ಬೆಂಗಳೂರು ಕಂಠೀರವ ಸ್ಟುಡಿಯೋ ಬಳಿ ಅಂಡರ್ ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಸಾವು!

Published : Aug 11, 2026, 02:39 PM IST
Bengaluru Underpass Collapse

ಸಾರಾಂಶ

ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ಬಿಡಿಎ ನಡೆಸುತ್ತಿದ್ದ ಅಂಡರ್ ಪಾಸ್ ಕಾಮಗಾರಿ ವೇಳೆ ಮಣ್ಣಿನ ತಡೆಗೋಡೆ ಕುಸಿದು ಇಬ್ಬರು ಹೊರರಾಜ್ಯದ ಕಾರ್ಮಿಕರು ಮೃತಪಟ್ಟಿದ್ದಾರೆ. ಭಾರಿ ಮಳೆಯಿಂದಾಗಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಬೆಂಗಳೂರು: ರಾಜಧಾನಿಯ ಕಂಠೀರವ ಸ್ಟುಡಿಯೋ ಬಳಿಯ ಡಾ. ರಾಜ್‌ಕುಮಾರ್ ಪುಣ್ಯಭೂಮಿ ರಸ್ತೆಯಲ್ಲಿ ಬಿಡಿಎ (BDA) ನಡೆಸುತ್ತಿದ್ದ ಅಂಡರ್ ಪಾಸ್ ಕಾಮಗಾರಿ ಸ್ಥಳದಲ್ಲಿ ಆಗಸ್ಟ್ 11ರ ಬೆಳಿಗ್ಗೆ ಭೀಕರ ದುರಂತ ಸಂಭವಿಸಿದೆ. ಸುಮಾರು 20 ಅಡಿ ಆಳದ ಗುಂಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಮಣ್ಣಿನ ತಡೆಗೋಡೆ (ಮಡ್ ವಾಲ್) ಕುಸಿದುಬಿದ್ದ ಪರಿಣಾಮ, ಮಣ್ಣಿನಡಿ ಸಿಲುಕಿ ಇಬ್ಬರು ಹೊರರಾಜ್ಯದ ಕಾರ್ಮಿಕರು ದುರಂತ ಅಂತ್ಯ ಕಂಡಿದ್ದಾರೆ.

ಘಟನೆಯ ವಿವರ:

ಬೆಳಿಗ್ಗೆ 11:19 ರ ಸುಮಾರಿಗೆ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಾಮಗಾರಿ ಸ್ಥಳದಲ್ಲಿ ಸುಮಾರು 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನೀರು ಹೊರ ಎತ್ತುವ ಕಾರ್ಯದಲ್ಲಿ ತೊಡಗಿದ್ದಾಗ, ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಮೇಲ್ಭಾಗದಲ್ಲಿ ಶೇಖರಣೆಯಾಗಿದ್ದ ಡೆಬ್ರಿಸ್ (ಕಟ್ಟಡ ತ್ಯಾಜ್ಯ) ಭಾರಕ್ಕೆ ಏಕಾಏಕಿ ಮಣ್ಣು ರಭಸವಾಗಿ ಕುಸಿದುಬಿದ್ದಿದೆ. ಸ್ವಲ್ಪ ಸಮಯದ ಮುಂಚೆಯಷ್ಟೇ ಕೆಲವು ಕಾರ್ಮಿಕರು ತಿಂಡಿ ತಿನ್ನಲು ಹೊರಗೆ ಬಂದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಆದಾಗ್ಯೂ, ತಳಭಾಗದಲ್ಲಿದ್ದ ಐವರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿಕೊಂಡರು.

ಇಬ್ಬರು ಮೃತ, ಹಲವರಿಗೆ ಗಾಯ

ದುರಂತದಲ್ಲಿ ಒಡಿಶಾ ಮೂಲದ ಸೋನಾರಾಮ್ (26) ಹಾಗೂ ಜಾರ್ಖಂಡ್ ಮೂಲದ ಪರಿಮಳ್ (31) ಎಂಬುವವರು ಮಣ್ಣಿನಡಿಯಲ್ಲಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಗಾಯಗೊಂಡ ಸದಾನಂದ್, ಸುನೀಲ್ ಹಾಗೂ ಇರ್ಮಿಯಾಜ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ಮತ್ತು ಗಾಯಾಳುಗಳು ಒಡಿಶಾ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ಮೂಲದವರೆಂದು ತಿಳಿದುಬಂದಿದೆ.

ಸವಾಲಾದ ರಕ್ಷಣಾ ಕಾರ್ಯಾಚರಣೆ:

ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸೋನಾರಾಮ್ ಅವರ ಮೃತದೇಹವನ್ನು ತಕ್ಷಣವೇ ಹೊರತೆಗೆಯಲಾಯಿತು. ಆದರೆ ಪರಿಮಳ್ ಅವರ ಮೃತದೇಹವನ್ನು ಹೊರತೆಗೆಯುವಾಗ ಮತ್ತೆ ಮಣ್ಣು ಕುಸಿದು ಬಿದ್ದಿದ್ದರಿಂದ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಯಿತು. ಅಗ್ನಿಶಾಮಕ ಸಿಬ್ಬಂದಿ ಸತತ ಪರಿಶ್ರಮವಹಿಸಿ ಅಂತಿಮವಾಗಿ ಮೃತದೇಹವನ್ನು ಹೊರತೆಗೆದಿದ್ದಾರೆ.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಪ್ರತಿಕ್ರಿಯೆ:

ಬಿಡಿಎ ಆಯುಕ್ತ ಕ್ಯಾಪ್ಟನ್ ಮನಿವಣ್ಣನ್ ಮಾತನಾಡಿ, ಘಟನೆಯ ಕುರಿತು ತಕ್ಷಣವೇ ತನಿಖೆಗೆ ಆದೇಶಿಸಲಾಗಿದೆ. ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಸೂಚಿಸಲಾಗಿದ್ದು, ಗುತ್ತಿಗೆದಾರರು 24 ಗಂಟೆಯೊಳಗೆ ಮೃತರ ಕುಟುಂಬಕ್ಕೆ ಪರಿಹಾರ ಹಣವನ್ನು ನೀಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಕೆ. ಗೋಪಾಲಯ್ಯ, ನಿನ್ನೆಯ ಮಳೆಯಿಂದಾಗಿ ಡೆಬ್ರಿಸ್ ತುಂಬಿಕೊಂಡಿದ್ದೇ ಮಣ್ಣು ಕುಸಿಯಲು ಕಾರಣ. ಈ ಅಜಾಗರೂಕತೆಗೆ ಅಧಿಕಾರಿಗಳೇ ನೇರ ಹೊಣೆ ಹೊರಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮೇಗೌಡ ಸ್ಥಳ ಪರಿಶೀಲನೆ ನಡೆಸಿದ್ದು, ಬಿಡಿಎ ಕಾಮಗಾರಿಯ ಸುರಕ್ಷತಾ ನಿಯಮಗಳ ಲೋಪದೋಷಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

PREV
Read more Articles on
click me!

Recommended Stories

ದೇಶದಾದ್ಯಂತ Passport Seva ಸರ್ವರ್ ಡೌನ್: ಮಂಗಳೂರಿನಲ್ಲಿ ಜನರ ಪರದಾಟ, ಎಸಿ ರೂಮಲ್ಲಿ ಅಧಿಕಾರಿಗಳು, ಬೀದಿಯಲ್ಲಿ ಅರ್ಜಿದಾರರು!
ಬಿಡದಿ ಪಾದಯಾತ್ರೆ ಮಾಡಿದ ನಿಖಿಲ್ ಕುಮಾರಸ್ವಾಮಿ ರಾತ್ರಿ ಎಲ್ಲಿ ಮಲಗಿದ್ರು?- ಸಚಿವ ಬಾಲಕೃಷ್ಣ ಪ್ರಶ್ನೆ!