ಕೊರೋನಾ ಕಾಟ: ಗದಗದ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೂ ನಷ್ಟ..!

By Kannadaprabha NewsFirst Published Jun 13, 2020, 9:08 AM IST
Highlights

ರಾಜ್ಯದ ಏಕೈಕ ಸಣ್ಣ ಮೃಗಾಲಯ ಎಂಬ ಹೆಗ್ಗಳಿಕೆ ಹೊಂದಿರುವ ಬಿಂಕದಕಟ್ಟಿ ಕಿರು ಮೃಗಾಲಯದಲ್ಲಿ ಸದ್ಯ 37ಕ್ಕೂ ಹೆಚ್ಚು ಪ್ರಭೇದದ 400ಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳಿವೆ| ಮೃಗಾಲಯದಲ್ಲಿ ಪಕ್ಷಿಗಳ ವೀಕ್ಷಣೆಗಾಗಿ ವಿಶೇಷ ಪಂಜರ, ಹಕ್ಕಿ ಕಾಪು ನಿರ್ಮಾಣ| 150 ಅಡಿ ಉದ್ದ, 40 ಅಡಿ ಅಗಲ ಮತ್ತು 50 ಅಡಿ ಎತ್ತರದಲ್ಲಿ ಬೃಹತ್‌ ಪಕ್ಷಿ ಪಂಜರ ನಿರ್ಮಾಣ|

ಗದಗ(ಜೂ.13): ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆದ ಪರಿಣಾಮ ಉತ್ತರ ಕರ್ನಾಟಕ ಭಾಗದಲ್ಲಿ ಏಕೈಕ ಕಿರು ಮೃಗಾಲಯವಾದ ಗದಗ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯವೂ ತೀವ್ರ ನಷ್ಟಕ್ಕೆ ಈಡಾಗಿದೆ.
ಲಾಕ್‌ಡೌನ್‌ ಹಿನ್ನೆಲೆಯಲ್ಲಿ 84 ದಿನಗಳ ಕಾಲ (ಮಾ. 15ರಿಂದ ಜೂ. 7) ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಬಿಂಕದಕಟ್ಟಿ ಕಿರು ಮೃಗಾಲಯವನ್ನು ಮುಚ್ಚಿದ್ದರಿಂದ ಅಂದಾಜು 10 ಲಕ್ಷ ಆದಾಯ ನಷ್ಟವಾಗಿದ್ದು ಮತ್ತಷ್ಟು ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಿದೆ.

ಸರಾಸರಿ 350 ಜನ ಭೇಟಿ:

ಕಿರು ಮೃಗಾಲಯಕ್ಕೆ ಪ್ರತಿದಿನ ಸರಾಸರಿ 300ರಿಂದ 350 ಪ್ರವಾಸಿಗರು ಭೇಟಿ ನೀಡುತ್ತಿದ್ದರು. ವಾರಾಂತ್ಯದ ದಿನಗಳಲ್ಲಿ ಈ ಸಂಖ್ಯೆ 400ರಿಂದ 500ರ ವರೆಗೂ ಏರುತ್ತಿತ್ತು. ಪ್ರತಿ ತಿಂಗಳು, ಪ್ರವಾಸಿಗರ ಪ್ರವೇಶ ಶುಲ್ಕದ ಮೂಲಕವೇ ಮೃಗಾಲಯಕ್ಕೆ ಸರಾಸರಿ 3 ಲಕ್ಷದಷ್ಟುಆದಾಯ ಬರುತ್ತಿತ್ತು. ಆದರೆ, ಕಳೆದ ಮೂರು ತಿಂಗಳಿಂದ ಈ ವರಮಾನ ನಿಂತು ಹೋಗಿದೆ.

ಬೃಹತ್‌ ಪಕ್ಷಿ ಪಂಜರ ಹೊಂದಿದ ಮೃಗಾಲಯ

ರಾಜ್ಯದ ಏಕೈಕ ಸಣ್ಣ ಮೃಗಾಲಯ ಎಂಬ ಹೆಗ್ಗಳಿಕೆ ಹೊಂದಿರುವ ಬಿಂಕದಕಟ್ಟಿ ಕಿರು ಮೃಗಾಲಯದಲ್ಲಿ ಸದ್ಯ 37ಕ್ಕೂ ಹೆಚ್ಚು ಪ್ರಭೇದದ 400ಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳಿವೆ. ಮೃಗಾಲಯದಲ್ಲಿ ಪಕ್ಷಿಗಳ ವೀಕ್ಷಣೆಗಾಗಿ ವಿಶೇಷ ಪಂಜರ, ಹಕ್ಕಿ ಕಾಪು ನಿರ್ಮಿಸಲಾಗಿದೆ. 150 ಅಡಿ ಉದ್ದ, 40 ಅಡಿ ಅಗಲ ಮತ್ತು 50 ಅಡಿ ಎತ್ತರದಲ್ಲಿ ಬೃಹತ್‌ ಪಕ್ಷಿ ಪಂಜರ ನಿರ್ಮಿಸಿದ್ದು, ಈ ಪಂಜರದ ನಡುವಿನಿಂದ ಪಾದಚಾರಿ ಸೇತುವೆ ನಿರ್ಮಿಸಲಾಗಿದೆ. ಸಾರ್ವಜನಿಕರು ಈ ‘ಹಕ್ಕಿ ಹಾದಿ’ ಮೂಲಕ ಹೆಜ್ಜೆ ಹಾಕುತ್ತಾ ಅತ್ಯಂತ ಸಮೀಪದಿಂದ ಪಕ್ಷಿಗಳನ್ನು ನೋಡಬಹುದಾಗಿದೆ. ರಾಜ್ಯದಲ್ಲಿ 9 ಮೃಗಾಲಯಗಳಿದ್ದರೂ, ಇಂಥ ಸೌಲಭ್ಯವಿರುವುದು ಬಿಂಕದಕಟ್ಟಿಮೃಗಾಲಯದಲ್ಲಿ ಮಾತ್ರ.

'ಯಡಿಯೂರಪ್ಪ ಸರ್ಕಾರ ಹಣವಂತರಿಗೆ ಮಣೆ ಹಾಕುವ ಕೆಲಸ ಮಾಡುತ್ತಿದೆ'

ಮೈಸೂರಿನ ಮೃಗಾಲಯದಿಂದ ದತ್ತು

ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯವು 125 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಬಿಂಕದಕಟ್ಟಿ ಕಿರು ಮೃಗಾಲಯವನ್ನು ದತ್ತು ಪಡೆದು, ಅಲ್ಲಿ ಸಂಗ್ರಹವಾಗುವ ಹೆಚ್ಚುವರಿ ವರಮಾನವನ್ನು ಈ ಕಿರು ಮೃಗಾಲಯದ ಅಭಿವೃದ್ಧಿ ಕಾರ್ಯಗಳಿಗೆ ನೀಡುತ್ತಿರುವುದು ದೊಡ್ಡ ಆಶಾಭಾವನೆ ಮೂಡಿಸಿದ್ದು, ಮುಂಬರುವ ದಿನಗಳಲ್ಲಿ ಬಿಂಕದಕಟ್ಟಿಮೃಗಾಲಯ ಇನ್ನು ಹೆಚ್ಚಿನ ಅಭಿವೃದ್ಧಿ ಕಾಣಲಿದೆ ಎನ್ನುವ ವಿಶ್ವಾಸವನ್ನು ಅರಣ್ಯ ಇಲಾಖೆ ವ್ಯಕ್ತ ಪಡಿಸುತ್ತಿದೆ.

ಪುನರಾರಂಭದ ನಂತರ ಪ್ರವಾಸಿಗರ ಸ್ಪಂದನೆ ಉತ್ತಮವಾಗಿದೆ. ಆದರೆ, ಇನ್ನು ಹೆಚ್ಚಿನ ಪ್ರವಾಸಿಗರು ಮೊದಲಿನಂತೆ ಭೇಟಿ ನೀಡಬೇಕಾದಲ್ಲಿ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದು ಬಿಂಕದಕಟ್ಟಿ ಮೃಗಾಲಯದ ಆರ್‌ಎಫ್‌ಒ ಮಹಾಂತೇಶ ಪೆಟ್ಲೂರ ಅವರು ಹೇಳಿದ್ದಾರೆ. 
 

click me!