
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಲವ್-ಸೆ*ಕ್ಸ್-ದೋಖಾ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಮತ್ತು ಅವರ ಪುತ್ರ ಕೃಷ್ಣ ಜೆ. ರಾವ್ ಇಬ್ಬರೂ ಬಂಧನಕ್ಕೊಳಗಾಗಿದ್ದಾರೆ. ಇಂದು ಬೆಳಿಗ್ಗೆ ಮೈಸೂರಿನಲ್ಲಿ, ಆರೋಪಿ ಕೃಷ್ಣ ಜೆ. ರಾವ್ ಅನ್ನು ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಗನ ಬಂಧನದ ಬೆನ್ನಲ್ಲೇ, ಆರೋಪಿಯನ್ನು ತಪ್ಪಿಸಲು ಸಹಾಯ ಮಾಡಿದ ತಂದೆ ಜಗನ್ನಿವಾಸ್ ರಾವ್ ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಮತ್ತು ಅವರ ಮಗ ಕೃಷ್ಣ ಜೆ. ರಾವ್ ಇಬ್ಬರೂ ಬಂಧಿತರಾಗಿದ್ದು, ಈ ಪ್ರಕರಣದಲ್ಲಿ ಮುಂದಿನ ತನಿಖೆ ತೀವ್ರಗೊಂಡಿದೆ.
ಯುವತಿಯನ್ನು ಪ್ರೀತಿಸುವಂತೆ ನಾಟಕ ಮಾಡಿ ದೈಹಿಕ ಸಂಬಂಧ ಬೆಳೆಸಿ ಮಗು ಜನನಕ್ಕೆ ಕಾರಣನಾದ ಪ್ರಕರಣದಲ್ಲಿ ಜು.5ರ ಬೆಳಗ್ಗೆ ಪೊಲೀಸರು ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಮೈಸೂರಿನ ಟಿ. ನರಸಿಪುರ ಪ್ರದೇಶದಲ್ಲಿ ಕೃಷ್ಣನನ್ನು ವಶಕ್ಕೆ ಪಡೆದು ಪುತ್ತೂರಿಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ.
ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದ ಕೃಷ್ಣ ಜೆ. ರಾವ್ ವಿರುದ್ಧ ಹೈಸ್ಕೂಲ್ ದಿನಗಳಲ್ಲೇ ಪ್ರಾರಂಭವಾದ ಪ್ರೇಮ ಸಂಬಂಧದ ಬಳಿಕ ಸಂತ್ರಸ್ತೆ ಮೇಲೆ ದೈಹಿಕ ಶೋಷಣೆಯ ಆರೋಪ ಕೇಳಿಬಂದಿದೆ. ಇಂಜಿನಿಯರಿಂಗ್ ಓದುತ್ತಿದ್ದ ಕೃಷ್ಣ, 2024ರ ಅಕ್ಟೋಬರ್ 11ರಂದು ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮದುವೆಯಾಗುತ್ತೇನೆ ಎಂದು ನಂಬಿಸಿ ಸಂತ್ರಸ್ತೆಯೊಂದಿಗೆ ದೈಹಿಕ ಸಂಬಂಧ ಹೊಂದಿದ ಎಂಬ ಆರೋಪ ಇದೆ. ಮತ್ತೆ 2025ರ ಜನವರಿಯಲ್ಲಿ ಕೃಷ್ಣನಿಂದ ದೈಹಿಕ ಸಂಪರ್ಕ ನಡೆದಿದ್ದು, ಆ ಬಳಿಕ ಯುವತಿ ಗರ್ಭವತಿಯಾದ ಮಾಹಿತಿ ಹೊರಬಂದಿದೆ. ಆದರೆ, ಮದುವೆಯಾಗಲು ಕೃಷ್ಣ ನಿರಾಕರಿಸಿದ್ದಾನೆ ಎನ್ನಲಾಗಿದೆ.
ಆರಂಭದಲ್ಲಿ ಮದುವೆಗೆ ಒಪ್ಪಿದ ಕೃಷ್ಣ, ಬಳಿಕ ಹಿಂತಿರುಗಿದ್ದು ಮತ್ತು ಮಗುವಿನ ಪಿತೃತ್ವ ಒಪ್ಪಿಕೊಳ್ಳಲು ಮುಂದಾಗಿಲ್ಲ ಎಂದು ಆರೋಪಿಸಲಾಗಿದೆ. ಈ ಕುರಿತು ಯುವತಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ. ಈ ಪ್ರಕರಣದ ಹಿಂದೆ ರಾಜಿ ಪಂಚಾಯಿತಿ ಕೂಡ ನಡೆದಿದ್ದು, ಅಲ್ಲಿ ಕೃಷ್ಣ ಮದುವೆಗೆ ಒಪ್ಪಿಕೊಂಡಿದ್ದಾನೆ. ಆದರೆ, ಆಗ ಕೃಷ್ಣನಿಗೆ 21 ವರ್ಷ ಪೂರ್ಣವಾಗಿಲ್ಲದ ಕಾರಣ ಮದುವೆಗೆ ಕಾನೂನು ಅಡಚಣೆ ಉಂಟಾಗಿತ್ತು. ಜೂನ್ 23ರಂದು ಕೃಷ್ಣನಿಗೆ 21 ವರ್ಷ ತುಂಬಿದ ಬಳಿಕವೂ ಮದುವೆಗೆ ಹಿಂದೇಟು ಹೊಡೆಯಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಯುವತಿಯ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದು, ಹಲವು ತಿಂಗಳುಗಳಿಂದ ಅಡಗಿಕೊಂಡಿದ್ದ ಕೃಷ್ಣ ಜೆ. ರಾವ್ನನ್ನು ಬಂಧಿಸಿದ್ದಾರೆ.