BIG 3: ಟೆರೇಸ್‌ ಮೇಲೆ ವಿದ್ಯಾರ್ಥಿಗಳಿಗೆ ಪಾಠ: ಸ್ವಂತ ಕಟ್ಟಡವಿಲ್ಲದೆ ಮಕ್ಕಳ ಪರದಾಟ

By Manjunath NayakFirst Published Sep 20, 2022, 1:33 PM IST
Highlights

Big 3 Raichur College Story: ಕಾಲೇಜಿಗೆ ಸ್ವಂತ ಕಟ್ಟಡ ಇಲ್ಲದೆ ಇರುವುದರಿಂದ ಪ್ರೌಢ ಶಾಲೆಯಲ್ಲಿ ನಿತ್ಯ ತರಗತಿಗಳು ನಡೆಸಲಾಗುತ್ತಿದೆ

ರಾಯಚೂರು (ಸೆ. 20): ಅದು ಪೊಲೀಸ್ ವಸತಿ ಗೃಹಗಳ ಬಳಿ ಇರುವ ಸರ್ಕಾರಿ ಪಿಯು ಕಾಲೇಜು (Government PU College). ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಅನುಕೂಲವಾಗಲಿ ಎಂದು ಶಾಲೆ ನಿರ್ಮಾಣ ಮಾಡಲಾಗಿತ್ತು. ಈಗ ಶಾಲೆ ಜೊತೆಗೆ ಪಿಯು ಕಾಲೇಜು ಆಗಿದೆ. ಆದರೆ ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದೆ ಈಗ ಮಕ್ಕಳು ಪರದಾಟ ನಡೆಸಿದ್ದಾರೆ.  ಕಿತ್ತೊಗಿರುವ ಕರೆಂಟ್ ವೈರ್ಗಳು, ಮುರಿದು ಡೋಂಕಾಗಿ ಅಲೆದಾಡುತ್ತಿರುವ ಫ್ಯಾನ್‌ಗಳು, ಹೆಸರಿಗೆ ಮಾತ್ರ ಬಾಗಿಲಿನಂತೆ ಕಾಣುತ್ತಿರುವ ಕಾಲೇಜಿನ ಬಾಗಿಲುಗಳು..! ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ರಾಯಚೂರು (Raichur) ನಗರದ ಪೊಲೀಸ್ ಕಾಲೋನಿಯಲ್ಲಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ.

ಕಾಲೇಜಿಗೆ ಸ್ವಂತ ಕಟ್ಟಡ ಇಲ್ಲ: ರಾಯಚೂರು ನಗರದ ಎಸ್ಪಿ ಕಚೇರಿ ಮುಂದೆ ಇರುವ ಪೊಲೀಸ್ ಕಾಲೋನಿಯಲ್ಲಿ ಬಡ ಮಕ್ಕಳಿಗೆ ಅನುಕೂಲವಾಗಲಿ ಎಂದು ಸರ್ಕಾರ ಪ್ರೌಢಶಾಲೆಯಲ್ಲಿ 2001-02ನೇ ಸಾಲಿನಲ್ಲಿ ಪಿಯು ಕಾಲೇಜು ಆರಂಭಿಸಿದೆ. ಕಾಲೇಜಿನಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ತರಗತಿಗಳು ನಡೆಯುತ್ತಿವೆ. 

ಕಾಲೇಜಿಗೆ ಸ್ವಂತ ಕಟ್ಟಡ ಇಲ್ಲದೆ ಇರುವುದರಿಂದ ಪ್ರೌಢ ಶಾಲೆಯಲ್ಲಿ ನಿತ್ಯ ತರಗತಿಗಳು ನಡೆಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಮೂರು ವಿಭಾಗಗಳಿಗೆ ಮಕ್ಕಳು ದಾಖಲಾಗುವ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಮಕ್ಕಳಿಗೆ ಅನುಗುಣವಾಗಿ ಕೋಣೆಗಳ ನಿರ್ಮಾಣ ಮಾಡಲು ಆಗುತ್ತಿಲ್ಲ. 

ಹಳೆ ಕಟ್ಟಡವಿದ್ದು ಮಳೆಯಿಂದಾಗಿ ನೆನೆದು ಸೊರುತ್ತಿದೆ. ಮೂಲಭೂತ ಸೌಲಭ್ಯಗಳು ಇಲ್ಲದೆ ವಿದ್ಯಾರ್ಥಿಗಳು ಪರದಾಟ ನಡೆಸಿದ್ದಾರೆ. ಶಾಲಾ-ಕಾಲೇಜಿನ ಆವರಣದಲ್ಲಿ ಯಾವುದೇ ಹೊಸ ಕಟ್ಟಡ ನಿರ್ಮಾಣ ಮಾಡಬೇಕಾದರೇ ಪೊಲೀಸ್ ಇಲಾಖೆಯ ಅನುಮತಿ ಪಡೆಯಬೇಕಾಗಿದೆ. 

ಏಕೆಂದರೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಶಾಲೆ-ಕಾಲೇಜು ಆರಂಭಿಸಲಾಗಿದೆ. ಹೀಗಾಗಿ ಪೊಲೀಸ್ ಇಲಾಖೆಯವರು ಹೊಸ ಕಟ್ಟಡಕ್ಕೆ ಜಾಗ ನೀಡುತ್ತಿಲ್ಲವೆಂಬ ಆರೋಪವಿದೆ. ಇದರಿಂದಾಗಿ ಪಿಯು ವಿದ್ಯಾರ್ಥಿಗಳು ನಿತ್ಯವೂ ಪರದಾಟ ನಡೆಸಿದ್ದಾರೆ.

ಕಾಲೇಜಿನ ಟೆರೇಸ್ ಮೇಲೆ ಚಾಪೆ ಹಾಕಿ ಪಾಠ: ಇನ್ನೂ ನಿತ್ಯ ಬೆಳಗ್ಗೆ 7-30ಗಂಟೆಗೆ ಪಿಯು ಕಾಲೇಜಿನ ತರಗತಿಗಳು ಆರಂಭವಾಗುತ್ತವೆ. ಕಾಲೇಜಿಗೆ ಅಂತ ನಾಲ್ಕು ಕೋಣೆಗಳು ಮಾತ್ರ ನೀಡಿದ್ದಾರೆ. ಆ ನಾಲ್ಕು ಕೋಣೆಯಲ್ಲಿ ತರಗತಿ ನಡೆಸುತ್ತಾರೆ. ಇನ್ನುಳಿದ 2 ತರಗತಿಗಳು ಹೈಸ್ಕೂಲ್ ಕೋಣೆಯಲ್ಲಿ ನಡೆಸುತ್ತಾರೆ. ಬೆಳಗ್ಗೆ 10ಗಂಟೆಗೆ ಹೈಸ್ಕೂಲ್ ವಿದ್ಯಾರ್ಥಿಗಳು ಬಂದಾಗ 2 ಕೋಣೆಗಳ ವಿದ್ಯಾರ್ಥಿಗಳಿಗೆ ಬಯಲಿನಲ್ಲಿ ಇಲ್ಲವೇ, ಕಾಲೇಜಿನ ಟೆರೇಸ್ ಮೇಲೆ ಚಾಪೆ ಹಾಕಿ ಕೂರಿಸಿ ಪಾಠ ಮಾಡುವ ಪರಿಸ್ಥಿತಿಯಿದೆ.

BIG 3: ರಾಣೆಬೆನ್ನೂರಿನ ಅನಾಥ ಅಂಗನವಾಡಿ: ಬಡವರ ಮಕ್ಕಳು ಮಾಡಿದ ಪಾಪವೇನು?

ಇತ್ತ 20 ವರ್ಷಗಳ ಹಿಂದಿನಿಂದ ಪೊಲೀಸ್ ಕಾಲೋನಿಯಲ್ಲಿ ಪಿಯು ಕಾಲೇಜಿನ ಕ್ಲಾಸ್‌ಗಳು ನಡೆಯುತ್ತಿವೆ.  ಕಾಲೇಜಿಗೆ ಅಂತ ಹೊಸ ಕಟ್ಟಡ ಮಂಜೂರು ಮಾಡುವಂತೆ ಕಾಲೇಜಿನ ಪ್ರಾಂಶುಪಾಲರು ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಯವರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನೆ ಆಗಿಲ್ಲ ಅಂತರೇ ಕಾಲೇಜಿನ ಪ್ರಾಂಶುಪಾಲರು

ಒಟ್ಟಿನಲ್ಲಿ ಪೊಲೀಸ್ ಇಲಾಖೆಯ ಮಕ್ಕಳಿಗೆ ಹಾಗೂ ಬಡ ಮಕ್ಕಳಿಗೆ ಅನುಕೂಲವಾಗಲಿ ಎಂದು ನಿರ್ಮಾಣಗೊಂಡ ಶಾಲೆ ಮತ್ತು ಪಿಯು ಕಾಲೇಜಿನ ಕಟ್ಟಡವೂ ಹಳೆದಾಗಿದ್ದು, ಕಟ್ಟಡದ ದುರಸ್ತಿ ಜೊತೆಗೆ ಪಿಯು ಕಾಲೇಜು ನಿರ್ಮಾಣಕ್ಕೆ ಪ್ರತ್ಯೇಕ ಜಾಗ ತೋರಿಸುವ ಅಗತ್ಯವಿದೆ. 

click me!