ಬಿಜೆಪಿ ಶಾಸಕ ಯತ್ನಾಳ ನಕಲಿ ಹಿಂದುತ್ವವಾದಿ: ತೆಗ್ಗಿ

By Kannadaprabha NewsFirst Published Nov 18, 2022, 9:00 PM IST
Highlights

ಸಹಬಾಳ್ವೆಗೆ ಬಣಜಿಗರು ಪ್ರಸಿದ್ಧರು: ಬಣಜಿಗರ ಟೀಕೆಗೆ ಸರಿಯಾಗಿ ಬುದ್ಧಿ ಕಲಿಸಿ: ಸಂಜಯ ತೆಗ್ಗಿ 

ರಬಕವಿ-ಬನಹಟ್ಟಿ

ಬಾದಾಮಿ(ನ.18): ಬಣಜಿಗ ಜನಾಂಗ ರಾಜ್ಯದ ಸ್ವಾಭಿಮಾನಿ ಸಮಾಜವಾಗಿದ್ದು, ಎಲ್ಲ ಸಮುದಾಯಗಳೊಡನೆ ಸಹಬಾಳ್ವೆ ಮಾಡುತ್ತ ಕಾಯಕ ತತ್ವದ ಆಧಾರದಲ್ಲಿ ಬದುಕುವವರಾಗಿದ್ದಾರೆ. ಅದನ್ನು ಸರಿಯಾಗಿ ತಿಳಿದುಕೊಳ್ಳದ ವಿಜಯಪುರ ಶಾಸಕ ಬಸನಗೌಡ ಯತ್ನಾಳ ಬಣಜಿಗರ ಅವಹೇಳನ ಮಾಡಿರುವುದು ಅವರ ನಕಲಿ ಹಿಂದುತ್ವದ ಮುಖವಾಡವನ್ನು ಕಳಚಿದಂತಾಗಿದೆ ಎಂದು ನಗರಾಧ್ಯಕ್ಷ ಸಂಜಯ ತೆಗ್ಗಿ ಕಟುವಾಗಿ ಟೀಕಿಸಿದರು.

ನಾವು ವ್ಯವಹಾರದಲ್ಲಿ ಪ್ರಾಮಾಣಿಕತೆಯನ್ನು ರೂಢಿಸಿಕೊಂಡ ಸಮಾಜದವರಿದ್ದು, ಬಸನಗೌಡ ಪಾಟೀಲರಂತೆ ತಪ್ಪು ಲೆಕ್ಕಪತ್ರ ತೋರಿಸಿ ಸಂಘ-ಸಂಸ್ಥೆಗಳನ್ನು ಉದ್ಧಾರ ಮಾಡಿಲ್ಲವೆಂದು ತಿರುಗೇಟು ನೀಡಿದರು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ವಿಜಯಪುರ ಶಾಸಕ ಯತ್ನಾಳ ಇಬ್ಬರೂ ತಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಕೇಳುವ ಭರದಲ್ಲಿ ಬಣಜಿಗ ಸಮಾಜವನ್ನು ಅನಗತ್ಯವಾಗಿ ಅವಹೇಳನ ಮಾಡಿರುವುದು ಸಮುದಾಯಗಳ ನಡುವೆ ಕೊಳ್ಳಿ ಇಡುವ ಯತ್ನವಾಗಿದೆ. ಬಣಜಿಗ ಮತ್ತು ಪಂಚಮಸಾಲಿ ಸಮುದಾಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮಲ್ಲಿ ವೈವಾಹಿಕ ಸಂಬಂಧಗಳಾಗಿವೆ. ಹಿಂದು ಹುಲಿ ಎಂಬ ಖ್ಯಾತಿ ಹೊಂದಿದ್ದ ಯತ್ನಾಳ ಬಣಜಿಗರನ್ನು ಹಿಂದುಗಳೆಂದು ಗುರುತಿಸದೇ ಹತಾಶೆಯಿಂದ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ನಿಮ್ಮ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯ ಪಡೆಯಲು ಬಣಜಿಗರ ಅಭ್ಯಂತರವೇನಿಲ್ಲ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೇಳುವುದು ಅವರ ಹಕ್ಕು ಅದನ್ನು ಬಿಟ್ಟು ಅನಗತ್ಯವಾಗಿ ಬೇರೊಂದು ಸಮುದಾಯದ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ ಯತ್ನಾಳರು ಹಿಂದು ಹುಲಿಯಲ್ಲ. ಬದಲಾಗಿ ತಿಳಿವಳಿಕೆ ಕೊರತೆಯ ಕಾರಣಕ್ಕೆ ಇಂದು ಇಲಿಯಾಗಿ ಮಾರ್ಪಟ್ಟು ತಮ್ಮ ನಿಜರೂಪ ಪ್ರದರ್ಶಿಸಿದ್ದಾರೆ. ಸಮುದಾಯಗಳ ಸ್ವಾಸ್ಥ್ಯ ಕೆಡಿಸುವ ಇಂಥ ಬೇಜವಾಬ್ದಾರಿ ವ್ಯಕ್ತಿಗಳಿಂದ ಅವರು ಪ್ರತಿನಿಧಿಸುವ ಪಕ್ಷಗಳೂ ದುರ್ಬಲವಾಗುತ್ತವೆ. ಮುಂಬರುವ ದಿನಗಳಲ್ಲಿ ಬಣಜಿಗರು ಯತ್ನಾಳ ಮತ್ತು ಕಾಶಪ್ಪನವರ ಹೇಳಿಕೆಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಬಾಗಲಕೋಟೆ: ಇಂಚಗೇರಿಯಿಂದಲೇ ಗೋವಾ ವಿಮೋಚನೆ, ಸಿಎಂ ಪ್ರಮೋದ ಸಾವಂತ್‌

ಚಂದ್ರಶೇಖರ ಗೊಂಬಿ, ಬಸವರಾಜ ತೆಗ್ಗಿ, ವಿದ್ಯಾಧರ ಗುಳ್ಳ, ಸಮಾಜದ ತಾಲೂಕು ಅಧ್ಯಕ್ಷ ಈಶ್ವರಣ್ಣಾ ಬಿದರಿ, ರಬಕವಿ ಘಟಕದ ಅಧ್ಯಕ್ಷ ಗಿರೀಶ ಮುತ್ತೂರ ಮಾತನಾಡಿ, ಬಣಜಿಗರು ಶುದ್ಧ ಶರಣ ಸಂಸ್ಕೃತಿಯ ಪಾಲಕರು. ಎಲ್ಲ ಸಮಾಜದ ವ್ಯಕ್ತಿಗಳೊಡನೆ ಉತ್ತಮ ವ್ಯವಹಾರಿಕ ಸಂಬಂಧ ಇರಿಸಿಕೊಂಡು ಬದುಕುವ ಜನರಾಗಿದ್ದು, ತಮ್ಮ ವೈಯಕ್ತಿಕ ತೆವಲಿಗೆ ಬಾಯಿಗೆ ಬಂದಂತೆ ಹರಟಿದ ಯತ್ನಾಳ ಮತ್ತು ಕಾಶಪ್ಪನವರ ಬಗ್ಗೆ ಅವರದೇ ಸಮುದಾಯದ ಜನತೆ ತಿರಸ್ಕರಿಸಿದ್ದಾರೆ. ಎರಡು ಪ್ರಮುಖ ಸಮುದಾಯಗಳ ನಡುವೆ ವೃಥಾ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಉಭಯ ನಾಯಕರಿಗೆ ಬರುವ ಚುನಾವಣೆಯಲ್ಲಿ ಬಣಜಿಗರು ತಕ್ಕ ಪಾಠ ಕಲಿಸಲಿದ್ದಾರೆ. ಉದ್ಧಟ ನಾಯಕರು ಪ್ರತಿನಿ​ಧಿಸುವ ಪಕ್ಷಗಳ ಮುಖಂಡರು ಅವರನ್ನು ಹದ್ದುಬಸ್ತಿನಲ್ಲಿ ಇಡಬೇಕು ಇಲ್ಲವಾದಲ್ಲಿ ಆಯಾ ಪಕ್ಷಗಳು ಪೆಟ್ಟು ತಿನ್ನಬೇಕಾಗುತ್ತದೆ ಎಂದರು.

ರಬಕವಿ ಮತ್ತು ಬನಹಟ್ಟಿನಗರಗಳಿಂದ ಪ್ರತ್ಯೇಕ ಪ್ರತಿಭಟನಾ ಮೆರವಣಿಗೆಗಳು ಪ್ರಮುಖ ಬೀದಿಯಲ್ಲಿ ಘೋಷಣೆ ಕೂಗುತ್ತ ತಹಸೀಲ್ದಾರ ಕಚೇರಿ ತಲುಪಿದವು. ತೇರದಾಳ, ಮಹಾಲಿಂಗಪುರ, ಜಮಖಂಡಿ, ಕುಲಹಳ್ಳಿ, ಜಗದಾಳ, ನಾವಲಗಿ ಸೇರಿ ಸುತ್ತಲಿನ ಗ್ರಾಮಗಳ ಬಣಜಿಗ ಬಾಂಧವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಶ್ರೀನಿ​ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಲ್ಲಿಕಾರ್ಜುನ ನಾಶಿ, ಮಲ್ಲಿಕಾರ್ಜುನ ಹುಲಗಬಾಳಿ, ಅಪ್ಪು ಮಂಗಸೂಳಿ, ಚಂದ್ರಶೇಖರ ಹುಲಗಬಾಳಿ, ಪ್ರಭಾಕರ ಢಪಳಾಪುರ, ಮಹಾದೇವಪ್ಪ ಮುತ್ತೂರ, ಉದಯ ಜಿಗಜಿನ್ನಿ, ಗಜಾನನ ತೆಗ್ಗಿ, ಶಿವಪ್ಪ ಬಾಗಲಕೋಟ, ಜಯವಂತ ಗುಳ್ಳ, ಮುರುಗೇಶ ಮುತ್ತೂರ, ಬಸವರಾಜ ಕುಂಚನೂರ, ಬಸವರಾಜ ತೊರ್ಲಿ, ಶಂಕರ ಮುತ್ತೂರ, ಮಹಾಶಾಂತ ಶೆಟ್ಟಿ, ಮಹಿಳಾ ಘಟಕದ ಸದಸ್ಯೆಯರು ಸೇರಿ ಸಮಾಜದ ಪ್ರಮುಖರು ನೇತೃತ್ವ ವಹಿಸಿದ್ದರು. ಮನವಿ ಸ್ವೀಕರಿಸಿದ ತಹಸೀಲ್ದಾರ ಸಂಜಯ ಇಂಗಳೆ ಜಿಲ್ಲಾದಿಕಾರಿ ಮೂಲಕ ಸರ್ಕಾರಕ್ಕೆ ಮನವಿ ತಲುಪಿಸುವ ಭರವಸೆ ನೀಡಿದರು.
 

click me!