ಬೆಂಗಳೂರು : ಹಳೇ ದ್ವೇಷದಿಂದ ಬಿಜೆಪಿ ಮುಖಂಡಗೆ ಚಾಕು ಇರಿತ

By Kannadaprabha NewsFirst Published Oct 5, 2019, 8:33 AM IST
Highlights

ಹಳೇ ದ್ವೇಷದ ಹಿನ್ನೆಲೆಯಲ್ಲ ಬಿಜೆಪಿ ಮುಖಂಡರೋರ್ವರಿಗೆ ಮುಸುಕು ಹಾಕಿದವರು ಚಾಕು ಇರಿದು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು [ಅ.05]:  ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸಿ.ವಿ.ರಾಮನ್‌ ನಗರದ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರೊಬ್ಬರಿಗೆ ಕಿಡಿಗೇಡಿಗಳು ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ನಡೆದಿದೆ.

ಹಲಸೂರು ಲಕ್ಷ್ಮೇಪುರದ ಲೋಕೇಶ್‌ ಎಂಬುವವರೇ ಹಲ್ಲೆಗೊಳಗಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯಲ್ಲಿ ಅವರ ಸೋದರ ಹರೀಶ್‌ ಮೇಲೂ ಸಹ ಹಲ್ಲೆ ನಡೆದಿದೆ. ಕೃತ್ಯ ಎಸಗಿ ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಇಂದಿರಾನಗರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಲಸ ನಿಮಿತ್ತ ಹೊರ ಹೋಗಿದ್ದ ಲೋಕೇಶ್‌ ಮತ್ತು ಹರೀಶ್‌, ಗುರುವಾರ ರಾತ್ರಿ 10.30ರಲ್ಲಿ ಮನೆಗೆ ಮರಳಿದ್ದರು. ಮನೆ ಮುಂದೆ ಕಾರು ನಿಲ್ಲಿಸುತ್ತಿದ್ದಂತೆ ಅವರ ಮೇಲೆ ಬೈಕ್‌ನಲ್ಲಿ ಬಂದ ಮುಸುಕುಧಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. 

ತಕ್ಷಣವೇ ಸೋದರನ ರಕ್ಷಣೆಗೆ ಹರೀಶ್‌ ಮುಂದಾಗಿದ್ದಾರೆ. ಆಗ ಲೋಕೇಶ್‌ ಅವರ ಬೆನ್ನಿಗೆ ಚಾಕುವಿನಿಂದ ಇರಿದು ಆರೋಪಿಗಳು ಪರಾರಿಯಾಗಿದ್ದಾರೆ. ಕೂಡಲೇ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕುಟುಂಬ ಸದಸ್ಯರು ಹಾಗೂ ಸ್ಥಳೀಯರು ದಾಖಲಿಸಿದ್ದಾರೆ. ಗಾಯಾಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

click me!