ಬಿಐಎಎಲ್ ನಿರ್ಬಂಧವಿದ್ದರೂ ಬೆಂಗಳೂರು 2ನೇ ಏರ್‌ಪೋರ್ಟ್‌ ನಿರ್ಮಾಣ ಪ್ರಕ್ರಿಯೆ ಆರಂಭ: ಎಂ.ಬಿ. ಪಾಟೀಲ

Published : Dec 19, 2025, 03:59 PM IST
Bengaluru Second Airport

ಸಾರಾಂಶ

ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ 2033ರವರೆಗಿನ ಅಡ್ಡಿಯಿದ್ದರೂ, ಸರ್ಕಾರ ದೂರದೃಷ್ಟಿಯಿಂದ ಈಗಲೇ ಸಿದ್ಧತೆ ಆರಂಭಿಸಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ. ಸ್ಥಳದ ಆಯ್ಕೆ, ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ವರದಿಗಾಗಿ ಟೆಂಡರ್ ಕರೆಯಲಾಗಿದೆ.

ಬೆಂಗಳೂರು (ಡಿ.19): ರಾಜ್ಯ ರಾಜಧಾನಿಯ ಸಮೀಪ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು 'ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್'ನ (ಬಿಐಎಎಲ್) ಅನುಮತಿ ಬೇಕೆನ್ನುವುದು ನಮ್ಮ ಅರಿವಿನಲ್ಲಿದೆ. ಇದಕ್ಕೆ 2033ರವರೆಗೂ ಕಾಲಾವಕಾಶವಿದೆ. ಹೀಗಾಗಿಯೇ, ದೂರದೃಷ್ಟಿ ಇಟ್ಟುಕೊಂಡು ಈಗಿನಿಂದಲೇ ಉಳಿದ ಕೆಲಸಗಳನ್ನು ನಾವು ಆರಂಭಿಸಿದ್ದೇವೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಶುಕ್ರವಾರ ಹೇಳಿದ್ದಾರೆ.

ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕುರಿತು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ದೇವನಹಳ್ಳಿಯ ಸಮೀಪದಲ್ಲಿ ಈಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಕ್ರಿಯವಾಗಿದೆ. ಇದು ಆರಂಭವಾಗುವಾಗಲೇ 2033ರವರೆಗೂ 150 ಕಿ.ಮೀ. ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಬಾರದೆಂಬ ಷರತ್ತು ಇದೆ. ಏತನ್ಮಧ್ಯೆ ಹೊಸದೆಹಲಿ ಮತ್ತು ನವೀ ಮುಂಬೈಗಳಲ್ಲಿ ಇಂತಹ ಷರತ್ತುಗಳನ್ನು ಸಡಿಲಿಸಿ, ಎರಡನೆಯ ಏರ್ಪೋರ್ಟುಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನು ಸಂದರ್ಭ ನೋಡಿಕೊಂಡು ಬಗೆಹರಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಮಗೂ ಸಡಿಲಿಕೆ ಸಿಗಬಹುದು

ಒಂದು ವಿಮಾನ ನಿಲ್ದಾಣ ಬರಬೇಕೆಂದರೆ ಸ್ಥಳದ ಆಯ್ಕೆ, ಅದರ ಪರಿಶೀಲನೆ, ಭೂಸ್ವಾಧೀನ, ಪರಿಹಾರ ವಿತರಣೆ ಮುಂತಾದ ಅಂಶಗಳು ಮುಖ್ಯವಾಗುತ್ತವೆ. ಇವೆಲ್ಲವನ್ನೂ ಮುಗಿಸಿಕೊಳ್ಳಲು ಏನಿಲ್ಲವೆಂದರೂ ಐದಾರು ವರ್ಷಗಳು ಬೇಕಾಗುತ್ತವೆ. ಬಿಐಎಎಲ್ ಅನುಮತಿ ಬೇಕಾಗುವುದು ಇವೆಲ್ಲ ಮುಗಿದ ಮೇಲಷ್ಟೆ. ಹೀಗಾಗಿಯೇ ಈಗ ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್ಐಐಡಿಸಿ) ಮೂಲಕ ಸ್ಥಳದ ಅನುಕೂಲ, ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ವರದಿಯ ಉದ್ದೇಶಕ್ಕಾಗಿ ಟೆಂಡರ್ ಕರೆಯಲಾಗಿದೆ ಎಂದು ವಿವರಿಸಿದ್ದಾರೆ.

ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಲು 5 ತಿಂಗಳ ಕಾಲಾವಕಾಶ ಕೊಡಲಾಗುವುದು. ಇದನ್ನು ಸಿದ್ಧಪಡಿಸುವಾಗ ಪ್ರಯಾಣಿಕರ ದಟ್ಟಣೆ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಇರುವ ಅವಕಾಶ, ಮೂಲಸೌಕರ್ಯ, ಭೌಗೋಳಿಕ ಲಕ್ಷಣಗಳು, ಮಳೆಯ ಪ್ರಮಾಣ, ಒಳಚರಂಡಿ, ಶಬ್ದ ಮಾಲಿನ್ಯ, ತ್ಯಾಜ್ಯ ನಿರ್ವಹಣೆ ಮುಂತಾದ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಇದೇನೇ ಇದ್ದರೂ ಬೆಂಗಳೂರಿಗೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಗತ್ಯವಿದೆ ಎಂಬುದನ್ನು ಸರಕಾರ ಮನಗಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕನಕಪುರ ರಸ್ತೆಯಲ್ಲಿರುವ ಚೂಡಹಳ್ಳಿ ಮತ್ತು ಸೋಮನಹಳ್ಳಿ ಹಾಗೂ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಇರುವ ಮತ್ತೊಂದು ಸ್ಥಳವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉನ್ನತ ತಂಡ ಪರಿಶೀಲಿಸಿ, ತನ್ನ ವರದಿಯನ್ನು ನಮಗೆ ನೀಡಿದೆ. ಇದಾದ ನಂತರವೇ ಈಗ ಟೆಂಡರ್ ಆಹ್ವಾನಿಸಲಾಗಿದೆ ಎಂದು ಪಾಟೀಲ ಹೇಳಿದ್ದಾರೆ.

PREV
Read more Articles on
click me!

Recommended Stories

Aindrita Ray: ಉಸಿರಾಟದ ಸಮಸ್ಯೆ ಆಗ್ತಿದೆ, ಕಾಪಾಡಿ ಎಂದ್ರೂ ಬಿಬಿಎಂಪಿ ಸಹಾಯವಾಣಿ ಗಪ್​ಚುಪ್​! ನಟಿ ಗರಂ
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌, ಕಾರ್ಯಸಾಧ್ಯತಾ ವರದಿ ಬಗ್ಗೆ ಕರ್ನಾಟಕ ಪ್ರತಿಕ್ರಿಯೆ ನೀಡಿಲ್ಲ ಎಂದ ಕೇಂದ್ರ!