ಬೆಂಗಳೂರು ತ್ರಿವಳಿ ಕೊಲೆಗಾತಿ ಪಾಂಡಿಚೇರಿಯಲ್ಲಿ ಬಂಧನ, ತಾಯಿ ನನ್ನ ನೆಮ್ಮದಿ ಕೆಡಿಸಿದ್ದಳು ಅದಕ್ಕೆ ಕೊಂದೆ ಎಂದ ಹಂತಕಿ!

Published : Jun 24, 2026, 01:12 PM IST
Bengaluru family murder Case

ಸಾರಾಂಶ

ಬೆಂಗಳೂರಿನ ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶ್ವೇತಾಳನ್ನು ಪಾಂಡಿಚೇರಿಯಲ್ಲಿ ಬಂಧಿಸಲಾಗಿದೆ. ತಾಯಿಯ ಹತ್ಯೆಯನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದರೂ, ಆಕೆಯ ತಂದೆಯ ಮರಣಪೂರ್ವ ಹೇಳಿಕೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಪ್ರಿಯಕರ ಕೆನತ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೆ.ಆರ್. ಪುರಂನಲ್ಲಿ ಇತ್ತೀಚೆಗೆ ನಡೆದಿದ್ದ ಭೀಕರ ತ್ರಿವಳಿ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಮಗಳು ಶ್ವೇತಾಳನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿದ್ದ ಈಕೆಯನ್ನು ಪಾಂಡಿಚೇರಿಯ ರೈಲ್ವೆ ನಿಲ್ದಾಣದಲ್ಲಿ ವೈಟ್‌ಫೀಲ್ಡ್ ವಿಭಾಗದ ವಿಶೇಷ ಪೊಲೀಸ್ ತಂಡ ವಶಕ್ಕೆ ಪಡೆದಿದ್ದು, ಇಂದು ಸಂಜೆ 4 ರಿಂದ 5 ಗಂಟೆಯ ವೇಳೆಗೆ ಬೆಂಗಳೂರಿಗೆ ಕರೆತರುವ ಸಾಧ್ಯತೆಯಿದೆ. ಸದ್ಯ ಈ ಭೀಕರ ಕೊಲೆಗೆ ಸಹಕರಿಸಿದ ಶ್ವೇತಾಳ ಪ್ರಿಯಕರ ಕೆನತ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ನನ್ನ ನೆಮ್ಮದಿ ಹಾಳು ಮಾಡಿದ್ದರು, ಅದಕ್ಕೆ ಕೊಂದೆ!

ಪೊಲೀಸ್ ಕಸ್ಟಡಿಯಲ್ಲಿರುವ ಶ್ವೇತಾ ತನ್ನ ಹೆತ್ತ ತಾಯಿಯನ್ನೇ ಕೊಂದ ರಹಸ್ಯವನ್ನು ಬಿಚ್ಚಿಟ್ಟಿದ್ದಾಳೆ. ತಾಯಿಯನ್ನು ತಾನೊಬ್ಬಳೇ ಕೊಲೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ.

ನನ್ನ ತಾಯಿ ನನ್ನ ಇಡೀ ಜೀವನವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ನನಗೆ ಯಾವುದೇ ಸ್ವಾತಂತ್ರ್ಯ ಕೊಟ್ಟಿರಲಿಲ್ಲ. ನಾನು ಏನು ಮಾಡಿದರೂ ತಪ್ಪು, ಎಲ್ಲಿಗೆ ಹೋದರೂ ತಪ್ಪು ಎನ್ನುತ್ತಿದ್ದರು. ಮನೆಯಲ್ಲಿ ಕುಳಿತರೂ, ನಿಂತರೂ, ಮಲಗಿದರೂ ತಪ್ಪು ಹುಡುಕುತ್ತಿದ್ದರು. ಅವರ ಈ ವರ್ತನೆಯಿಂದಾಗಿ ನಾನು ಎಲ್ಲರೂ ಇದ್ದೂ ಅನಾಥಳಂತೆ ಬದುಕಬೇಕಾಯಿತು. ನನ್ನ ಜೀವನದ ನೆಮ್ಮದಿಯನ್ನೇ ಅವರು ಹಾಳು ಮಾಡಿದ್ದರು. ನನ್ನ ಬದುಕನ್ನು ಹಾಳು ಮಾಡಿದ ಕಾರಣಕ್ಕೇ ನಾನು ಅವರನ್ನು ಕೊಂದೆ ಎಂದು ಆರೋಪಿ ಶ್ವೇತಾ ಆಕ್ರೋಶ ಹೊರಹಾಕಿದ್ದಾಳೆ.

ಹೆಡ್‌ಫೋನ್ ಹಾಕಿಕೊಂಡಿದ್ದ ಪ್ರಿಯಕರ; ಕೊಲೆಯ ನಂತರ ಸಿಕ್ಕಿತು ಸಾಕ್ಷ್ಯ!

ಕೊಲೆಯ ಸನ್ನಿವೇಶದ ಬಗ್ಗೆ ಮಾಹಿತಿ ನೀಡಿರುವ ಶ್ವೇತಾ, ತಾಯಿ ತನ್ನ ಫ್ಲಾಟ್‌ಗೆ ಬಂದಾಗ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ತಾನೊಬ್ಬಳೇ ತಾಯಿಯನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾಳೆ. ಕೊಲೆ ನಡೆಯುವ ಸಮಯದಲ್ಲಿ ಶ್ವೇತಾಳ ಪ್ರಿಯಕರ ಕೆನತ್ ರೂಮ್ ಒಳಗೆ ಬಾಗಿಲು ಹಾಕಿಕೊಂಡು ಹೆಡ್‌ಫೋನ್ ಧರಿಸಿ ಕುಳಿತಿದ್ದ ಎನ್ನಲಾಗಿದೆ. ಕೊಲೆ ನಡೆದ ನಂತರ ಆತ ಹೊರಗೆ ಬಂದಿದ್ದಾನೆ. ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು, ಶ್ವೇತಾಳಿಗೆ ಸಹಾಯ ಮಾಡಲು ಮುಂದಾಗಿದ್ದಾನೆ. ಮೃತದೇಹವನ್ನು ಎಳೆದುಕೊಂಡು ಹೋಗಿ ಶೌಚಾಲಯದ ಒಳಗೆ ಹಾಕಲು ಮತ್ತು ಮನೆಯಲ್ಲಿದ್ದ ರಕ್ತದ ಕಲೆಗಳನ್ನು ತೊಳೆದು ಕ್ಲೀನ್ ಮಾಡಲು ಕೆನತ್ ಸಹಕರಿಸಿದ್ದಾಗಿ ಶ್ವೇತಾ ತಿಳಿಸಿದ್ದಾಳೆ.

ಸಾಯುವ ಮುನ್ನ ಸತ್ಯ ಬಿಚ್ಚಿಟ್ಟ ತಂದೆ: ಡೈಯಿಂಗ್ ಡಿಕ್ಲರೇಷನ್ (Dying Declaration)

ಆರೋಪಿ ಶ್ವೇತಾ ಎಲ್ಲವನ್ನೂ ತಾನೇ ಮಾಡಿದ್ದು ಎಂದು ಹೇಳುತ್ತಿದ್ದರೂ, ಆಸ್ಪತ್ರೆಯ ಹಾಸಿಗೆಯ ಮೇಲೆ ತಂದೆ ಸೋಮಸುಂದರಂ ಅವರು ಸಾವನ್ನಪ್ಪುವ ಮುನ್ನ ಪೊಲೀಸರಿಗೆ ನೀಡಿದ ಕೊನೆಯ ಹೇಳಿಕೆ (Dying Declaration) ಈ ಪ್ರಕರಣಕ್ಕೆ ಭೀಕರ ತಿರುವು ನೀಡಿದೆ. ಘಟನೆಯನ್ನು ಕಣ್ಣಾರೆ ಕಂಡಿದ್ದ ತಂದೆಯ ಹೇಳಿಕೆ ಹೀಗಿದೆ.

ನನ್ನ ಪತ್ನಿ ಲಕ್ಷ್ಮಿ ಮಗಳ (ಶ್ವೇತಾ) ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿ ಹೋಗಿದ್ದಳು. ದೀರ್ಘಕಾಲದವರೆಗೆ ಆಕೆ ಫೋನ್ ಸ್ವೀಕರಿಸದಿದ್ದಾಗ ಗಾಬರಿಗೊಂಡು ನಾನು ಮತ್ತು ನನ್ನ ಕಿರಿಯ ಮಗಳು ಸುಪ್ರಿಯಾ ಫ್ಲಾಟ್‌ಗೆ ಹೋದೆವು. ಬಾಗಿಲು ತೆರೆದಾಗ ಮಗಳು ಶ್ವೇತಾ ಮತ್ತು ಕೆನತ್ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ಒರೆಸುತ್ತಿದ್ದರು. ಏನಾಯಿತು ಎಂದು ನಾವು ಆತಂಕದಿಂದ ಕೇಳಿದಾಗ, ಹಿಂದಿನಿಂದ ಬಂದ ಶ್ವೇತಾ ತನ್ನ ತಂಗಿ ಸುಪ್ರಿಯಾಳನ್ನು ಗಟ್ಟಿಯಾಗಿ ಹಿಡಿದುಕೊಂಡಳು. 'ಏನೂ ಆಗಿಲ್ಲ, ಸುಮ್ಮನೆ ಒಳಗೆ ಬನ್ನಿ' ಎಂದು ಕೂಗಾಡಿದಳು. ನಾನು ಮಗಳನ್ನು ಬಿಡಿಸಲು ಹೋದಾಗ ಕೆನತ್ ನನ್ನ ಮೇಲೆ ಚಾಕುವಿನಿಂದ ತೀವ್ರವಾಗಿ ದಾಳಿ ಮಾಡಿ ಇರಿದನು. ನಾನು ರಕ್ತಸಿಕ್ತನಾಗಿ ಹೇಗೋ ತಪ್ಪಿಸಿಕೊಂಡು ಕೆಳಗೆ ಓಡಿ ಬಂದೆ. ಕೆಳಗಿದ್ದವರು ನನ್ನನ್ನು ಆಸ್ಪತ್ರೆಗೆ ಸೇರಿಸಿದರು ಎಂದಿದ್ದಾರೆ.

ತಂದೆ ಸೋಮಸುಂದರಂ ಕೆಳಗೆ ಬಂದ ನಂತರ, ಆರೋಪಿಗಳು ಒಳಗೆ ಸಿಲುಕಿದ್ದ ಕಿರಿಯ ಮಗಳು ಸುಪ್ರಿಯಾಳಿಗೆ ಚಾಕುವಿನಿಂದ ಹತ್ತಾರು ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ. ಕೊಲೆಯ ನಂತರ ಇಬ್ಬರೂ ಅಪಾರ್ಟ್‌ಮೆಂಟ್‌ನ ಟೆರಸ್ (ಮಹಡಿ) ಮೇಲೆ ಹೋಗಿ, ಅಲ್ಲಿಂದ ಪಕ್ಕದ ಕಟ್ಟಡಕ್ಕೆ ಜಿಗಿದು ಸದ್ದಿಲ್ಲದೆ ಪರಾರಿಯಾಗಿದ್ದರು.

ಹಂತಕಿಯ ಮಾನಸಿಕ ಸ್ಥಿತಿ ಬಿಚ್ಚಿಟ್ಟ ಡೈರಿ ಪುಟಗಳು!

ಪೊಲೀಸರು ಕೊಲೆ ನಡೆದ ಮನೆಯನ್ನು ಶೋಧಿಸುವಾಗ ಆರೋಪಿ ಶ್ವೇತಾ ಬರೆದಿದ್ದ ರಹಸ್ಯ ಡೈರಿಯೊಂದು ಪತ್ತೆಯಾಗಿದೆ. ಹಲವು ದಿನಗಳಿಂದ ಆಕೆ ಡೈರಿ ಬರೆಯುವ ಅಭ್ಯಾಸ ಹೊಂದಿದ್ದು, ಅದರಲ್ಲಿ ಆಕೆ ಇಂಗ್ಲಿಷ್‌ನಲ್ಲಿ ಹೀಗೆ ಬರೆದುಕೊಂಡಿದ್ದಾಳೆ.

"I am sad" (ನಾನು ದುಃಖದಲ್ಲಿದ್ದೇನೆ)

"I'm lonely" (ನಾನು ಒಂಟಿಯಾಗಿದ್ದೇನೆ)

"Feeling loved" (ಪ್ರೀತಿಯಲ್ಲಿದ್ದೇನೆ)

"I'm depressed" (ನಾನು ಖಿನ್ನತೆಗೆ ಒಳಗಾಗಿದ್ದೇನೆ)

"I'm superior" (ನಾನೇ ಶ್ರೇಷ್ಠ)

ಈ ಮಾದರಿಯ ವಿಚಿತ್ರ ಮತ್ತು ಗೊಂದಲದ ಬರಹಗಳು ಪತ್ತೆಯಾಗಿದ್ದು, ಪೊಲೀಸರು ಡೈರಿ ಸೇರಿದಂತೆ ಮನೆಯಲ್ಲಿದ್ದ ಪ್ರಮುಖ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆನತ್ ಪತ್ತೆಗೆ 6 ವಿಶೇಷ ತಂಡಗಳ ಬಲೆ

ಕೊಲೆಯ ನಂತರ ಸ್ವಲ್ಪ ದೂರದವರೆಗೆ ಒಟ್ಟಿಗೆ ಹೋಗಿದ್ದ ಶ್ವೇತಾ ಮತ್ತು ಕೆನತ್, ಪೊಲೀಸರ ಕಣ್ಣು ತಪ್ಪಿಸಲು ನಂತರ ಬೇರೆ ಬೇರೆಯಾಗಿದ್ದರು. ಕಳೆದ ಎರಡು ದಿನಗಳಿಂದ ಒಂದು ಕಡೆ ನಿಲ್ಲದೆ ರಾಜ್ಯಾದ್ಯಂತ ಸಂಚಾರ ಮಾಡುತ್ತಿದ್ದ ಈ ಹಂತಕರ ಬೆನ್ನುಬಿದ್ದಿದ್ದ ವೈಟ್‌ಫೀಲ್ಡ್ ವಿಭಾಗದ ಆರು ವಿಶೇಷ ಪೊಲೀಸ್ ತಂಡಗಳು ಸದ್ಯ ಶ್ವೇತಾಳನ್ನು ಲಾಕ್ ಮಾಡಿವೆ. ಪ್ರಮುಖ ಆರೋಪಿ ಕೆನತ್ ಸಿಕ್ಕ ಬಳಿಕ ಈ ತ್ರಿವಳಿ ಕೊಲೆಯ ಸಂಪೂರ್ಣ ಸತ್ಯಾಸತ್ಯತೆ ಹೊರಬರಬೇಕಿದೆ.

PREV
Read more Articles on
click me!

Recommended Stories

GBA Elections ಆಯೋಗ ಸಿದ್ದತೆ: ಬೆಂಗಳೂರು ಮತದಾರರ ಪಟ್ಟಿ ಪರಿಷ್ಕರಣೆ ಆರಂಭ, ಯಾವಾಗ? ಎಲ್ಲಿ?
CSMT ಮುಂಬೈ-ಲಾತೂರ್-ಬೀದರ್ ಎಕ್ಸ್‌ಪ್ರೆಸ್‌ ರೈಲು ಪ್ರಯಾಣಿಕರಿಗೆ ಆರಾಮದಾಯಕ ಸುದ್ದಿ