
ಬೆಂಗಳೂರು (ಜು.28): ಬೆಂಗಳೂರನ್ನು ಸ್ವಚ್ಛ, ಸುಂದರ ಹಾಗೂ ವಾಸಯೋಗ್ಯ ನಗರವನ್ನಾಗಿ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA - Greater Bengaluru Authority) ಬಿಗಿ ಕ್ರಮಕ್ಕೆ ಮುಂದಾಗಿದೆ. ನಗರದಲ್ಲಿರುವ ಖಾಲಿ ನಿವೇಶನಗಳ (Vacant Plots) ಮಾಲೀಕರು ತಮ್ಮ ಜಾಗದಲ್ಲಿ ಬೆಳೆದಿರುವ ಗಿಡಗಂಟಿ, ಶೇಖರಣೆಯಾಗಿರುವ ಕಸ ಹಾಗೂ ಡೆಬ್ರಿಸ್ ಅನ್ನು ಆಗಸ್ಟ್ 15ರೊಳಗಾಗಿ ಸ್ವತಃ ಸ್ವಚ್ಛಗೊಳಿಸಬೇಕು. ತಪ್ಪಿದ್ದಲ್ಲಿ ₹25,000 ದಿಂದ ಗರಿಷ್ಠ ₹1 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ (Maheshwar Rao) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಕಪ್ಪುಚುಕ್ಕೆಗಳು (Blackspots), ಕಟ್ಟಡ ಭಗ್ನಾವಶೇಷಗಳು, ಮರದ ಕೊಂಬೆಗಳು ಹಾಗೂ ರಸ್ತೆ ಬದಿಯಲ್ಲಿ ಬಿದ್ದಿರುವ ವಿದ್ಯುತ್ ಕಂಬಗಳು ಮತ್ತು ಪೈಪುಗಳನ್ನು ತೆರವುಗೊಳಿಸಲು "ತ್ಯಾಜ್ಯದಿಂದ ಸ್ವಾತಂತ್ರ್ಯ" (Freedom from Waste) ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು-2020ರ (Solid Waste Management Bye-laws 2020) ನಿಯಮ 18(1)(ಬಿ) ರನ್ವಯ ಖಾಲಿ ಸೈಟ್ಗಳನ್ನು ನೈರ್ಮಲ್ಯಯುತವಾಗಿಡುವುದು ಮಾಲೀಕರ ಕಡ್ಡಾಯ ಜವಾಬ್ದಾರಿಯಾಗಿದೆ.
ಒಂದು ವೇಳೆ ಆಗಸ್ಟ್ 15ರೊಳಗಾಗಿ ಮಾಲೀಕರು ಸೈಟ್ ಸ್ವಚ್ಛಗೊಳಿಸದಿದ್ದರೆ, ಪಾಲಿಕೆಯೇ ತ್ಯಾಜ್ಯವನ್ನು ತೆರವುಗೊಳಿಸಲಿದೆ. ಅದಕ್ಕೆ ತಗುಲುವ ವೆಚ್ಚವನ್ನು ನಿವೇಶನದ ವಿಸ್ತೀರ್ಣಕ್ಕೆ ಅನುಗುಣವಾಗಿ ಲೆಕ್ಕ ಹಾಕಿ, ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024ರ ಅಡಿ ಆಸ್ತಿ ತೆರಿಗೆಯೊಂದಿಗೆ (Property Tax) ಸೇರಿಸಿ ವಸೂಲಿ ಮಾಡಲಾಗುತ್ತದೆ. ಇದನ್ನು ಪಾವತಿಸದಿದ್ದರೆ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಪ್ರಕಾರ ಆಸ್ತಿ ಮುಟ್ಟುಗೋಲು ಕ್ರಮ ಜರುಗಿಸಲಾಗುತ್ತದೆ.
ಸೈಟ್ ಮಾಲೀಕರು ತಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿದ ನಂತರ ಇತರರು ಮತ್ತೆ ಅಲ್ಲಿ ಅನಧಿಕೃತವಾಗಿ ಕಸ ಹಾಕದಂತೆ ತಡೆಯಲು, ಸೈಟ್ ಸುತ್ತಲೂ ಬೇಲಿ ಅಥವಾ ಕಾಂಪೌಂಡ್ ಗೋಡೆ (Compound Wall) ನಿರ್ಮಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಜಿಬಿಎ ಸ್ಪಷ್ಟಪಡಿಸಿದೆ.