BIG 3 Hero: ಮಂಗಳೂರಿನ ಯುವತೇಜಸ್ಸು ಯುವಕರ ತಂಡದ ಕಾಲು ಸಂಕ ಮುಕ್ತ ಅಭಿಯಾನ

By Manjunath NayakFirst Published Sep 17, 2022, 2:58 PM IST
Highlights

Yuva Tejassu Yuvakara Tanda: ಸಮಾಜಸೇವೆಗಾಗಿಯೇ ಹುಟ್ಟಿಕೊಂಡ ಯುವ ತೇಜಸ್ಸು ಯುವಕರ ತಂಡ ದಕ್ಷಿಣ ಕನ್ನಡ ಜಿಲ್ಲೆಯನ್ನ ಮರದ ಕಾಲು ಸಂಕ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಛಲದಿಂದ ಫೀಲ್ಡಿಗಿಳಿದಿದೆ. 

ಮಂಗಳೂರು (ಸೆ. 17):  ಅವರದ್ದು ಸಣ್ಣಪುಟ್ಟ ಕೆಲಸ ಮಾಡಿಕೊಂಡು, ಚಿಕ್ಕಪುಟ್ಟ ವ್ಯವಹಾರದಲ್ಲಿ ತೊಡಗಿಕೊಂಡಿರೋ ಯುವಕರ ತಂಡ. ಆದರೆ ತನಗೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಅಂತ ಕಳೆದ ಐದಾರು ವರ್ಷಗಳಿಂದ ಆ ತಂಡ ಸಮಾಜ ಸೇವೆಯಲ್ಲಿ ಧನ್ಯತೆ ಕಾಣ್ತಿದೆ. ಆದರೆ ಈ ಬಾರಿ ಅವರ ಸಮಾಜ ಸೇವೆಯ ಕನಸು ದೊಡ್ಡ ಸ್ವರೂಪ ಪಡೆದಿದ್ದು, ಛಲ ಬಿಡದೇ ಮಾಡಿ ತೋರಿಸುತ್ತಿದ್ದಾರೆ. ಆಗಸ್ಟ್ 8ರಂದು ಉಡುಪಿ ಜಿಲ್ಲೆಯ ಕುಂದಾಪುರ (Kundapura) ತಾಲೂಕಿನ ಬೀಜಕ್ಕಿ ಎಂಬಲ್ಲಿ ಏಳು ವರ್ಷ ಪುಟಾಣಿ ಸನ್ನಿಧಿ ಕಾಲುಸಂಕ ದಾಟುವ ವೇಳೆ ಹಳ್ಳಕ್ಕೆ ಬಿದ್ದು ನೀರುಪಾಲಾಗ್ತಾಳೆ. ಈ ವಿಚಾರ ದಕ್ಷಿಣ ಕನ್ನಡ ಮತ್ತು ಉಡುಪಿ (Udupi) ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಕನ್ನಡಿ ಹಿಡಿದಂತಿತ್ತು. 

ಇದೊಂದೇ ಅಲ್ಲ ಉಭಯ  ಜಿಲ್ಲೆಗಳಲ್ಲಿ ಇಂಥ ನೂರಾರು ಮರದ ಅಪಾಯಕಾರಿ ಕಾಲು ಸಂಕಗಳಿದ್ದು, ಮಳೆಗೆ ಹಳ್ಳಗಳು ಉಕ್ಕಿದಾಗ ಪ್ರಯಾಣ ಅಕ್ಷರಶಃ ಸಾವಿಗೆ ಅಹ್ವಾನ ನೀಡಿದಂತೆ. ಅವತ್ತು ಕುಂದಾಪುರದ ಪುಟ್ಟ ಬಾಲಕಿಯ ಮರಣದ ಸುದ್ದಿ ತಿಳಿದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದ ಯುವಕರ ತಂಡವೊಂದು ಹೊಸತೊಂದು ಪಣ ತೊಟ್ಟಿತ್ತು. 

ಕಾಲು ಸಂಕ ಮುಕ್ತ ಜಿಲ್ಲೆ ಗುರಿ: 2015ರಲ್ಲಿ ಸಮಾಜಸೇವೆಗಾಗಿಯೇ ಹುಟ್ಟಿಕೊಂಡ ಯುವ ತೇಜಸ್ಸು (Yuva Tejassu) ಎಂಬ ಯುವಕರ ತಂಡ ದಕ್ಷಿಣ ಕನ್ನಡ ಜಿಲ್ಲೆಯನ್ನ ಮರದ ಕಾಲು ಸಂಕ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಛಲದಿಂದ ಫೀಲ್ಡಿಗಿಳಿದಿತ್ತು. ಇದರ ಫಲವಾಗಿ ಕೇವಲ 15 ದಿನಗಳಲ್ಲೇ ಮರದ ಕಾಲು ಸಂಕ ಮುಕ್ತ ಅಭಿಯಾನದ ಭಾಗವಾಗಿ ಬೆಳ್ತಂಗಡಿಯಲ್ಲಿ ಸುಸಜ್ಜಿತ ಕಬ್ಬಿಣದ ಕಾಲು ಸಂಕ ನಿರ್ಮಾಣವಾಗಿದೆ. ಯುವ ತೇಜಸ್ಸು ಬಳಗ ಸರ್ಕಾರ ಮಾಡದ ಕೆಲಸವನ್ನ ಮಾಡಿ ತೋರಿಸುವ ಕಾರ್ಯಕ್ಕೆ ಕೈ ಹಾಕಿದ್ದು, ಪ್ರತೀ ತಿಂಗಳು ಜಿಲ್ಲೆಯಲ್ಲಿ ಕಬ್ಬಿಣದ ಕಾಲು ಸಂಕ ನಿರ್ಮಿಸುವ ಪಣ ತೊಟ್ಟಿದೆ. 

Big 3 Hero: ಅಕ್ಷಯ್‌ ಕೋಟ್ಯಾನ್:‌ ಎಲೆ ಮೇಲೆ ನೂರಾರು ಕಲಾಕೃತಿ ರಚಿಸುವ ಕಲಾವಿದ

ಸದ್ಯ ಅಭಿಯಾನದ ಮೊದಲ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಮತ್ತು ಮಲವಂತಿಗೆ ಗ್ರಾಮವನ್ನ ಸಂಪರ್ಕಿಸುವ ಏಳೂವರೆ ಹಳ್ಳ ಎಂಬ ಜಾಗದ ನದಿಗೆ ಸುಸಜ್ಜಿತ ಕಬ್ಬಿಣ ಕಾಲು ಸಂಕ ನಿರ್ಮಿಸಿದೆ. ಈವರೆಗೆ ಇದ್ದ ಅಪಾಯಕಾರಿ ಮರದ ಕಾಲು ಸಂಕವನ್ನ ಕಿತ್ತಸೆದು ಅಪಾಯಕಾರಿಯಾಗಿ ಹರಿಯೋ ಹಳ್ಳಕ್ಕೆ ಸುಸಜ್ಜಿತ ಕಾಲು ಸಂಕವನ್ನು ಯುವ ತೇಜಸ್ಸು ಬಳಗದ ಯುವಕರು ಕಟ್ಟಿಕೊಟ್ಟಿದ್ದಾರೆ. ಸುಮಾರು 35 ಮನೆಗಳಿಗೆ ಸಾಗಲು ಈ ಕಾಲು ಸಂಕವೇ ಆಧಾರವಾಗಿದ್ದು, ಸುಮಾರು ಎರಡೂವರೆ ಲಕ್ಷ ವೆಚ್ಚದಲ್ಲಿ ಕಬ್ಬಿಣದ ಕಾಲು ಸಂಕ ನಿರ್ಮಾಣವಾಗಿದೆ. 

ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ: ಮರದ ಕಾಲುಸಂಕ ಮುಕ್ತ ಅನ್ನೋ ಹೆಸರಿನಲ್ಲಿ ಯುವ ತೇಜಸ್ಸು ಬಳಗ ನಡೆಸ್ತಿರೋ ಅಭಿಯಾನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ಸಿಗ್ತಿದೆ. ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.  ಈಗಾಗಲೇ ಒಟ್ಟು 20  ಮರದ ಕಾಲು ಸಂಕಗಳ ಮಾಹಿತಿ ಬಂದಿದ್ದು, ಅದರಲ್ಲಿ ಸ್ಥಳ ಪರಿಶೀಲನೆ ನಡೆಸಿದ ತಂಡ 15 ಅಪಾಯ ಕಾರಿ ಸಂಕಗಳನ್ನು ಅಂತಿಮಗೊಳಿಸಿದೆ. ಆದಷ್ಟು ಬೇಗ ಈ ಸಮಸ್ಯೆಗಳನ್ನ ಬಗೆ ಹರಿಸೋದಾಗಿ ಯುವ ತೇಜಸ್ಸು ತಂಡ ಟೊಂಕ ಕಟ್ಟಿ ನಿಂತಿದೆ.

BIG 3 Hero: ಉಡುಪಿಯ ಶಂಕರ ಪೂಜಾರಿ, ಗದಗದ ಡಾ. ವೀರಮ್ಮ ಹಾಗೂ ರಾಯಚೂರಿನ ಅಮರೇಗೌಡ

ಒಟ್ಟಾರೆ ಸರ್ಕಾರ, ಶಾಸಕರು, ಸಂಸದರು ಮಾಡಬೇಕಾದ ಕೆಲಸವನ್ನು ಯುವಕರ ತಂಡ ಮಾಡಿದೆ. ಮತ್ತಷ್ಟು ಮರದ ಸೇತುವೆಗಳ ಪಟ್ಟಿ ಹಿಡಿದ ತಂಡ ಮತ್ತೊಂದು ಊರಿನಲ್ಲಿ ಗ್ರಾಮಗಳನ್ನ ಬೆಸೆಯುವತ್ತ ಹೆಜ್ಜೆ ಹಾಕಿದೆ. ತಿಂಗಳ ಸಂಬಳದ ಇಂತಿಷ್ಟು ಹಣ ಯಾವುದೋ ಗ್ರಾಮದ ಜನರ ನೆಮ್ಮದಿಯ ಬದುಕಿಗೆ ಸೇತುವೆ ಕಟ್ಟುವ ಕಾರ್ಯಕ್ಕೆ ವಿನಿಯೋಗಿಸ್ತಿದ್ದಾರೆ. ಹೀಗಾಗಿ ಇವರೇ ನಮ್ಮ ಇವತ್ತಿನ ಬಿಗ್3 ಹೀರೋ.  

click me!