‘ಒಂದು ಎಕರೆ ಜಮೀನಿಗೆ 40 ಲಕ್ಷ ರು. ಪರಿಹಾರ’

By Kannadaprabha NewsFirst Published Feb 28, 2020, 9:45 AM IST
Highlights

ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಕರೆಗೆ 40 ಲಕ್ಷ ರು. ಪರಿಹಾರ ನೀಡುವ ಬಗ್ಗೆ ಭರವಸೆ ನೀಡಲಾಗಿದೆ. ಭೂ ಸ್ವಾಧೀನಾ ಪ್ರಕ್ರಿಯೆ ಸಂಬಂಧ ಈ ಪರಿಹಾರದ ಭರವಸೆ ನೀಡಲಾಗಿದೆ. 

ತರೀಕೆರೆ [ಫೆ.28]:  ಭೂಸ್ವಾಧೀನಕ್ಕೆ ಸರ್ಕಾರ ನಿಗದಿಗೊಳಿಸಿರುವ ಪರಿಹಾರಕ್ಕಿಂತ ಹೆಚ್ಚಿನ ಪ್ರಮಾಣವನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಪಡಲಾಗುವುದು ಎಂದು ಶಾಸಕ ಡಿ.ಎಸ್‌. ಸುರೇಶ್‌ ಹೇಳಿದರು.

ಬುಧವಾರ ಅಜ್ಜಂಪುರ ಸಮೀಪದ ಗೌರಾಪುರದಲ್ಲಿ ನಡೆದ ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಶಾಖಾ ಕಾಲುವೆ ಕಾಮಗಾರಿಗೆ ಭೂಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಏಕರೂಪದಲ್ಲಿ ಪರಿಹಾರ ನಿಗದಿಪಡಿಸುವ ಸಂಬಂದ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಎಕರೆಗೆ .40 ಲಕ್ಷ ಪರಿಹಾರ ನೀಡುವಂತೆ ಇಂದಿನ ಸಭೆಯಲ್ಲಿ ಕೈಗೊಂಡಿರುವ ನಿರ್ಣಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಹೆಬ್ಬೂರು ನಾಗೇಂದ್ರಪ್ಪ ಮಾತನಾಡಿ, ಇಲ್ಲಿನ ಭೂಮಿ ಉತ್ಕೃಷ್ಟವಾಗಿದೆ. ಉತ್ತಮ ಫಸಲು ಬರುತ್ತಿತ್ತು, ಜೀವನಕ್ಕೆ ಆಧಾರವಾಗಿತ್ತು. ನೀರಾವರಿ ಯೋಜನೆಗಾಗಿ ಅದನ್ನು ಕಳೆದುಕೊಳ್ಳುವಂತಾಗಿದೆ. ಭೂಮಿಗೆ ಅಧಿಕ ಪರಿಹಾರ ನಿಗದಿಗೊಳಿಸಬೇಕು ಎಂದು ಹೇಳಿದರು.

ಕಾಫಿನಾಡಲ್ಲಿ 11 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ..

ಸೊಲ್ಲಾಪುರದ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾದ ದೇವರಾಜು ಮಾತನಾಡಿ, ಸ್ವಾಧೀನಕ್ಕೆ ಒಳಪಡುತ್ತಿರುವ ಭೂಮಿ ಪರಿಹಾರದ ಮೊತ್ತವಾಗಿ ಕನಿಷ್ಠ .40 ಲಕ್ಷ ನೀಡಿ ಎಂದು ಮನವಿ ಮಾಡಿದರು.

ಹಿರಿಯ ಉಪವಿಭಾಗಾಧಿಕಾರಿ ಬಿ.ಆರ್‌. ರೂಪ ಮಾತನಾಡಿ, ಭೂಮಿಯ ಮೇಲ್ಮೈಲಕ್ಷಣ, ಬೆಳೆ, ರೈತರ ಪರಿಸ್ಥಿತಿ, ಬೆಲೆಗೆ ಅನುಗುಣವಾಗಿ ಪರಿಹಾರದ ಮೊತ್ತ ನಿಗದಿಗೊಳ್ಳಲಿದೆ. ಇಲ್ಲಿನ ಭೂಸ್ವಾಧೀನಕ್ಕೆ ಏಕರೂಪದ ಬೆಲೆ ನಿಗದಿಗೆ ಸಭೆ ಕರೆಯಲಾಗಿದೆ. ಎಲ್ಲರಿಂದಲೂ ಒಪ್ಪಿಗೆ ವ್ಯಕ್ತವಾದರೆ ಸರಿ. ಇಲ್ಲವಾದರೆ, ಕಾಯ್ದೆಗೆ ಅನುಗುಣವಾಗಿ ಪರಿಹಾರ ನೀಡಲಾಗುವುದು. ಒಂದೆರೆಡು ದಿನಗಳಲ್ಲಿ ಭೂಸ್ವಾಧೀನ ಅಧಿಕಾರಿಗಳು ಭೇಟಿ ನೀಡುವರು. ಅವರಿಗೆ ನಿಖರ ಮಾಹಿತಿ ನೀಡುವಂತೆ ಮನವಿ ಮಾಡಿದರು.

ಅಜ್ಜಂಪುರ ತಹಸೀಲ್ದಾರ್‌ ವಿಶ್ವೇಶ್ವರ ರೆಡ್ಡಿ, ಕಂದಾಯ ಅಧಿಕಾರಿ ಕೃಷ್ಣಮೂರ್ತಿ, ಭದ್ರಾ ಮೇಲ್ದಂಡೆ ಎಇಇ ಸುರೇಶ್‌ ಮತ್ತಿತರರಿದ್ದರು.

ಸಭೆಯಲ್ಲಿ ಭೂಸ್ವಾಧೀನಗೊಳ್ಳುತ್ತಿರುವ ಹೆಬ್ಬೂರು, ಸೊಲ್ಲಾಪುರ, ಕಾಟಿಗನರೆ, ಸೌತನಹಳ್ಳಿ, ಚಿಣ್ಣಾಪುರ, ಗೌರಾಪುರ, ಕಾರೇಹಳ್ಳಿ ಜಮೀನಿನ ಮಾಲೀಕರು, ಅಜ್ಜಂಪುರ ತಹಸೀಲ್ದಾರ್‌ ವಿಶ್ವೇಶ್ವರ ರೆಡ್ಡಿ, ಕಂದಾಯ ಅಧಿಕಾರಿ ಕೃಷ್ಣಮೂರ್ತಿ, ಭದ್ರಾ ಮೇಲ್ದಂಡೆ ಎಇಇ ಸುರೇಶ್‌ ಮತ್ತಿತರರು ಭಾಗವಹಿಸಿದ್ದರು.

click me!