರೆ ಇವರಿಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ಟೀಕಿಸಿದರು.
ತಮಗೆ ಬೇಕಾದಂತೆ ರಾಜಕಾರಣ ಮಾಡುತ್ತಾರೆ. ಅದನ್ನೆ ಬೇರೆಯವರು ಮಾಡಿದರೇ ಕಾನೂನು ಬಾಹಿರ ಎಂದು ಹೇಳುವುದಾದರೇ ನಾವುಗಳು ರಾಜಕಾರಣವನ್ನೇ ಮಾಡಲಾಗುವುದಿಲ್ಲ. ಇನ್ನು ನಾಲ್ಕನೆ ವಾರ್ಡಿನಲ್ಲಿ ಹೆಚ್ಚಿನವರು ಪರಿಶಿಷ್ಟಜನಾಂಗದವರಿದ್ದಾರೆ. ಆದರೇ ಇದನ್ನು ಜನರಲ್ಗೆ ಬದಲಾಯಿಸಿ ಯಾವ ಕಾನೂನು ಪಾಲನೆ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಅವರು ಮಾಡಿದಂತೆಯೇ ನಾನು ಕೂಡ ಮಾಡಿದ್ದೀನಿ ಅಷ್ಟೆ. ಇಷ್ಟಕ್ಕೆ ಹತಾಶರಾಗದೇ ರಾಜಕಾರಣವನ್ನು ಒಪ್ಪಿಕೊಳ್ಳಬೇಕು ಎಂದು ಕುಟುಕಿದರು.