ಇದು ಕೇವಲ ಟ್ರೇಲರ್, ಪಿಚ್ಚರ್‌ ಅಭಿ ಬಾಕಿ ಹೈ: ಸರ್ಕಾರಕ್ಕೆ ಖಡಕ್‌ ಎಚ್ಚರಿಕೆ ಕೊಟ್ಟ ಶ್ರೀಮಂತ ಪಾಟೀಲ

By Kannadaprabha NewsFirst Published Oct 17, 2023, 8:40 PM IST
Highlights

ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಇಲ್ಲದೇ ರೈತರು ಶೋಚನೀಯ ಸ್ಥಿತಿ ಎದುರಿಸುತ್ತಿದ್ದಾರೆ. ಆದರೂ ಸರ್ಕಾರ ಕಣ್ಣು ತೆರೆಯುತ್ತಿಲ್ಲ. ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ, ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಆಗಿದೆ ಎಂದು ಕಿಡಿಕಾರಿದ ಮಾಜಿ ಸಚಿವ ಶ್ರೀಮಂತ ಪಾಟೀಲ 

ಕಾಗವಾಡ(ಅ.17):  ಬಿಜೆಪಿಯಿಂದ ಹಮ್ಮಿಕೊಂಡಿರುವುದು ಸಾಂಕೇತಿಕ ಹೋರಾಟ. ಹೀಗಾಗಿ ಇದು ಕೇವಲ ಟ್ರೇಲರ್. ಪಿಚ್ಚರ್ ಅಭೀ ಬಾಕಿ ಹೈ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಗುಡುಗಿದರು.

ಕಾಗವಾಡ ಪಟ್ಟಣದ ಚಿಕ್ಕೋಡಿ-ಸಾಂಗ್ಲಿ ರಾಜ್ಯ ಹೆದ್ದಾರಿಯ ಬಳಿ ಬಿಜೆಪಿಯಿಂದ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ಸತತ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡಬೇಕು. ಇಲ್ಲವಾದರೆ ರಾಜ್ಯ ಹೆದ್ದಾರಿ ಬಂದ್ ಮಾಡಿ ತೀವ್ರ ಹೋರಾಟ ಮಾಡಬೇಕಾಗುತ್ತದೆ. ಈ ಹೋರಾಟ ಕೇವಲ ಸಾಂಕೇತಿಕ, ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅಥಣಿಯಿಂದ ಕಾಗವಾಡದವರೆಗೆ ರಸ್ತೆ ತಡೆ ನಡೆಸಬೇಕಾಗುತ್ತದೆ ಎಂದು ಹಸಿರು ಟವೆಲ್ ಹಾರಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಹುಚ್ಚುನಾಯಿಗೆ ಕಲ್ಲು ಹೊಡೆದು ಸಾಯಿಸಿದಂತೆ ಕಾಂಗ್ರೆಸ್ ಸರ್ಕಾರ ಓಡಿಸಲಿದ್ದಾರೆ ಜನ: ಕಾರಜೋಳ

ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಇಲ್ಲದೇ ರೈತರು ಶೋಚನೀಯ ಸ್ಥಿತಿ ಎದುರಿಸುತ್ತಿದ್ದಾರೆ. ಆದರೂ ಸರ್ಕಾರ ಕಣ್ಣು ತೆರೆಯುತ್ತಿಲ್ಲ. ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ, ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಆಗಿದೆ ಎಂದು ಕಿಡಿಕಾರಿದರು.

ದಿನದ 7 ಗಂಟೆ ನಿರಂತರ ತ್ರಿಫೇಸ್ ವಿದ್ಯುತ್ ವಿತರಿಸಬೇಕು. ರಾತ್ರಿ ಸಿರೀಜ್‌ 10 ಗಂಟೆ ವಿದ್ಯುತ್ ನೀಡಬೇಕು. ರಾಜ್ಯ ಸರ್ಕಾರ ಕೇವಲ ಬರಗಾಲ ಘೋಷಣೆ ಮಾಡಿದರೆ ಸಾಲದು. ಜನ ಜಾನುವಾರುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡಿ ದುಡಿಯುವ ಕೈಗಳಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನೀಡಬೇಕು. ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡಬೇಕು. ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಸಾವಿರಾರು ರೈತರು ಕೂಡಿಕೊಂಡು ನೂರಾರು ಸಮೂಹ ಏತ ನೀರಾವರಿ ಯೋಜನೆಗಳನ್ನು ಮಾಡಿಕೊಂಡಿದ್ದಾರೆ. ಅವರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗದೇ ಇರುವುದರಿಂದ ಅನೇಕ ನೀರಾವರಿ ಯೋಜನೆಗಳು ಬಂದ್ ಬಿದ್ದಿವೆ. ಇದರಿಂದ ರೈತರಿಗೆ ಸಾವಿರಾರು ಕೋಟ್ಯಂತರ ರುಪಾಯಿ ಹಾನಿಯಾಗಿದೆ. ಅದಕ್ಕಾಗಿ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ 2 ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ರಾಜೇಶ ಬುರ್ಲಿಯವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ರೈತ ಮುಖಂಡರಾದ ಶ್ರೀನಿವಾಸ ಪಾಟೀಲ, ರಾಜೇಂದ್ರ ಪೋತದಾರ, ದಾದಾ ಪಾಟೀಲ, ದೀಪಕ ಪಾಟೀಲ, ಬಾಹುಸಾಬೇಬ್‌ ಜಾಧವ, ಆರ್.ಎಂ.ಪಾಟೀಲ, ಈಶ್ವರ ಕುಂಬಾರೆ, ಕುಮಾರ ಅಪರಾಜ, ಅಣ್ಣಾಸಾಬ್‌ ಡೂಗನವರ, ನಿಂಗಪ್ಪ ಖೋಕಲೆ, ಅಪ್ಪಾಸಾಬ್‌ ಮಳಮಳಸಿ, ಅರುಣ ಗಣೇಶವಾಡಿ, ಸುರೇಶ ಪಾಟೀಲ, ಶಿವಾನಂದ ಪಾಟೀಲ, ರಾಮಗೌಡ ಪಾಟೀಲ, ಅಣ್ಣಪ್ಪ ಸಾವಳಿ, ಚಿದಾನಂದ ಅಥಣಿ, ಅಶೋಕ ನಾಂದಣಿ, ಭೂತಾಳಿ ಥರಥರೆ, ಸಂಬಾಜಿ ಪವಾರ ಸೇರಿದಂತೆ ನೂರಾರು ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅಸಮರ್ಪಕ ವಿದ್ಯುತ್ ಪೂರೈಕೆ ವಿರುದ್ಧ ಕಾಗವಾಡ ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ ಹಸಿರು ಟವೆಲ್ ಹಾರಿಸಿದರು.

ಅಧಿಕಾರ ಕೊಟ್ಟಲ್ಲಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ತಿಂಗಳಲ್ಲಿ ಅನುಷ್ಠಾನ

ಕಾಗವಾಡ: ನನಗೆ ಅಧಿಕಾರ ನೀಡಿದರೆ ಬಸವೇಶ್ವರ ಏತ ನೀರಾವರಿ ಯೋಜನೆ ಒಂದು ತಿಂಗಳಲ್ಲಿ ನಾನು ಪೂರ್ಣಗೊಳಿಸಿ ರೈತರಿಗೆ ನೀರಿ ಒದಗಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುವೆ. ನನ್ನ ಹೆಸರೂ ಬದಲಾಯಿಸಿಕೊಳ್ಳುವೆ. ಈ ನನ್ನ ಸವಾಲು ಸರ್ಕಾರ ಸ್ವೀಕರಿಸಲಿ ಮಾಜಿ ಸಚಿವ ಶ್ರೀಮಂತ ಪಾಟೀಲ ಸರ್ಕಾರಕ್ಕೆ ಸವಾಲು ಹಾಕಿದರು.

ಜನರು ನನ್ನನ್ನು ಮನೆಮಗಳಂತೆ ಪ್ರೀತಿಯಿಂದ ಕಾಣುತ್ತಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನನಗೆ ಒಂದು ತಿಂಗಳ ಮಟ್ಟಿಗೆ ಅಧಿಕಾರ ಕೊಟ್ಟಲ್ಲಿ ಈ ಭಾಗದ ಮಹತ್ವಾಕಾಂಕ್ಷಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮೋಟಾರು ಅಳವಡಿಸಿ ಗುಂಡಿ ಒತ್ತುವುದಷ್ಟೇ ಬಾಕಿ ಇದೆ. ಆದರೆ, ಅಧಿಕಾರಕ್ಕೆ ಬಂದು ನಾಲೈದು ತಿಂಗಳಾದರೂ ಕಾಂಗ್ರೆಸ್ ಸರ್ಕಾರ ಕಣ್ತೇರೆದು ನೋಡುತ್ತಿಲ್ಲ ಎಂದು ಆರೋಪಿಸಿದರು. ನಾನು ಸಚಿವನಾಗಿದ್ದ ವೇಳೆ ಆಗಿನ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿ ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ಚುರುಕುಗೊಳಿಸಿ ಶೇ.80 ರಷ್ಟು ಪೂರ್ಣಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ ಎಂದರು. ಕಾಮಗಾರಿ ಮುಗಿಸಲು ಕಾಂಗ್ರೆಸ್ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಎಲ್ಲ ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ ಬಿದ್ದು, ರಾಜ್ಯದಲ್ಲಿ ಅರಾಜಕತೆ ಉಂಟಾಗಿದೆ. ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

click me!