ಪೊಲೀಸ್ ಇಲಾಖೆಯಲ್ಲಿನ ಒಂದು ದೊಡ್ಡ ಬದಲಾವಣೆಗೆ ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಅಣ್ಣಾಮಲೈ ಕಾರಣವಾಗಿದ್ದಾರೆ. ಪೊಲೀಸರ ಬಹುದೊಡ್ಡ ತಲೆನೋವಿಗೆ ಮದ್ದು ನೀಡಿದ್ದಾರೆ. ಹಾಗಾದರೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದು ಪೊಲೀಸರ ಒತ್ತಡ ಕಡಿಮೆ ಮಾಡುವ ಯಾವ ಕೆಲಸವನ್ನು ಅಣ್ಣಾಮಲೈ ಮಾಡಿದ್ದಾರೆ?
ಬೆಂಗಳೂರು[ಅ.31] ಬೆಂಗಳೂರು ದಕ್ಷಿಣ ಉಪವಿಭಾಗದಲ್ಲಿ ಕೆಲಸ ನಿರ್ವಹಿಸುವ ಎಲ್ಲ ಪಿಸಿ,ಎಚ್ ಸಿ ಮತ್ತು ಎಎಸ್ಐ ಗಳು ಇನ್ನು ಮುಂದೆ ವಾರದ ರಜೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಲಿದ್ದಾರೆ. ಒತ್ತಡದಿಂದ ಬಳಲುತ್ತಿದ್ದ ಪೊಲೀಸರ ನೆರವಿಗೆ ಅಣ್ಣಾಮಲೈ ಧಾವಿಸಿದ್ದು ಅಧಿಕೃತ ಆದೇಶವನ್ನೇ ನೀಡಿದ್ದಾರೆ.
ವಾರದ ರಜೆ ಕಡ್ಡಾಯವಾಗಿ ನೀಡವೇಕು, ವರ್ಷದಲ್ಲಿ 15 ದಿನದ ಸಾಂದರ್ಭಿಕ ರಜೆ ಬಳಸಿಕೊಳ್ಳಲು ಅವಕಾಶ ನೀಡಬೇಕು. ವರ್ಷದಲ್ಲಿ 15 ದಿನಗಳ ಗಳಿಕೆ ರಜೆಯನ್ನು ಕಡ್ಡಾಯವಾಗಿ ಮಂಜೂರು ಮಾಡಬೇಕು ಎಂದು ದಕ್ಷಿಣ ಉಪವಿಭಾಗದ ಸಹಾಯಕ ಆಯುಕ್ತರಿಗೆ, ಇನ್ಸ್ ಪೆಕ್ಟರ್ ಗಳಿಗೆ ಅಣ್ಣಾಮಲೈ ಆದೇಶ ನೀಡಿದ್ದಾರೆ.
ರಜೆ ನೀಡುತ್ತಿಲ್ಲ ಎಂದು ಪತ್ರ ಬರೆದಿಟ್ಟು ಪೊಲೀಸ್ ಪೇದೆ ಆತ್ಮಹತ್ಯೆಗೆ ಮುಂದಾಗಿದ್ದು ದೊಡ್ಡ ಸುದ್ದಿಯಾಗಿತ್ತು. ವಿವಿಧ ಸೌಲಭ್ಯಕ್ಕೆ ಆಗ್ರಹಿಸಿ ಪೊಲೀಸರು ದೊಡ್ಡ ಮಟ್ಟದ ಪ್ರತಿಭಟನೆಗೆ ಮುಂದಾಗಿದ್ದರು. ಆದರೆ ಕೆಲಸದ ಒತ್ತಡ ಮಾತ್ರ ಕಡಿಮೆಯಾಗಿರಲಿಲ್ಲ. ಇದೀಗ ಅಣ್ಣಾಮಲೈ ಹೊಸ ಆದೇಶ ನೀಡಿದ್ದಾರೆ.